'ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆ, ವಯನಾಡು ಆದರೂ ತಲುಪುತ್ತೋ'
ರಾಜಸ್ಥಾನದ ಉದಯಪುರದಲ್ಲಿ ಮುಕ್ತಾಯಗೊಂಡ ಕಾಂಗ್ರೆಸ್ಸಿನ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಇದರ ಜೊತೆಗೆ, ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಒಂದು ಕುಟುಂಬಕ್ಕೆ ಒಂದೇ ಟಿಕೆಟ್, ಐವತ್ತು ವರ್ಷದೊಳಗಿನವರಿಗೆ ಹೆಚ್ಚಿನ ಜವಾಬ್ದಾರಿ, ಸಂದರ್ಭಕ್ಕೆ ತಕ್ಕಂತೆ ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿ ಮುಂತಾದ ನಿರ್ಧಾರಕ್ಕೆ ಶಿಬಿರದ ಅಂತ್ಯದಲ್ಲಿ ಬರಲಾಗಿದೆ.
ಭಾರತ್ ಜೋಡೋ ಯಾತ್ರೆಯ ಬಗ್ಗೆ ಕರ್ನಾಟಕ ಬಿಜೆಪಿ ಲೇವಡಿಯನ್ನು ಮಾಡಿದೆ. ಈ ಯಾತ್ರೆ ವಯನಾಡ್ (ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ) ಬರುವವರೆಗಾದರೂ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಇರುತ್ತಾರೋ ಅಥವಾ ಯಾತ್ರೆಯ ಮಧ್ಯೆಯೇ ವಿದೇಶಕ್ಕೆ ಹೋಗುತ್ತಾರೋ ಎಂದು ರಾಜ್ಯ ಬಿಜೆಪಿ ಐಟಿ ಸೆಲ್ ವ್ಯಂಗ್ಯವಾಡಿದೆ.
ಜನರೆ ಜೊತೆ ಬೆರೆಯದಿದ್ದರೆ ನಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಚಿಂತನಾ ಶಿಬಿರದಲ್ಲಿ ಹೇಳಿರುವ ರಾಹುಲ್ ಗಾಂಧಿ, ಶ್ರಮವೇ ನಮಗೆ ಮೂಲಮಂತ್ರ ಎಂದು ಪ್ರಸ್ತಾವಿತ ಭಾರತ್ ಜೋಡೋ ಯಾತ್ರೆಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಬಿಜೆಪಿಯ ಟ್ವೀಟ್ ಹೀಗಿದೆ:

ಕಾಂಗ್ರೆಸ್ ಅಧಿಕಾರದಲ್ಲಿರುವಾಗ ವೋಟ್ ಬ್ಯಾಂಕ್ ರಾಜಕಾರಣ
"ಕಾಂಗ್ರೆಸ್ ಅಧಿಕಾರದಲ್ಲಿರುವಾಗ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶವನ್ನು ಧರ್ಮ, ಜಾತಿ, ಭಾಷೆ ಎಂದು ವಿಭಜಿಸಿತ್ತು. ಅದರ ಪರಿಣಾಮವಾಗಿ ದೇಶದ ಜನತೆ ಅಧಿಕಾರದಿಂದ ಕೆಳಗಿಳಿಸಿದರು, ಈಗ ಅಧಿಕಾರವಿಲ್ಲದ ಹತಾಶೆ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದಕ್ಕಾಗಿ ಭಾರತ್ ಜೋಡೋ ಎಂದು ಹೊರಟಿದೆ. ಎಷ್ಟೊಂದು ನಾಟಕ ಮಾಡುವಿರಿ?. ದೇಶವನ್ನು ಭೌಗೋಳಿಕವಾಗಿ ವಿಭಜನೆ ಮಾಡಿದ್ದು ಮಾತ್ರವಲ್ಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಹೊಸ ನಾಟಕ ಮಾಡುತ್ತಿದೆ. ಸೋತು ನೆಲೆ ಕಳೆದುಕೊಂಡು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಹೆಸರಿನಲ್ಲಿ ಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ!" ಎಂದು ಬಿಜೆಪಿ ಐಟಿ ಘಟಕ ಟ್ವೀಟ್ ಮಾಡಿದೆ.

ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ
"ಭಾರತ್ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಗೆದ್ದಾಗ ಇವಿಎಂ ಬಗ್ಗೆ ಮೌನ ವಹಿಸುವ ಕಾಂಗ್ರೆಸ್ ಪಕ್ಷ, ಸೋತಾಗ ಮಾತ್ರ ತನ್ನ ಕಳಪೆ ಪ್ರದರ್ಶನವನ್ನು ಇವಿಎಂ ಯಂತ್ರದ ಮೇಲೆ ಕಟ್ಟುತ್ತಾರೆ. ಮತಯಂತ್ರವನ್ನು ದೂಷಿಸಿ ಪಕ್ಷ ಪುನಶ್ಚೇತನಗೊಳಿಸಲು ಸಾಧ್ಯವೇ?. ಬಿತ್ತಿದ್ದೇ ಬೆಳೆಯುತ್ತದೆ! ಅಧಿಕಾರದ ಅಮಲಿನಲ್ಲಿ, ಕುಟುಂಬವಾದದ ಭದ್ರ ಕೋಟೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರು ಜನರಿಂದ ಬಹುದೂರ ಸಾಗಿದ್ದರು. ಕಾಂಗ್ರೆಸ್ ಜನಸಾಮಾನ್ಯರಿಂದ ದೂರವಾಗಿದೆ ಎಂಬ ಸತ್ಯ ಒಪ್ಪಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜನಸಾಮಾನ್ಯರ ನಡುವೆ ದೊಡ್ಡ ಕಂದಕವಿದೆ" - ಬಿಜೆಪಿ ಮಾಡಿರುವ ಟ್ವೀಟ್.

ವಯನಾಡು ತಲುಪುವವರೆಗೆಯಾದರೂ ಜೋಡಣೆ ಕಾರ್ಯ ನಿರಾತಂಕವಾಗಿ ನಡೆಯುವುದೋ?
"ಪಕ್ಷ ಸಂಕಟದಲ್ಲಿ ಇದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್ ಜೋಡೋ ಎಂಬ ಪಾದಯಾತ್ರೆಗೆ ಹೊರಟಿದ್ದಾರೆ. ವಯನಾಡು ತಲುಪುವವರೆಗೆಯಾದರೂ ಈ ಜೋಡಣೆ ಕಾರ್ಯ ನಿರಾತಂಕವಾಗಿ ನಡೆಯುವುದೋ ಅಥವಾ ಮಧ್ಯದಲ್ಲಿ ಇನ್ನೊಂದು ವಿದೇಶ ಪ್ರವಾಸದ ಸಾಧ್ಯತೆ ಇರಬಹುದೋ?. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ #G23 ನಾಯಕರ ಪಾತ್ರವೇನು? ಕಾಂಗ್ರೆಸ್ ಛೋಡೋ ಎಂದಿರುವ ನಾಯಕರು ಭಾರತ್ ಜೋಡೋ ಯಾತ್ರೆಗೆ ಬರುವರೇ? ಭಾರತ್ ಜೋಡೋ ಕಾರ್ಯಕ್ರಮದ ಬೆನ್ನಲ್ಲೇ #ಕಾಂಗ್ರೆಸ್ಛೋಡೋ ಅಭಿಯಾನ ಆರಂಭಗೊಳ್ಳಲಿದೆ!" ಬಿಜೆಪಿ ಮಾಡಿರುವ ಟ್ವೀಟ್.
|
ಸರ್ದಾರ್ ಅವರನ್ನೇ ಮರೆತ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಅಭಿಯಾನ ಹಾಸ್ಯಾಸ್ಪದ
"ಸ್ವಾತಂತ್ರದ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೂ ಒಬ್ಬರು. ಸರ್ದಾರ್ ಅವರನ್ನೇ ಮರೆತ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ?"ಎಂದು ಕರ್ನಾಟಕ ಬಿಜೆಪಿ ಐಟಿ ಸೆಲ್ ಟ್ವೀಟ್ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದೆ.












Click it and Unblock the Notifications