'ಬಿಜೆಪಿಗೆ ದಲಿತರ ಬಗ್ಗೆ ಇರುವುದು ಅಭಿನಯ, ಅಭಿಮಾನವಲ್ಲ'!
ಬೆಂಗಳೂರು, ಮೇ 25 : 'ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಆಳ್ವಿಕೆಯ ಯಾವುದೇ ರಾಜ್ಯಗಳಿಗಿಂತಲೂ ಕರ್ನಾಟಕ ಮುಂದಿದೆ. ಈ ನಿಟ್ಟಿನಲ್ಲಿ ಯಾವುದೇ ಸವಾಲಿಗೂ, ಹಾಗೂ ಚರ್ಚೆಗೂ ನಾವು ಸಿದ್ದವಿದ್ದೇವೆ'ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ನೂತನ ಉಸ್ತುವಾರಿ ಕೆ.ಸಿ. ವೇಣುಗೋಪಾಲನ್ ಅತ್ಯಂತ ಭರವಸೆಯಿಂದ ನುಡಿದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ ಅವರು, ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಎಲ್ಲಾ ಶಾಸಕರ ಕೆಲಸ ತೃಪ್ತಿತಂದಿದೆ. ಸಾಮಾನ್ಯ ಕಾರ್ಯಕರ್ತನಿಂದ ಉನ್ನತ ಮಟ್ಟದ ನಾಯಕರವರೆಗೆ ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿದರೆ ಮುಂದಿನ ಚುನಾವಣೆಯಲ್ಲಿ ಜನ ನಮ್ಮನ್ನು ಅಧಿಕಾರಕ್ಕೆ ತರುವುದು ಖಚಿತ ಎಂದರು.[ಸಿದ್ದು, ಪರಂ ವಿರುದ್ಧ ಕಾಂಗ್ರೆಸ್ಸಿಗರು ಹೇಳಿಕೊಂಡ ದೂರುಗಳೇನು?]
'ಪಕ್ಷದಲ್ಲಿ ಶಿಸ್ತು ಅತಿ ಮುಖ್ಯ. ಪ್ರತಿ ವ್ಯಕ್ತಿಯು ಪಕ್ಷಕ್ಕೆ ಮುಖ್ಯ. ಹಾಗೆಂದು ಲಕ್ಷಣ ರೇಖೆಯನ್ನು ದಾಟಿದರೆ ಶಿಸ್ತು ಕ್ರಮ ಅನಿವಾರ್ಯವಾಗಲಿದೆ. ಕಳೆದ ನಾಲ್ಕು ದಿನಗಳಿಂದಲೂ ನಾವು ಇಲ್ಲಿ ನಡೆಸಿದ ಚರ್ಚೆ ಅತ್ಯಂತ ಮಹತ್ವದ್ದಾಗಿದೆ. ಎಲ್ಲ ಶಾಸಕರಿಗೂ ನಿರ್ದೇಶನ ನೀಡಿದ್ದೇವೆ. ಒಟ್ಟಾರೆಯಾಗಿ ಮುಂಬರುವ 2018ರ ಚುನಾವಣೆಗಳಲ್ಲಿ ನಾವು ಗೆಲ್ಲುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಗೆಲುವಿನ ರಣತಂತ್ರ ರೂಪಿಸುತ್ತಿದ್ದೇವೆ' ಎಂದು ವೇಣುಗೋಪಾಲ್ ಹೇಳಿದರು.[ವಿಧಾನಸಭಾ ಚುನಾವಣೆ: ಕಳೆದ ಬಾರಿ ಸೋತವರಿಗಿಲ್ಲ ಕಾಂಗ್ರೆಸ್ ಟಿಕೆಟ್]
'ಕೆಲವು ಜಿಲ್ಲೆಗಳಲ್ಲಿ ಸಣ್ಣಪುಟ್ಟ ಅಭಿಪ್ರಾಯ ಭೇದವಿದೆ. ಅವುಗಳ ನಿವಾರಣೆಗೆ ಕ್ರಮಗಳನ್ನು ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸರಿದೂಗಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚಿಸಿದ್ದು, ಅವರು ಪ್ರತಿ ತಿಂಗಳೂ ಎಐಸಿಸಿ ವೀಕ್ಷಕರ ಜತೆಗೆ ಕುಳಿತು ಚರ್ಚಿಸಲಿದ್ದಾರೆ. ಒಟ್ಟಾರೆಯಾಗಿ ಪಕ್ಷವನ್ನು ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ' ಎಂದು ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದಿರಾಗಾಂಧಿಯವರ ಜನ್ಮ ಶತಮಾನೋತ್ಸವ ವರ್ಷವನ್ನು ರಾಜ್ಯದಲ್ಲೂ ಆಚರಿಸುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ರೂಪಿಸಲಾಗುವುದು. ಚಿಕ್ಕಮಗಳೂರಿನಲ್ಲಿ ಸಮಾರೋಪ ಸಮಾರಂಭ ಹಾಗು ರಾಯಚೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದಾಗಿ ವೇಣುಗೋಪಾಲ್ ತಿಳಿಸಿದರು.[ಕಾಂಗ್ರೆಸ್: ಗುಂಪುಗಾರಿಕೆ, ಭಿನ್ನಮತ ನಡೆಸಿದರೆ ಗೇಟ್ಪಾಸ್-ವೇಣುಗೋಪಾಲ್ ಖಡಕ್ ಎಚ್ಚರಿಕೆ]
ಅಧ್ಯಕ್ಷರ ಬದಲಾವಣೆಯ ಕುರಿತು ಒಂದೆರಡು ದಿನಗಳಲ್ಲಿ ಖಚಿತ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದ ವೇಣುಗೋಪಾಲ್, ಪ್ರತಿಪಕ್ಷ ಬಿಜೆಪಿಯನ್ನು ಟೀಕಿಸಲು ಮರೆಯಲಿಲ್ಲ. ದಲಿತರ ಬಗೆಗೆ ಬಿಜೆಪಿಯವರಿಗೆ ಈಗ ಚುನಾವಣೆಯ ಹೊಸ್ತಿಲಲ್ಲಿ ಪ್ರೀತಿ ಉಕ್ಕಿದೆ. ದಲಿತರ ಬಗೆಗೆ ಅವರಿಗಿರುವುದು ಕೇವಲ ಅಭಿನಯವೇ ಹೊರತು ಅಭಿಮಾನವಲ್ಲ ಎಂದು ಬಿಜೆಪಿ ನಾಯಕರ ಪ್ರವಾಸವನ್ನು ಗೇಲಿ ಮಾಡಿದರು.
ಸುದ್ದಿಗೋಷ್ಠಿಯ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗೃಹ ಸಚಿವರಾದ ಡಾ. ಪರಮೇಶ್ವರ್ ಅವರು, 'ಎಐಸಿಸಿ ವೀಕ್ಷಕರು ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ 35 (35 ಡಿಸಿಸಿ) ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ನಾಯಕರುಗಳಿಂದ ವರದಿ ಕೇಳಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಎಐಸಿಸಿ ನಾಯಕರುಗಳು ಎಲ್ಲವನ್ನು ಆಲಿಸಿ ಸೂಕ್ತ ಪರಿಹಾರ ನೀಡುತ್ತಿದ್ದಾರೆ' ಎಂದರು.