ಪ್ರೀತಂ ಗೌಡ ಬಾಣಲೆಯಿಂದ ಬೆಂಕಿಗೆ: ದೇವೇಗೌಡ್ರನ್ನು ಭೇಟಿಯಾದ ಬೊಮ್ಮಾಯಿ, ಈಗ ಸಿ.ಟಿ.ರವಿ
ರಾಜಕೀಯ ಎಂದ ಮೇಲೆ ಅದರಲ್ಲಿ ಪರವಿರೋಧ ಇದ್ದಿದ್ದೇ, ಆದರೆ ಕೆಲವೊಮ್ಮೆ ಆ ಗಡಿಯನ್ನು ದಾಟಿ ನಡೆದು ಕೊಳ್ಳಬೇಕಾಗಿದೆ. ಮುಖ್ಯಮಂತ್ರಿಯಾದ ನಂತರ ಬಸವರಾಜ ಬೊಮ್ಮಾಯಿಯವರು ಜೆಡಿಎಸ್ ವರಿಷ್ಠ ದೇವೇಗೌಡ್ರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದರು.
ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ, ಅವರು ಮಾಜಿ ಪ್ರಧಾನಿಗಳು, ನಮ್ಮ ರಾಜ್ಯದ ಹಿರಿಯ ಮುಖಂಡರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೂ, ಇದು ಬಿಜೆಪಿಯ ಕೆಲವು ಮುಖಂಡರಿಗೆ ಇದು ಸಖ್ಯವಾಗಿರಲಿಲ್ಲ.
ಹಾಸನದ ಯುವ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಸಿಎಂ ಬೊಮ್ಮಾಯಿಯವರು ಗೌಡ್ರನ್ನು ಭೇಟಿಯಾಗಿದ್ದು ಸರಿಯಲ್ಲ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತ ಪಡಿಸಿದ್ದರು. ನಮ್ಮ ಕಾರ್ಯಕರ್ತರಿಗೆ ಏನು ಉತ್ತರ ಹೇಳೋಣ ಎಂದು ಬೇಸರ ವ್ಯಕ್ತ ಪಡಿಸಿದ್ದರು.
ಈಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ದೇವೇಗೌಡ್ರನ್ನು ಭೇಟಿಯಾಗಿದ್ದಾರೆ. ಅವರ ಅಪಾರ ರಾಜಕೀಯ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ. ಇವರ ಪೋಸ್ಟ್ ವೈರಲ್ ಆಗಿದೆ ಕೂಡಾ.

ಗೌಡ್ರ ನಿವಾಸಕ್ಕೆ ಭೇಟಿ ನೀಡಿದ್ದು ಬಿಜೆಪಿಯ ಅಸಂಖ್ಯಾತ ಕಾರ್ಯಕರ್ತರಿಗೆ ನೋವಾಗಿದೆ
"ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿಯವರು ಹಿಂದೆ ರಾಜ್ಯದ ಸಿಎಂ ಆಗಿದ್ದಾಗ, ಅವರ ಸರಕಾರವನ್ನು ಉರುಳಿಸಿದ್ದು ದೇವೇಗೌಡ್ರು. ಈಗ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಬಿಜೆಪಿಯ ಅಸಂಖ್ಯಾತ ಕಾರ್ಯಕರ್ತರಿಗೆ ನೋವಾಗಿದೆ, ಕ್ಷೇತ್ರದಲ್ಲಿ (ಹಾಸನ) ಪ್ರತೀದಿನ ಜೆಡಿಎಸ್ ಕಾರ್ಯಕರ್ತರನ್ನು ಎದುರಿಸುವವರು ನಾವು. ಅವರಿಗೆ ಏನು ಉತ್ತರ ಹೇಳೋಣ"ಎಂದು ಹಾಸನ ಶಾಸಕ ಪ್ರೀತಂ ಗೌಡ ಆಕ್ರೋಶ ವ್ಯಕ್ತ ಪಡಿಸಿದ್ದರು.

ದೇವೇಗೌಡ್ರು ಮತ್ತು ಯಡಿಯೂರಪ್ಪ ಈ ರಾಜ್ಯದ ಮಹಾನ್ ನಾಯಕರು, ಕೆ.ಎಸ್.ಈಶ್ವರಪ್ಪ
ಪ್ರೀತಂ ಗೌಡ ಅವರ ಹೇಳಿಕೆಗೆ ಬಿಜೆಪಿಯ ಹಿರಿಯ ಮುಖಂಡರೇ ಆಕ್ಷೇಪ ವ್ಯಕ್ತ ಪಡಿಸಿದ್ದರು. ಕೆಲವು ದಿನಗಳ ಹಿಂದೆ, ದೇವೇಗೌಡ್ರು ಮತ್ತು ಯಡಿಯೂರಪ್ಪ ಈ ರಾಜ್ಯದ ಮಹಾನ್ ನಾಯಕರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಪ್ರೀತಂ ಗೌಡ ಆಕ್ಷೇಪಣೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, "ನಮ್ಮ ಯುವ ಶಾಸಕನನ್ನು ಕರೆದು ಮಾತನಾಡಿಸುತ್ತೇನೆ. ಎಲ್ಲಾ ಗೊಂದಲ ತಿಳಿಗೊಳಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರವರನ್ನು ಭೇಟಿಯಾಗಿದ್ದೆ
ಈಗ, ಸಿ.ಟಿ.ರವಿಯವರು ದೇವೇಗೌಡ್ರನ್ನು ಭೇಟಿಯಾಗಿದ್ದಾರೆ. ಇದು ರಾಜಕೀಯಕ್ಕೆ ಸಂಬಂಧವಿಲ್ಲದ ಭೇಟಿ ಎಂದು ರವಿ ಸ್ಪಷ್ಟ ಪಡಿಸಿದ್ದಾರೆ. "ನನ್ನ ಪಿಎಚ್ಡಿ ಪ್ರಬಂಧದ ಭಾಗವಾಗಿ, ನವದೆಹಲಿಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರವರನ್ನು ಭೇಟಿಯಾಗಿದ್ದೆ. 88ನೇ ವಯಸ್ಸಿನಲ್ಲಿ ಗೌಡರ ಉತ್ಸಾಹವನ್ನು ಮೆಚ್ಚಬೇಕು. ಭಾರತೀಯ ರಾಜಕೀಯದ ಬಗ್ಗೆ ಅವರ ಜ್ಞಾನ ಮತ್ತು ಅನುಭವ ಅದ್ಭುತವಾಗಿದೆ. ನಿಮ್ಮ ಅನುಭವವನ್ನು ಹಂಚಿಕೊಂಡ ಗೌಡರೇ ನಿಮಗೆ ಧನ್ಯವಾದಗಳು" ಎಂದು ಸಿ.ಟಿ.ರವಿ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
Recommended Video

ಪ್ರೀತಂ ಗೌಡ ಅವರನ್ನು ಸಚಿವ ವಿ.ಸೋಮಣ್ಣ ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ
ದೇವೇಗೌಡ್ರನ್ನು ಭೇಟಿಯಾಗಿದ್ದಕ್ಕೆ ಟೀಕಿಸಿದ್ದ ಪ್ರೀತಂ ಗೌಡ ಅವರನ್ನು ಸಚಿವ ವಿ.ಸೋಮಣ್ಣ ಕೂಡಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸನದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ರಾಜಕೀಯ ಮೇಲಾಟ ಇರುವುದು ಒಪ್ಪಿಕೊಳ್ಳುವ ವಿಚಾರ. ಅದಕ್ಕಾಗಿ, ಪ್ರೀತಂ ಗೌಡ ಆಕ್ರೋಶ ವ್ಯಕ್ತ ಪಡಿಸಿರಬಹುದು. ಈಗ, ಬೊಮ್ಮಾಯಿ ನಂತರ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೇ ಗೌಡ್ರನ್ನು ಭೇಟಿಯಾಗಿದ್ದಾರೆ. ಅಲ್ಲಿಗೆ, ಪ್ರೀತಂ ಗೌಡ ಅವರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.












Click it and Unblock the Notifications