ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ 'ಬಿರಿಯಾನಿ' ಆರೋಪ!
ರಾಜ್ಯದ ಇಬ್ಬರು ಪ್ರಭಾವಿ ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರಾದ ಡಿ ಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವಣ ರಾಜಕೀಯ ಮೇಲಾಟ ಯಾವ ಮಟ್ಟಕ್ಕಾದರೂ ಇಳಿಯುತ್ತೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ಬಂದು ಹೋಗಿವೆ.
ಹಿಂದೊಮ್ಮೆ, ತನ್ನ ಹಿನ್ನಲೆಯ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿಗೆ ತಿರುಗೇಟು ನೀಡಲು, ಡಿಕೆಶಿ ತನ್ನ ತಾಯಿಯನ್ನೇ ರಾಜಕೀಯ ವೇದಿಕೆಯ ಮೇಲೆ ಕರೆಸಿಕೊಂಡಿದ್ದ ಉದಾಹರಣೆಯೂ ಇದೆ. (ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ)
ಕುಮಾರಸ್ವಾಮಿಯ ರಾಜಕೀಯ ಕರ್ಮಭೂಮಿ ರಾಮನಗರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಇಂಧನ ಸಚಿವ ಡಿ ಕೆ ಶಿವಕುಮಾರ್ ಏನಾದರೂ ತಂತ್ರಗಾರಿಕೆ ಹೂಡುತ್ತಲೇ ಬರುತ್ತಿದ್ದಾರೆ. ಅದರ ಮುಂದುವರಿದ ಭಾಗದಂತೆ ಮಂಗಳವಾರ (ಏ 19) ಕಾಂಗ್ರೆಸ್ ಪಕ್ಷ, ಕುಮಾರಸ್ವಾಮಿ ವಿರುದ್ದ 'ಶಕ್ತಿ ಪ್ರದರ್ಶನ' ಆಯೋಜಿಸಿತ್ತು.
ಕಾಂಗ್ರೆಸ್ ಮುಖಂಡರು ಎಂದಿನಂತೆ ಕುಮಾರಸ್ವಾಮಿ ಮತ್ತು ದೇವೇಗೌಡ್ರ ವಿರುದ್ದ ಆರೋಪದ ಮಹಾಪೂರವನ್ನೇ ಹರಿಸಿದ್ದರು. ಅದರಲ್ಲಿ ಕುಮಾರಸ್ವಾಮಿ ಬಳಿ ಎರಡು ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಯಿದೆ ಎನ್ನುವ ಆರೋಪವೂ ಒಂದು.
ತನ್ನ ವಿರುದ್ದ ಪ್ರತಿಭಟನೆಗೆ ಬಿಡದಿಯಲ್ಲಿ ಬುಧವಾರ (ಏ20) ಪ್ರತಿಕ್ರಿಯಿಸುತ್ತಿದ್ದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಇನ್ನೂರೋ.. ಮುನ್ನೂರೋ ಕೊಟ್ಟು, ಬಿರಿಯಾನಿ ಕೊಡಿಸಿ ಜನರನ್ನು ಕಾಂಗ್ರೆಸ್ಸಿನವರು ಕರೆದುಕೊಂಡು ಬಂದಿದ್ದಾರೆಂದು ವ್ಯಂಗ್ಯವಾಡಿದ್ದಾರೆ. (ಮುಂದಿನ ಸಿಎಂ ಕುಮಾರಣ್ಣ)
ಕಾಂಗ್ರೆಸ್ಸಿನವರು ಕೊಡಿಸಿದ್ದು ಯಾವ ಬಿರಿಯಾನಿ? ತಾಜ್ ಬಿರಿಯಾನಿಯೋ ಅಥವಾ ದೊಣ್ಣೆ ಬಿರಿಯಾನಿಯೋ ಎನ್ನುವದನ್ನು ಕುಮಾರಸ್ವಾಮಿ ವಿವರಿಸದೇ ಇದ್ದದ್ದು ಪುಣ್ಯ. ಎರಡು ಸಾವಿರ ಕೋಟಿ ಆಸ್ತಿಯಿದೆ ಎನ್ನುವ ಕಾಂಗ್ರೆಸ್ಸಿಗರ ಆರೋಪಕ್ಕೆ ಕುಮಾರಸ್ವಾಮಿ ಕೊಟ್ಟ ಉತ್ತರ ಹೀಗಿತ್ತು..

ನನ್ನ ವಿರುದ್ದ ಹೋರಾಟ ನಡೆಯುತ್ತಲೇ ಇದೆ
ಕೆಲವು ಕಾಂಗ್ರೆಸ್ ಮುಖಂಡರು ನನ್ನ ವಿರುದ್ದ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಅವರು ಮಾಡಿದ ಆರೋಪವನ್ನು ಒಂದನ್ನಾದರೂ ಸಾಬೀತು ಪಡಿಸಲು ಇವರಿಗೆ ಸಾಧ್ಯವಾಯಿತಾ? ಇಲ್ಲಿನ ಒಬ್ಬ ಶಾಸಕ, ಸಂಸದ ಮತ್ತು ಪರಿಷತ್ ಸದಸ್ಯ ನನ್ನ ವಿರುದ್ದ ಹಗೆ ಸಾದಿಸುತ್ತಲೇ ಬರುತ್ತಿದ್ದಾರೆ. ನಾನು ಇದಕ್ಕೆಲ್ಲಾ ಕ್ಯಾರೇ ಮಾಡುವವನಲ್ಲ - ಕುಮಾರಸ್ವಾಮಿ.

ರಾಮನಗರದಲ್ಲಿ ನನ್ನ ವಿರೋಧ ಹೋರಾಟ
ರಾಮನಗರದಲ್ಲಿ ನನ್ನ ವಿರೋಧ ಪ್ರತಿಭಟನೆ ಮಾಡಿಸಿದರು. ರಾಮನಗರದ ಜನತೆಗೆ ನನ್ನ ಕೊಡುಗೆ ಏನು ಎನ್ನುವುದು ಗೊತ್ತಿದೆ. ಹಾಗಾಗಿ ಇಲ್ಲಿ ಜನ ಎಲ್ಲಿಂದ ಸೇರುತ್ತಾರೆ. ಅದಕ್ಕಾಗಿ, ಪಕ್ಕದ ಸಾತನೂರು, ಕನಕಪುರದಿಂದ ಇನ್ನೂರೋ.. ಮುನ್ನೂರೋ.. ಕೊಟ್ಟು ಜೊತೆಗೆ ಬಿರಿಯಾನಿ ಕೊಟ್ಟು ಜನರನ್ನು ಕರೆಸಿದ್ದಾರೆಂದು ಹೆಸರು ಹೇಳದೇ ಡಿ ಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ನಾನು ಅಹಿಂದ ವಿರೋಧಿಯಲ್ಲ
ನಾನು ಅಹಿಂದ, ಮುಸ್ಲಿಂ ವಿರೋಧಿಯಲ್ಲ. ನಾನು ದಲಿತರ ವಿರುದ್ದ ಮಾತನಾಡಿಲ್ಲ. ನಿಮ್ಮ ರಾಜಕೀಯ ಬೇಳೆ ಬೇಯಿಸಲು ಜಾತಿ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಮಾಡಬೇಡಿ. ನಾಲಿಗೆ ಹಿಡಿತದಲ್ಲಿರಲಿ..ಮುಸ್ಲಿಂ ಐಎಎಸ್ ಅಧಿಕಾರಿಯೊಬ್ಬ ಗುಮಸ್ತನಾಗಲೂ ಅನ್ ಫಿಟ್ ಎಂದು ಹೇಳಿದ್ದು, ಆ ಅಧಿಕಾರಿಯ ವಿರುದ್ದವೇ ಹೊರತು ಸಮುದಾಯದ ಮೇಲಲ್ಲ. ಅವಿವೇಕಿ ಕಾಂಗ್ರೆಸ್ ಮುಖಂಡರ ಮಾತನ್ನು ಕೇಳಬೇಡಿ ಎಂದು ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಬಿಡದಿ ಪುರಸಭೆ
ನೂತನವಾಗಿ ಅಸ್ತಿತ್ವಕ್ಕೆ ಬಂದ ಬಿಡದಿ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬಂದಿದ್ದ ಕುಮಾರಸ್ವಾಮಿ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಾವೇನೂ ಅರ್ಜಿ ಹಾಕಿಕೊಂಡಿಲ್ಲ. ಮೊನ್ನೆ ರಾಮನಗರದಲ್ಲಿ ನನ್ನ ವಿರುದ್ದ ಹೋರಾಟಕ್ಕೆ 25ಲಕ್ಷ ರೂಪಾಯಿ ಕಾಂಗ್ರೆಸ್ಸಿನವರು ಖರ್ಚು ಮಾಡಿದ್ದಾರೆ. ಅದೇ ಹಣವನ್ನು ಬಡವರಿಗೆ ನೀಡಿದ್ದರೆ, ಕಾಂಗ್ರೆಸ್ ಮುಖಂಡರ ಹೆಸರು ಹೇಳಿಕೊಂಡು ಬಡವರು ಬದುಕುತ್ತಿದ್ದರು - ಕುಮಾರಸ್ವಾಮಿ.

ನನ್ನ ಆಸ್ತಿಯನ್ನು ರುಜುವಾತು ಪಡಿಸಲಿ
ನನ್ನ ಬಳಿ ಎರಡು ಸಾವಿರ ಕೋಟಿ ಆಸ್ತಿಯಿದೆ ಎಂದು ಸಾತನೂರು ಮೂಲದ ಕಾಂಗ್ರೆಸ್ ಸಚಿವರು ಆರೋಪಿಸುತ್ತಾರೆ. ಎರಡು ಸಾವಿರ ಬೇಡ, ಐನೂರು ಕೋಟಿ ತೋರಿಸಲಿ. ಇಡೀ ಆಸ್ತಿಯನ್ನು ರಾಮನಗರದ ಅಭಿವೃದ್ದಿಗೆ ಧಾರೆ ಎರೆಯುತ್ತೇನೆ. ನಮ್ಮ ಬಳಿ ಮುಂದಿನ ಚುನಾವಣೆಗೆ ದುಡ್ಡಿಲ್ಲ, ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸುಳ್ಳುಬುರುಕರ ಮಾತಿಗೆ ಕಿವಿಗೊಡಬೇಡಿ ಎಂದು ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ಹೆಸರು ಉಲ್ಲೇಖಿಸದೇ ಅವರ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications