ಸಿದ್ದು, ಪರಂ ವಿರುದ್ಧ ಕಾಂಗ್ರೆಸ್ಸಿಗರು ಹೇಳಿಕೊಂಡ ದೂರುಗಳೇನು?
ಕರ್ನಾಟಕ ಕಾಂಗ್ರೆಸ್ ನ ಉಸ್ತುವಾರಿ ವಹಿಸಿರುವ ಕೆಸಿ ವೇಣುಗೋಪಾಲ್ ಅವರಿಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ವಿರುದ್ಧ ರಾಶಿ ದೂರುಗಳು ಸಲ್ಲಿಕೆಯಾಗಿವೆ. ಏನವು ದೂರುಗಳು ಎಂಬುದು ತಿಳಿಯುವುದಕ್ಕೆ ಈ ವರದಿ ಓದಿ
ಬೆಂಗಳೂರು, ಮೇ 10: ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಕೆ,ಸಿ,ವೇಣುಗೋಪಾಲ್ ಗೆ ದೂರುಗಳು ರಾಶಿರಾಶಿ ಬಂದಿವೆ. ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರದು ನಿರಂಕುಶ ಮಾದರಿ ಕಾರ್ಯ ವೈಖರಿ. ಯಾರ ಮಾತೂ ಕೇಳಲ್ಲ ಎಂದು ದೂರಿದ್ದರೆ, ಪರಮೇಶ್ವರ್ ಕಾರ್ಯಕರ್ತರ ಕೈಗೆ ಸಿಗಲ್ಲ ಎಂಬುದು ದೂರು ನೀಡಿದವರ ಪೈಕಿ ಬಹುತೇಕರದು ಇದೇ ಆಕ್ಷೇಪವಾಗಿದೆ. ಆ ನಂತರದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮದೇ ಆಯ್ಕೆ ಅಥವಾ ಸಲಹೆ ನೀಡಿದ್ದಾರೆ.[ಸಿಎಂ-ವೇಣುಗೋಪಾಲ್ ಭೇಟಿ; ಸಂಜೆಯ ಸಮನ್ವಯ ಸಭೆಯತ್ತ ಎಲ್ಲರ ಚಿತ್ತ]
ನಿಮ್ಮ ಬಹುತೇಕ ಸಮಸ್ಯೆಗಳನ್ನು ನಿವಾರಿಸುತ್ತೀನಿ ಎಂದು ಮಾತು ಕೊಟ್ಟಿರುವ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾತ್ರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. ಈ ತಕ್ಷಣಕ್ಕೆ ಹೈಕಮಾಂಡ್ ಆಯ್ಕೆ ಮಾಡುವ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರು ಒಪ್ಪಬೇಕು. ಜತೆಗೆ ಅಹಿಂದ ಮತಗಳು ಕಾಂಗ್ರೆಸ್ ಕೈ ಬಿಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾರ್ಯವೈಖರಿಗೆ ಅಸಮಾಧಾನ
ಸಿದ್ದರಾಮಯ್ಯ ಅವರ ಕಾರ್ಯ ವೈಖರಿಗೆ ಹಲವು ಪದಾಧಿಕಾರಿಗಳು ಹಾಗೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬರೇ ವ್ಯಕ್ತಿ ಎಲ್ಲ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವುದರಿಂದ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತದೆ ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಾಗುತ್ತಿದೆ ಭಿನ್ನಮತ
ಯಾವುದೇ ಸಲಹೆ ಕೊಟ್ಟರೂ ಆ ಬಗ್ಗೆ ಸಿದ್ದರಾಮಯ್ಯ ಅವರು ಕೇಳಿಸಿಕೊಳ್ಳಲ್ಲ ಅನ್ನೋದು ಮುಖ್ಯ ದೂರು. ಎಐಸಿಸಿ ಹಿರಿಯ ನಾಯಕರ ಜತೆ ಸಿದ್ದರಾಮಯ್ಯ ಅವರಿಗೆ ಇರುವ ಆಪ್ತತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದೊಳಗೆ ಭಿನ್ನಮತೀಯರು ಹೆಚ್ಚಾಗುತ್ತಿದ್ದಾರೆ. ಪಕ್ಷದ ನಾಯಕರು ಇತರ ಪಾರ್ಟಿಗಳ ಕಡೆಗೆ ಹೋಗುತ್ತಿದ್ದಾರೆ ಎಂದು ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಬಲ ನಾಯಕರೇ ಕೆಪಿಸಿಸಿ ಅಧ್ಯಕ್ಷರಾಗಲಿ
ಪಕ್ಷದ ಮೇಲೆ ಸಿದ್ದರಾಮಯ್ಯ ಸಂಪೂರ್ಣ ಹಿಡಿತ ಸಾಧಿಸದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ 'ಪ್ರಬಲ' ಹಾಗೂ ಎಲ್ಲವನ್ನೂ ಸಂಭಾಳಿಸಬಲ್ಲ ನಾಯಕನನ್ನೇ ನೇಮಿಸಬೇಕು ಎಂದು ವೇಣುಗೋಪಾಲ್ ಗೆ ಮನವಿ ಮಾಡಲಾಗಿದೆ. ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶದಲ್ಲಿ 'ಸಾಮೂಹಿಕ ನಾಯಕತ್ವ' ದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಸಿದ್ದರಾಮಯ್ಯ ಅವರಿಗೆ ನೆನಪಿಸುವಂತೆ ಮನವಿ ಮಾಡಲಾಗಿದೆ.
ಕೈಗೆ ಸಿಗದ ಪರಂ
ಗೃಹಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷಗಿರಿ ಹೊಣೆ ಹೊತ್ತಿರುವ ಪರಮೇಶ್ವರ ಕಾರ್ಯಕರ್ತರ ಕೈಗೆ ಸಿಗ್ತಾನೇ ಇಲ್ಲ ಎಂಬುದು ಪರಂ ವಿರುದ್ಧದ ದೂರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಿಸುವುದಕ್ಕೆ ಅವರಿಗೆ ಸಾಧ್ಯವೇ ಆಗ್ತಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ಅವರು ಸಿಗೋದಿಲ್ಲ ಎಂದು ಕೂಡ ಕಾರ್ಯಕರ್ತರು ಅಲವತ್ತುಕೊಂಡಿದ್ದಾರೆ.
ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ಬದಲಿಸಿ
ಓಲೈಕೆ ರಾಜಕಾರಣ ಮಾಡ್ತಾರೆ, ಒಬ್ಬರೇ ನಿರ್ಧಾರ ತೆಗೆದುಕೊಳ್ತಾರೆ, ಕಾರ್ಯಕರ್ತರಿಗೆ ಭೇಟಿಗೆ ಸಿಗಲ್ಲ..ಹೀಗೆ ಹಲವು ದೂರುಗಳು ಪರಮೇಶ್ವರ ವಿರುದ್ಧ ಕೇಳಿಬಂದಿದೆ. ಶೀಘ್ರದಲ್ಲೇ ಅವರನ್ನು ಬದಲಿಸಬೇಕು ಎಂದು ಮನವಿ ಮಾಡಲಾಗಿದೆ.
ದೆಹಲಿವರೆಗೆ ಬಂದು ದೂರು ಹೇಳ್ತೀವಿ
ವೇಣುಗೋಪಾಲ್ ಜತೆಗಿನ ಭೇಟಿ ವೇಳೆ ಗೊತ್ತಾಗಿದ್ದು ಏನೆಂದರೆ, ಪಕ್ಷದೊಳಗೆ ನಾಯಕತ್ವ ಹಾಗೂ ತಂಡದ ಬಗ್ಗೆ ಅಸಮಾಧಾನ ಇದೆ. ಕೊನೆಗೆ ವೇಣುಗೋಪಾಲ್ ಎಲ್ಲರನ್ನೂ ಕೇಳಿಕೊಂಡಿದ್ದಾರೆ. ಅಸಮಾಧಾನ ಮರೆತು, ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ತಡೆಯಬೇಕು ಎಂದಿದ್ದಾರೆ. ಆದರೆ ಆಕ್ಷೇಪವೇ ಹೆಚ್ಚಾಗಿ ಕೇಳಿಬಂದಿದೆ. ಕೆಲವರಂತೂ ವೇಣುಗೋಪಾಲ್ ಜತೆಗೆ ದೆಹಲಿವರೆಗೆ ಬಂದು ತಮ್ಮ ದೂರು ಹೇಳ್ತೀವಿ ಎಂದಿದ್ದಾರೆ.