ಕಾಂಗ್ರೆಸ್‌ನ ಶಕ್ತಿ ಯೋಜನೆ ಹಣ ಆರೇ ತಿಂಗಳಿಗೆ ಖಾಲಿಯಾಗಿದೆ

ಬೆಂಗಳೂರು, ನವೆಂಬರ್‌ 07: ಕಾಂಗ್ರೆಸ್‌ನ "ಶಕ್ತಿ" ಯೋಜನೆಗೆ ಆರು ತಿಂಗಳೊಳಗೆ ನಿಶ್ಯಕ್ತಿ ಆವರಿಸಿದೆ. ಒಂದು ವರ್ಷಕ್ಕೆ ಮೀಸಲಿಟ್ಟ ಶಕ್ತಿ ಯೋಜನೆ ಹಣ ಆರೇ ತಿಂಗಳಿಗೆ ಖಾಲಿಯಾಗಿದೆ, ಅಂದರೆ ಕಾಂಗ್ರೆಸ್‌ ಎಂತಹ ತಿಮಿಂಗಿಲ ಎಂಬುದನ್ನು ನೀವೇ ಊಹಿಸಿ ಎಂದು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, ಉಚಿತ 10 ಕೆಜಿ ಅಕ್ಕಿಯ ಅನ್ನಭಾಗ್ಯ ಇದುವರೆಗೂ ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ಬಡವರಿಗೆ ನೀಡುವ 05 ಕೆಜಿ ಅಕ್ಕಿಯಲ್ಲಿ ಸಹ 02 ಕೆಜಿ ಅಕ್ಕಿಯನ್ನು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಗುಳುಂ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

congress-shakti-yojana

ಚುನಾವಣೆಗೂ ಮುನ್ನ ಮನೆ-ಮನೆಗೆ ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್‌ ಎಂದು ಹೇಳಿ, ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಸಲ್ಲದ ಕಂಡಿಷನ್‌ ಹಾಕಿ, ಈಗ ಸರಿಯಾಗಿ ವಿದ್ಯುತ್‌ ನೀಡದೆ ಕರ್ನಾಟಕ ಕತ್ತಲಾಗಿದೆ. "ನಿಮ್ಮ ಪುಕ್ಸಟ್ಟೆ ವಿದ್ಯುತ್‌ ಬೇಡ ಸ್ವಾಮಿ, ನಮಗೆ ಸರಿಯಾಗಿ ವಿದ್ಯುತ್‌ ನೀಡಿ" ಎಂದು ಕರ್ನಾಟಕದ ಜನತೆ ಪರಿಪರಿಯಾಗಿ ಬೇಡಿಕೊಳ್ಳುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಕಣ್ಣಿಗೆ ರಾಚುತ್ತಿದೆ.

ರಾಜ್ಯದಲ್ಲಿ ದುರಾಡಳಿತ ನೀಡುತ್ತಿರುವ ಕಾಂಗ್ರೆಸ್‌ ಚುನಾವಣೆಗೂ ಮುನ್ನ ಉಚಿತ, ಖಚಿತ, ನಿಶ್ಚಿತ ಎಂದೆಲ್ಲಾ ಕರ್ನಾಟಕದ ಜನತೆಯ ಕಿವಿ ಮೇಲೆ ಇಟ್ಟಿದ್ದ ಹೂವುಗಳೆಲ್ಲವೂ ಬೋಗಸ್!!‌ ಅಧಿಕಾರಕ್ಕೇರಿ ಆರು ತಿಂಗಳು ಮುಗಿಯುತ್ತಾ ಬಂದರೂ ಘೋಷಿಸಿದ ಗ್ಯಾರಂಟಿಗಳಲ್ಲಿ ನುಡಿದಂತೆ ನಡೆಯದಿರುವುದೇ ಕಾಂಗ್ರೆಸ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಎಂದು ವ್ಯಂಗ್ಯವಾಡಿದೆ.

ಚುನಾವಣೆಗೂ ಮುನ್ನ ಮನೆ ಮನೆಗೂ ಹಂಚಿದ್ದ ಬೇಷರತ್‌ ಗ್ಯಾರಂಟಿ ಕಾರ್ಡ್‌ಗಳಿಗೆ ನಂತರ ಬೇಕಾಬಿಟ್ಟಿ ಷರತ್ತು ವಿಧಿಸಿದ್ದು, ಕಾಂಗ್ರೆಸ್‌ಗೆ ಮತ ನೀಡಿದರೆ ಮಾತ್ರ ಆ‍್ಯಕ್ಟೀವ್‌ ಆಗುತ್ತವೆ ಎಂದು ಹಂಚಿದ್ದ ಗಿಫ್ಟ್‌ ಕಾರ್ಡ್‌ಗಳಿಗೆ ಒಂದೇ ಒಂದು ಪೈಸೆ ಹಾಕದಿದ್ದದ್ದು, ಇವು ಕಾಂಗ್ರೆಸ್‌ ನಯವಂಚಕತನ ಹಾಗೂ ನಿರ್ಲಜ್ಜ ಲಂಪಟತನಕ್ಕೆ ಕೆಲವು ಸಾಕ್ಷಿಗಳು.

ಪ್ರತಿ ಮನೆಯ ಯಜಮಾನಿಗೆ ತಿಂಗಳ ಖರ್ಚಿಗೆ ₹2000 ನೀಡುತ್ತೇವೆಂದ "ಗೃಹಲಕ್ಷ್ಮಿ" ಯೋಜನೆಯನ್ನು ಸರ್ಕಾರದ ಹಣ ಬಳಸಿ ಅದ್ದೂರಿಯಾಗಿ ಆರಂಭಿಸಿದ್ದೇನೋ ನಿಜ, ಆದರೆ ಇದುವರೆಗೂ ಖಾತೆಗಳಿಗೆ ಏನೂ ಜಮೆಯಾಗದ ಗೃಹಲಕ್ಷ್ಮಿಯರೇ ಅಧಿಕವಾಗಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಹಕೀಕತ್.‌

ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರು ತಮ್ಮ ಕೆಲಸ ಕಾರ್ಯಗಳೆಲ್ಲವನ್ನೂ ಬದಿಗೊತ್ತಿ ದಿನವಿಡೀ ಜಾತಕ ಪಕ್ಷಿಯಂತೆ ಬ್ಯಾಂಕ್‌ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯನ್ನು ನಿರ್ಮಿಸಿದೆ ಕಾಂಗ್ರೆಸ್ ಎಂದು ಬಿಜೆಪಿ ಹೇಳಿದೆ.

congress-shakti-yojana

ಗ್ಯಾರಂಟಿಗಳಿಗೆ ಹಣ ಹೇಗೆ ಹೊಂದಿಸುತ್ತೀರಿ ಎಂದು ಕೇಳಿದಾಗ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆಂದು ಬೊಂಬ್ಡಾ ಹೊಡೆಯುತ್ತಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರವನ್ನೇ ಮನೆ ದೇವರನ್ನಾಗಿಸಿಕೊಂಡಿದೆ. ಕಾಂಗ್ರೆಸ್‌ ಸರ್ಕಾರ ನಮ್ಮ ಬಳಿ 80% ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರರು ಅಳಲು ತೋಡಿಕೊಂಡಿದ್ದೇ ಕಾಂಗ್ರೆಸ್‌ನ ಭ್ರಷ್ಟಾಚಾರದ ವಂಶಾವಳಿ ಜೀವಂತವಾಗಿರುವುದಷ್ಟೇ ಅಲ್ಲದೆ ಬೆಳೆಯುತ್ತಿರುವುದಕ್ಕೆ ಸಾಕ್ಷಿ.

ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಕೋಟಿಗಟ್ಟಲೆ ಹಣ, ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕವನ್ನು #ATM ಮಾಡಿಕೊಂಡಿದ್ದಕ್ಕೆ ಸಾಕ್ಷಿ. ಕರ್ನಾಟಕದಲ್ಲಿ ಬರ ತಾಂಡವವಾಡುತ್ತಿದ್ದರೂ ಪಂಚ ರಾಜ್ಯಗಳ ಚುನಾವಣೆಗೆ ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಲೂಟಿ ಮಾಡಿ ಕಳುಹಿಸುತ್ತಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಅತ್ತ ಗ್ಯಾರಂಟಿಗಳಲ್ಲಿಯೂ ನುಡಿದಂತೆ ನಡೆಯುತ್ತಿಲ್ಲ, ಇತ್ತ ಆಡಳಿತದಲ್ಲಿಯೂ ನೂರೆಂಟು ಅಪಭ್ರಂಶಗಳು, ಕಾಂಗ್ರೆಸ್‌ಗೆ ಅಧಿಕಾರ ನೀಡಿದ ಕನ್ನಡಿಗರ ಗೋಳು ಹೇಳತೀರದು. ಬರ, ಕುಡಿಯುವ ನೀರಿಗೆ ಕಂಟಕ, ಒಣಗುತ್ತಿರುವ ಜಮೀನುಗಳು, ಸಾಯುತ್ತಿರುವ ಜಾನುವಾರುಗಳು, ಹೀಗೆ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕವನ್ನು ಕಾಂಗ್ರೆಸ್‌ ತನ್ನ ಆರೇ ತಿಂಗಳ ಆಡಳಿತದಲ್ಲಿ ಅಶಾಂತಿ ಹಾಗೂ ಅಭಾವದ ನಾಡನ್ನಾಗಿಸಿದ್ದಂತೂ ಸುಳ್ಳಲ್ಲ ಎಂದು ಬಿಜೆಪಿ ಟ್ವೀಟ್‌ ಮೂಲಕ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+