ಕಾಸಿಯಾ ಆಡಳಿತಾಧಿಕಾರಿಯಾಗಿ ಪಿ.ಶಶಿಧರ್ ನೇಮಿಸಿ ಸರಕಾರ ಆದೇಶ
ಬೆಂಗಳೂರು, ಆಗಸ್ಟ್ 13: ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘಕ್ಕೆ (ಕಾಸಿಯಾ) ಆಡಳಿತಾಧಿಕಾರಿಯನ್ನಾಗಿ ಪಿ. ಶಶಿಧರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯ ಈ ಆದೇಶದನ್ವಯ ಸರಕಾರ ಈ ನೇಮಕಾತಿ ಮಾಡಿದೆ.
ಸಂಘದ ಮಾಜಿ ಆಡಳಿತ ಮಂಡಳಿ ಸದಸ್ಯರಾಗಿದ್ದ ಶ್ರೀಪ್ರಕಾಶ ಅವರು ಕಾಸಿಯಾದಲ್ಲಿ, ಪದಾಧಿಕಾರಿ ಚುನಾವಣೆ, ಆರ್ಥಿಕ ಅವ್ಯವಹಾರ ಸೇರಿದಂತೆ, ಹಲವು ವಿಚಾರಗಳ ಬಗ್ಗೆ ದೂರು ನೀಡಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಶ್ರೀಪ್ರಕಾಶ ಅವರ ಅರ್ಜಿಯನ್ನು ಪುರಷ್ಕರಿಸಿ ಆದೇಶ ಹೊರಡಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಕಾಸಿಯಾದಲ್ಲಿ ಪದಾಧಿಕಾರಿಗಳ ಚುನಾವಣೆ ನಡೆದಿರಲಿಲ್ಲ. ಹಣಕಾಸಿನ ವಿಚಾರದಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಹೈಕೋರ್ಟ್ ಇದೇ ಜೂನ್ 22ರಂದು ಆದೇಶವನ್ನು ನೀಡಿತ್ತು.

ಆದೇಶದ ಅನ್ವಯ ರಾಜ್ಯ ಸಹಕಾರ ಇಲಾಖೆ, ಇದೇ ಆಗಸ್ಟ್ ಹನ್ನೊಂದರಂದು, ಬೆಂಗಳೂರು ಒಂದನೇ ವಲಯದ ಸಹಕಾರ ಸಂಘಗಳ ಉಪ ನಿಬಂಧಕರಾದ ಶಶಿಧರ್ ಅವರನ್ನು ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಆಡಳಿತಾಧಿಕಾರಿ ನೇಮಕದ ನಂತರ, ಮುಂದಿನ ಆರು ತಿಂಗಳಲ್ಲಿ, ಕಾಸಿಯಾದ ಅವ್ಯವಸ್ಥೆಗಳನ್ನು ಸರಿಪಡಿಸಿ, ಹೊಸದಾಗಿ ಚುನಾವಣೆ ನಡೆಸಿ, ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡುವ ಜವಾಬ್ದಾರಿ ನೂತನ ಆಡಳಿತಾಧಿಕಾರಿಯವರ ಮೇಲಿದೆ.
ಡಿಸೆಂಬರ್ 2020ರಂದು ಕೋವಿಡ್ ನಿರ್ಬಂಧಗಳನ್ನು ತೆಗೆಯಲಾಗಿತ್ತು. ಇದಾದ ನಂತರ ಸಭೆ ಕರೆದು ಚುನಾವಣೆ ನಡೆಸಲು ಅವಕಾಶವಿದ್ದವು. ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರದ ಅವಧಿ ಜೂನ್ 30, 2020ಕ್ಕೇ ಮುಗಿದಿತ್ತು. ಅಧಿಕಾರದ ಅವಧಿ ಮುಗಿದಿದ್ದರೂ ಕಾರ್ಯಕಾರಿ ಸಮಿತಿ ಅಧಿಕಾರದಲ್ಲಿ ಮುಂದುವರಿದಿತ್ತು ಎಂದು ಶ್ರೀಪ್ರಕಾಶ ಅವರು ದೂರು ಸಲ್ಲಿಸಿದ್ದರು.












Click it and Unblock the Notifications