Get Updates
Get notified of breaking news, exclusive insights, and must-see stories!

ಸಂಪಾದಕೀಯ: ಲಂಚವೆಂಬ ರೋಗವೂ ಸಾಮಾನ್ಯ ಎನಿಸಿಕೊಂಡರೆ ಔಷಧಿ ಕೊಡುವವರು ಯಾರು

ಸಂಪಾದಕೀಯ: ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್ ಒಬ್ಬರು ವಿಕಾರವಾಗಿ ಕಿರುಚುವ ವಿಡಿಯೊ ವೈರಲ್ ಆಗಿತ್ತು. ಕೆ.ಪಿ.ಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್ ಗೋವಿಂದರಾಜು ಆ ವಿಡಿಯೊದಲ್ಲಿದ್ದರು. ಹಿನ್ನೆಲೆ ಏನೆಂದು ತಿಳಿಯದವರು ವಿಡಿಯೊ ನೋಡಿದ್ದರೆ ಸಾರ್ವಜನಿಕರನ್ನು ರಕ್ಷಿಸಲು ಯತ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಅಪಾಯದಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಾಗಿತ್ತು. ನಂತರದ ಸ್ವಲ್ಪಹೊತ್ತಿಗೆ ಬಹಿರಂಗವಾದ ಮಾಹಿತಿಯಲ್ಲಿ ದೂರುದಾರರು ಮತ್ತು ಆರೋಪಿತರಿಬ್ಬರಿಂದಲೂ ಹಣ ವಸೂಲು ಮಾಡುವಲ್ಲಿ ಇವರು ಪರಿಣಿತರೆಂಬ ಮಾಹಿತಿಯೂ ಇತ್ತು.

ಈ ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್ ಆರೋಪ ಆಂದೋಲನ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿ ಹಿಡಿಯುವಂತೆ ಡ್ರಗ್ಸ್‌ ಕಾರ್ಖಾನೆಗಳು ಪತ್ತೆಯಾಗಿವೆ. ಪೊಲೀಸರೇ ಲಂಚ ಪಡೆದ, ಕಳ್ಳತನ ಮಾಡಿದ ಪ್ರಕರಣಗಳು ವರದಿಯಾಗುತ್ತಿವೆ.

Corruption in Karnataka

ಮೈಸೂರು ಮುಡಾ ಹಗರಣ, ದುಬಾರಿ ವಾಚ್ ವಿವಾದ ಹೊರತುಪಡಿಸಿದರೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಮೇಲೆ ದೊಡ್ಡಮಟ್ಟದ ಹಗರಣದ ಆರೋಪಗಳು ಇಲ್ಲ. ಆದರೆ ಅವರದೇ ಪಕ್ಷದ ಇತರರು, ಜನರ ಪಾಲಿಗೆ ಸರ್ಕಾರವೇ ಆಗಿರುವ ಅಧಿಕಾರಿಗಳ ಬಗ್ಗೆ ಹೀಗೆ ಅಂದುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಕರ್ನಾಟಕದ ಶೇ 90 ರಷ್ಟು ಜನರು 'ಇಲ್ಲ' ಎನ್ನುವ ಒಂದೇ ಪದದ ಉತ್ತರ ಕೊಟ್ಟಾರು. ಇಂಥ ಇಲಾಖೆ ಅಥವಾ ಇಂಥ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಅಥವಾ ಕಡಿಮೆ ಇದೆ ಎನ್ನಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

"ಲಂಚ ತಗೊಂಡ, ಆದರೂ ಕೆಲಸ ಮಾಡಿಕೊಟ್ಟ" ಎಂದು ಸಾರ್ವಜನಿಕರು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಭ್ರಷ್ಟಾಚಾರವು ಯಾವ ಮಟ್ಟಕ್ಕೆ ಹಬ್ಬಿದೆ ಎನ್ನುವುದು ಅಂದಾಜು ಆದೀತು. 'ಕರ್ನಾಟಕದಲ್ಲಿ ಬರ್ತ್‌ ಸರ್ಟಿಫಿಕೇಟ್‌ನಿಂದ ಡೆತ್‌ ಸರ್ಟಿಫಿಕೇಟ್‌ವರೆಗೆ ಲಂಚವಿಲ್ಲದೆ ಏನೂ ಆಗದು' ಎನ್ನುವುದು ಜನರು ತಮ್ಮ ಅಸಹಾಯಕತೆಯನ್ನೇ ಸಾಮಾನ್ಯೀಕರಿಸಿಕೊಂಡಿರುವ ಮತ್ತೊಂದು ನಾಣ್ಣುಡಿ. 'ಮೊದಲಿನಿಂದಲೂ ಲಂಚ, ಭ್ರಷ್ಟಾಚಾರ ಇದ್ದದ್ದೇ. ಆದರೆ ಕಳೆದ ಹತ್ತು ವರ್ಷಗಳಿಂದೀಚೆಗೆ ಇದು ವಿಪರೀತ ಎನ್ನುವಷ್ಟು ಹೆಚ್ಚಾಗಿದೆ' ಎಂದು ಬಹುಕಾಲದಿಂದ ಸರ್ಕಾರದ ಇಲಾಖೆಗಳು, ನಿಗಮಗಳು ಮತ್ತು ಉನ್ನತ ಅಧಿಕಾರಿಗಳ ಒಡನಾಟ ಇರುವವರು ಅಲವತ್ತುಕೊಳ್ಳುತ್ತಾರೆ.

ಇದನ್ನೂ ಓದಿ: ಸಂಪಾದಕೀಯ: ಷೇರುಪೇಟೆಯಲ್ಲಿ ಊಹಾಪೋಹದ ವಹಿವಾಟಿಗೆ ತೆರಿಗೆ ಕಡಿವಾಣ, ಯಥಾಸ್ಥಿತಿ ಕಾಯ್ದುಕೊಂಡ ಸಮತೋಲಿತ ಬಜೆಟ್

ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಹಬ್ಬಿದೆ, ಕಾಡುತ್ತಿದೆ ಎನ್ನುವುದು ಪ್ರತಿದಿನ ಅರಿವಿಗೆ ಬರುತ್ತಿದ್ದರೂ ಯಾಕೆ ಯಾರೊಬ್ಬರೂ ಪ್ರಬಲವಾಗಿ ದನಿ ಎತ್ತುತ್ತಿಲ್ಲ? ಸಂಘಟಿತ ಹೋರಾಟದ ಪ್ರಯತ್ನಗಳು ಕಾಣುತ್ತಿಲ್ಲ? ಈ ಪ್ರಶ್ನೆಗಳನ್ನು ಕೇಳಿಕೊಂಡರೆ ಸಿಗುವ ಮೊದಲ ಉತ್ತರ ಯುವಜನರ ನೀರಸ ಸ್ಪಂದನೆ. ಎರಡನೆಯದು, ಲೋಕಾಯುಕ್ತದಂಥ ಸಂಸ್ಥೆಯ ವಿಶ್ವಾಸಾರ್ಹತೆ, ಅಧಿಕಾರದ ಬಗ್ಗೆಯೂ ಪ್ರಶ್ನೆ ಮೂಡಿಸುವಂತಿರುವ ವಾತಾವರಣ. ಆದರೆ ಆಳಕ್ಕಿಳಿದು ಪರಿಶೀಲಿಸಿದರೆ ಭ್ರಷ್ಟಾಚಾರದ ಸಾಮಾನ್ಯೀಕರಣ, ಲಂಚ ಪಡೆಯುವುದು ಸಹಜ ಎನ್ನುವ ಮನಃಸ್ಥಿತಿ ಸಮಾಜದ ಹೋರಾಟದ ಕೆಚ್ಚನ್ನೆ ಅಡಗಿಸಿಬಿಟ್ಟಿರುವುದು ನಿಜ.

ಯಾವುದು ಅಸಹಜವೋ ಅದು ಎಂದಿಗೂ ಸಹಜವಾಗಬಾರದು, ರೋಗಪೀಡಿತ ದೇಹಕ್ಕೆ ಚಿಕಿತ್ಸೆ ಕೊಡುವ ಪ್ರಯತ್ನವನ್ನೇ ಮಾಡದಿದ್ದರೆ ರೋಗ ಹಳೆಯದಾಗುತ್ತದೆ, ಬಲಿಯುತ್ತದೆ, ಚಿಕಿತ್ಸೆಗೆ ಬಗ್ಗುವ ಸ್ಥಿತಿ ದಾಟಿಬಿಡುತ್ತದೆ. ರೋಗ ಬಲಿತಷ್ಟೂ ಚಿಕಿತ್ಸೆ ಕಷ್ಟ. ಕರ್ನಾಟಕದಲ್ಲಿ ಲಂಚದ ವಿಚಾರ ಇಂದು ಈ ಸ್ಥಿತಿಗೆ ಬಂದು ಮುಟ್ಟಿದೆ. ಭ್ರಷ್ಟಾಚಾರ ವಿರೋಧಿಸಿ ಅಧಿಕಾರಕ್ಕೆ ಬಂದವರ ಲಂಚಾವತಾರ ಕಂಡರೂ ತುಟಿಕ್‌ಪಿಟಿಕ್ ಎನ್ನದ ಸ್ಥಿತಿಯಲ್ಲಿ ವಿರೋಧ ಪಕ್ಷವಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದನ್ನೇ ಪ್ರತಿಭಟನೆ ಎಂದುಕೊಂಡಿರುವ ನಾಯಕರಿಂದ ಹೆಚ್ಚಿನದ್ದೇನನ್ನೂ ನಿರೀಕ್ಷಿಸಬಹುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

"ನಾವೇನು ಸತ್ಯ ಹರಿಶ್ಚಂದ್ರನ ವಂಶದವರಾ? ಈಗ ಸಿಕ್ಕ ಅವಕಾಶ ಕಳೆದುಕೊಂಡರೆ ಇನ್ನೊಮ್ಮೆ ಸಿಕ್ಕುತ್ತಾ" ಎನ್ನುವ ಮಾತನ್ನು ನಾಟಕದ ಸಂಭಾಷಣೆಯಂತೆ ಸದ್ಯ ಆಡಳಿತ ಮತ್ತು ವಿರೋಧಪಕ್ಷಗಳಲ್ಲಿರುವ ಹಲವು ನಾಯಕರು ಹತ್ತಾರು ಬಾರಿ ಉದುರಿಸಿದ್ದಾರೆ. ಜನರು ಇವರನ್ನು ಸತ್ಯ ಹರಿಶ್ಚಂದ್ರನಿಗೆ ಹೋಲಿಸುವ ಪಾಪವನ್ನು ಖಂಡಿತ ಮಾಡಲಾರರು. ಲಂಚಕ್ಕಾಗಿ ಹಾತೊರೆಯುವ, ಭ್ರಷ್ಟಾಚಾರವನ್ನೇ ಹೊದ್ದು ಮಲಗಿರುವವರನ್ನು ದುರ್ಯೋಧನ, ದುಶ್ಯಾಸನರಿಗೆ ಹೋಲಿಸಲೂ ಹಿಂಜರಿಯುತ್ತಿದ್ದಾರೆ. ಮನುಷ್ಯರೆಂದು ಒಪ್ಪಿಕೊಳ್ಳಲೂ ನಿರಾಕರಿಸುತ್ತಿದ್ದಾರೆ. ಆಡಳಿತದ ಪ್ರತಿ ಹಂತದಲ್ಲಿಯೂ ಲಂಚಾವತಾರ ಸಾಮಾನ್ಯವಾದರೆ ಏನಾಗುತ್ತದೆ ಎನ್ನುವುದಕ್ಕೆ ರೂಪಕವೋ ಎನ್ನುವಂತೆ ಮೊನ್ನೆ ಬೆಂಗಳೂರಿನಲ್ಲಿ ಲೋಕಾಯುಕ್ತರಿಗೆ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಅಧಿಕಾರಿಯ ಆರ್ತನಾದವು ಜನರ ಕಿವಿಯಲ್ಲಿ ಅನುರಣಿಸುತ್ತಿದೆ.

ಇದನ್ನೂ ಓದಿ: Viral Video: ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಪೊಲೀಸ್ ಅಧಿಕಾರಿಯ ಆರ್ತನಾದ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+