ಡೀಸೆಲ್ ಸಗಟು ಖರೀದಿ ದರ ಹೆಚ್ಳಳದಿಂದ ಸಾರಿಗೆ ನಿಗಮಗಳಿಗೆ ಹೊರೆ: ಸಹಾಯ ಧನಕ್ಕೆ ಮನವಿ
ಬೆಂಗಳೂರು, ಮಾ. 22: ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿ ದರ ಹೆಚ್ಚಳವಾಗಿದ್ದು, ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ನಷ್ಟದಿಂದ ಪಾರು ಮಾಡುವಂತೆ ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿವೆ.
ಸರ್ಕಾರ ಸಹಾಯ ಧನ ಕೊಟ್ಟು ಸಾರಿಗೆ ನಿಗಮಗಳನ್ನು ರಕ್ಷಿಸಬೇಕು, ಇಲ್ಲವೇ ಟಿಕೆಟ್ ದರ ಹೆಚ್ಚಿಸಿ ಸರಿದೂಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಡೀಸೆಲ್ ಸಗಟು ಮಾರಾಟ ದರ ಹೆಚ್ಚಳದಿಂದ ಆಗುತ್ತಿರುವ ಹೊರೆಯನ್ನು ಟಿಕೆಟ್ ದರ ಹೆಚ್ಚಳದಿಂದ ಸರಿದೂಗಿಸಲು ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೊರೊನಾ ಸಂಕಷ್ಟದಿಂದ ಜನ ತತ್ತರಿಸಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಈ ಹಂತದಲ್ಲಿ ಟಿಕೆಟ್ ದರ ಹೆಚ್ಚಿಸಿದರೆ, ಸರ್ಕಾರದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಬಹುದು. ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಸರ್ಕಾರವೇ ತಮಿಳುನಾಡು ಮಾದರಿಯಲ್ಲಿ ಸಹಾಯಧನ ನೀಡುವ ಬಗ್ಗೆ ಪ್ರಸ್ತಾಪ ಸಲ್ಲಿಸಿದೆ. ಈಗಾಗಲೇ ಸಂಪನ್ಮೂಲ ಕ್ರೋಢೀಕರಣ ಇಲ್ಲದೇ ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರ ಸಹಾಯ ಧನ ನೀಡಿ ಸಾರಿಗೆ ಸಂಸ್ಥೆಗಳನ್ನು ರಕ್ಷಣೆ ಮಾಡುತ್ತೋ ಇಲ್ಲವೇ ಟಿಕೆಟ್ ದರ ಹೆಚ್ಚಿಸಿ ನಷ್ಟ ಸರಿ ದೂಗಿಸಲು ಸಲಹೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿ ದರ ಹೆಚ್ಚಳವಾಗಿದ್ದು, ಮೊದಲೇ ನಷ್ಟದಲ್ಲಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ನಿಗಮಗಳು ದಿನಕ್ಕೆ 2 ಕೋಟಿ ರೂ.ಗೂ ಅಧಿಕ ಮೊತ್ತ ಹೊರೆಯಾಗುತ್ತಿದೆ.
ಸಾರಿಗೆ ಸಂಸ್ಥೆಗೆ ದಿನಕ್ಕೆ ಎಷ್ಟು ಲೀಟರ್ ಡೀಸೆಲ್ ಅಗತ್ಯ?
ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ, ಕೆಎಸ್ಆರ್ಟಿಸಿಗೆ ದಿನಕ್ಕೆ 5.30 ಲಕ್ಷ ಲೀಟರ್ ಡೀಸೆಲ್ ಬೇಕು. ಅದೇ ರೀತಿ ಬಿಎಂಟಿಸಿ ಹಾಗೂ ಎನ್ ಡಬ್ಲೂಕೆಎಸ್ ಆರ್ಟಿಸಿಗೆ 2.82 ಲಕ್ಷ ಲೀಟರ್, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2.5 ಲಕ್ಷ ಲೀಟರ್ ಡೀಸೆಲ್ ಬೇಕಾಗುಗುತ್ತದೆ. ಕೆಎಸ್ಆರ್ಟಿಸಿ ದಿನದ ಆದಾಯ ಏಳು ಕೋಟಿ ರೂ. ಇದ್ದರೆ ಬಸ್ಗಳಲ್ಲಿ ಸುಡುವ ಡೀಸೆಲ್ ಗಾಗಿ ಐದು ಕೋಟಿ ವೆಚ್ಚವಾಗುತ್ತಿತ್ತು. ಇದೀಗ ಡೀಸೆಲ್ ಸಗಟು ಮಾರಾಟ ದರ ಹೆಚ್ಚಳದಿಂದ ದಿನಕ್ಕೆ ಹೆಚ್ಚುವರಿ 86 ಲಕ್ಷ ರೂ. ಹೊರೆ ಬೀಳುತ್ತಿದೆ.

ಬಿಎಂಟಿಸಿ ನಿತ್ಯ ಆದಾಯ 3.1 ಕೋಟಿ ರೂ, ಅಗಿದ್ದು, ಡೀಸೆಲ್ ಗೆ 2 ಕೋಟಿ ರೂ. ಅಧಿಕ ಮೊತ್ತ ಡೀಸೆಲ್ ಗೆ ವ್ಯಯ ಮಾಡಬೇಕಿತ್ತು. ಇದೀಗ ಹೆಚ್ಚುವರಿ 35 ಲಕ್ಷ ರೂ. ಹೊರೆ ಬೀಳುತ್ತಿದೆ. ಅದೇ ರೀತಿ ಎನ್ ಡಬ್ಲೂ ಎಸ್ಆರ್ ಟಿಸಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳು ಪ್ರತಿ ದಿನ ಹೆಚ್ಚುವರಿಯಾಗಿ ಸರಾಸರಿ 40 ಲಕ್ಷ ರೂ.ಗೂ ಅಧಿಕ ಮೊತ್ತ ಇಂಧನಕ್ಕಾಗಿ ವ್ಯಯಿಸಬೇಕಾಗಿದೆ. ಈ ನಷ್ಟದಿಂದ ಪಾರು ಮಾಡುವಂತೆ ನಾಲ್ಕು ಸಾರಿಗೆ ನಿಗಮಗಳು ಸರ್ಕಾರದ ಕದ ತಟ್ಟಿವೆ.
ಸಾರಿಗೆ ನಿಗಮಗಳನ್ನು ನಿರ್ವಹಣೆ ಕಷ್ಟಕರ:
ಸಹಾಯ ಧನ ಕೊಟ್ಟು ಸಾರಿಗೆ ನಿಗಮಗಳ ನಷ್ಟ ಸರಿ ದೂಗಿಸಿದರೆ, ಇದೇ ಪ್ರವೃತ್ತಿ ಬೆಳೆದು ಬಂದರೆ ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಲಿದೆ. ಹೀಗಾಗಿ ಕನಿಷ್ಠ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪದ ಬಗ್ಗೆಯೂ ಸರ್ಕಾರ ಚಿಂತನೆ ನಡೆದಿದೆ ಎಂದೇ ಹೇಳಲಾಗುತ್ತಿದೆ.

ಡೀಸೆಲ್ ಖರೀದಿ ದರ ಸಾರಿಗೆ ನಿಗಮಗಳಿಗೆ ಹೊರೆಯಾಗಿ ಪರಿಣಮಿಸಿದೆ. ತಮಿಳುನಾಡಿನಲ್ಲಿ ಈ ಹೆಚ್ಚುವರಿ ಮೊತ್ತವನ್ನು ಸರ್ಕಾರ ಸಹಾಯ ಧನ ರೂಪದಲ್ಲಿ ಸಾರಿಗೆ ಸಂಸ್ಥೆಗಳಿಗೆ ನೀಡುತ್ತಿದೆ. ಅದೇ ರೀತಿ ನೆರವು ನೀಡಬೇಕು ಎಂದು ಸರ್ಕಾರವನ್ನು ಕೇಳಿದ್ದೇವೆ. ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದ್ದು, ಸದ್ಯದ ಮಟ್ಟಿಗೆ ಟಿಕೆಟ್ ದರ ಹೆಚ್ಚಳ ಮಾಡಿ ಹೊರೆ ಸರಿದೂದೂಗಿಸುವ ಆಲೋಚನೆ ಮಾಡಿಲ್ಲ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಸಾರಿಗೆ ನಿಗಮಗಳ ನಷ್ಟ ತುರ್ತು ಸರಿದೂಗಿಸುವ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಸಹಾಯ ಧನ ಕೊಟ್ಟು ರಕ್ಷಣೆ ಮಾಡುತ್ತೋ ಇಲ್ಲವೇ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಒಂದು ವೇಳೆ ಟಿಕೆಟ್ ದರ ಹೆಚ್ಚಿಸುವ ಅನಿವಾರ್ಯತೆಗೆ ಬಿದ್ದರೆ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.












Click it and Unblock the Notifications