ಕೊರೊನಾ ಉಲ್ಬಣ: ಆನ್ಲೈನ್ ಮುಂದುವರಿಸಲು ಶಿಕ್ಷಣ ಇಲಾಖೆ ಚಿಂತನೆ
ಬೆಂಗಳೂರು, ಜ. 12: ಕೊರೊನಾ ಸೋಂಕು ಹೆಚ್ಚುತ್ತಿರುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1 ರಿಂದ 9 ನೇ ತರಗತಿ ವರೆಗಿನ ಭೌತಿಕ ತರಗತಿ ರದ್ದು ಮಾಡಿ, ಕೇವಲ ಆನ್ಲೈನ್ ಗೆ ಅವಕಾಶ ಕೊಡಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಶಾಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಲ್ಲಿ ಆ ಶಾಲೆ ವಾರದ ಮಟ್ಟಿಗೆ ಬಂದ್ ಮಾಡುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕೊರೊನಾ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಉಪ ನಿರ್ದೇಶಕರನ್ನು ಒಳಗೊಂಡ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಶಾಲೆಗಳನ್ನು ಬಂದ್ ಮಾಡಬೇಕೇ ? ಇಲ್ಲವೇ ಸುರಕ್ಷಿತ ನಿಯಮ ಪಾಲನೆ ಮೂಲಕ ಮುಂದುವರೆಸಬೇಕಾ? ಎಂಬುದರ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಇದೀಗ ಎರಡನೇ ಹಂತದ ಸಭೆಯಲ್ಲಿ ಬಿಇಓ ಮತ್ತು ಜಿಲ್ಲಾ ಉಪ ನಿರ್ದೇಶಕರು ಭಾಗಿಯಾಗಿ ಚರ್ಚೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಶಾಲೆಗಳನ್ನು ಯಥಾ ಸ್ಥಿತಿ ಮುಂದುವರೆಸುವ ಬಗ್ಗೆ ಪೋಷಕರಿಂದ ಬರುತ್ತಿರುವ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಗಳು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯಾವುದಾದರೂ ಶಾಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ದಾಖಲಾದರೆ ಒಂದು ವಾರ ಮಟ್ಟಿಗೆ ಆ ಶಾಲೆಯನ್ನು ಬಂದ್ ಮಾಡಬೇಕು. ಇನ್ನು ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡರೆ, ವಲಯವಾರು ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಶಿಕ್ಷಣ ಇಲಾಖೆ ಏನೇ ಶಿಫಾರಸು ಮಾಡಿದರೂ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಕೊರೊನಾ ಸೋಂಕಿತ ಪ್ರಕರಣಗಳು ಇದೇ ರೀತಿ ಉಲ್ಬಣಿಸಿ ಲಾಕ್ ಡೌನ್ ಘೋಷಣೆ ಮಾಡಿದರೆ ಶಾಲೆಗಳು ಸ್ಥಗಿತಗೊಳ್ಳಲಿವೆ. ಸದ್ಯದ ಮಟ್ಟಿಗೆ ಇರುವ ವ್ಯವಸ್ಥೆಯಂತೆ 1 ನೇ ತರಗತಿಯಿಂದ 9 ನೇ ತರಗತಿ ವರೆಗಿನ ವರೆಗೆ ಭೌತಿಕ ತರಗತಿ ರದ್ದು ಮಾಡಲಾಗಿದೆ. ಇದನ್ನು ಜ. 16 ರ ಬಳಿಕವೂ ವಿಸ್ತರಣೆ ಮಾಡಲು ಗಂಭೀರ ಚಿಂತನೆ ನಡೆದಿದೆ.
ವಿದ್ಯಾಗಮ ಪುನರ್ ಜಾರಿಗೆ ಚಿಂತನೆ:
ಪರ್ಯಾಯವಾಗಿ ಆನ್ಲೈನ್ ಮತ್ತು ವಿದ್ಯಾಗಮ ಅಡಿ ಪಾಠ ಮಾಡುವ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಸಭೆಯ ನಡಾವಳಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ.

Recommended Video
ಇನ್ನ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕೊರೊನಾ ಸೋಂಕು ಹೆಚ್ಚುತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ಮುಂದುವರೆಸುವ, ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಶಾಲೆಗೆ ಅವಕಾಶ ಕೊಡುವ ಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸದ್ಯದ ಮಟ್ಟಿಗೆ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಮಕ್ಕಳಿಗೆ ಭೌತಿಕ ತರಗತಿ ಮುಂದುವರೆಯಲಿದೆ. ಉಳಿದಂತೆ 1 ರಿಂದ 9 ನೇ ತರಗತಿ ವರೆಗಿನ ಮಕ್ಕಳಿಗೆ ಭೌತಿಕ ತರಗತಿ ರದ್ದು ಮಾಡಿದ್ದು, ಸಭೆಯ ವಾಸ್ತವಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. ಎರಡನೇ ಹಂತದ ಸಭೆಯ ಬಳಿಕ ಶಿಕ್ಷಣ ಇಲಾಖೆಯ ಅಸಲಿ ನಿಲುವು ಗೊತ್ತಾಗಲಿದೆ.











Click it and Unblock the Notifications