ಜಯಲಲಿತಾರನ್ನು ಸಿಎಂ ಸ್ಥಾನದಿಂದ ಇಳಿಸಲು ಕರ್ನಾಟಕದ ಮನವಿ
ಬೆಂಗಳೂರು, ಜೂ.24 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯಲ್ಲಿ ಕರ್ನಾಟಕ ಎರಡು ಮನವಿಗಳನ್ನು ಮಾಡಿದೆ.
ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂಬುದು ಮೊದಲ ಮನವಿಯಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಬೇಕು ಎಂಬುದು ಎರಡನೇ ಮನವಿಯಾಗಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ. [ಜಯಾ ಕೇಸ್, ಕರ್ನಾಟಕದಿಂದ ಮೇಲ್ಮನವಿ ಸಲ್ಲಿಕೆ]

ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ 4 ವರ್ಷದ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡವನ್ನು ವಿಧಿಸಿತ್ತು. ಈ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರ ಮಧ್ಯಂತರ ಮನವಿ ಮಾಡಿದೆ. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದರೆ ಜಯಲಲಿತಾ ಅವರು ಸಿಎಂ ಸ್ಥಾನಕ್ಕೆ ಪುನಃ ರಾಜೀನಾಮೆ ನೀಡಬೇಕಾಗುತ್ತದೆ. [ಜಯಾ ಪ್ರಕರಣ: ಸರ್ಕಾರದಿಂದ 4 ಸಾವಿರ ಪುಟಗಳ ಅಪೀಲ್]
ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಗೊಂಡಾಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಯಲಲಿತಾ ಅವರು ಹೈಕೋರ್ಟ್ನಿಂದ ಖುಲಾಸೆಗೊಂಡ ಬಳಿಕ ಪುನಃ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯುವ ತನಕ ವಿಶೇಷ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ಮನವಿ ಮಾಡಿದೆ. [ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು 7 ಕಾರಣಗಳು!]
ತೀರ್ಪು ವಜಾಗೊಳಿಸಿ : ಜೆ.ಜಯಲಲಿತಾ ಅವರು ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ 2015ರ ಮೇ 11ರಂದು ತೀರ್ಪು ನೀಡಿದ್ದರು. ಈ ತೀರ್ಪನ್ನು ವಜಾಗೊಳಿಸಿ ಎಂಬುದು ಕರ್ನಾಟಕ ಸರ್ಕಾರದ ಎರಡನೇ ಮನವಿಯಾಗಿದೆ.[ಜಯಲಲಿತಾ ಪ್ರಕರಣ Timeline]
2014ರ ಸೆ. 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಕುನ್ಹ ಅವರು, ಜಯಲಲಿತಾ, ವಿ.ಕೆ.ಶಶಿಕಲಾ, ಜೆ.ಇಳವರಸಿ ಮತ್ತು ವಿ.ಎನ್.ಸುಧಾಕರನ್ ತಪ್ಪಿತಸ್ಥರು ಎಂದು ಆದೇಶ ನೀಡಿದ್ದರು. ಜಯಲಲಿತಾ ಅವರಿಗೆ 100 ಕೋಟಿ ಹಾಗೂ ಇತರರಿಗೆ ತಲಾ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.











Click it and Unblock the Notifications