ರಾಜ್ಯಪಾಲರ ಆಹ್ವಾನ ಸಿಗದಿದ್ದರೆ ಕೋರ್ಟ್ ಬಾಗಿಲು ತಟ್ಟಲಿದೆ ಕಾಂಗ್ರೆಸ್
ನವದೆಹಲಿ, ಮೇ 16: ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಸರಕಾರ ರಚನೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಆಹ್ವಾನಿಸದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ನಿರ್ಧರಿಸಿದೆ.
ಒಂದೊಮ್ಮೆ ರಾಜ ಭವನದಿಂದ ಆಹ್ವಾನ ಬರದೇ ಇದ್ದಲ್ಲಿ ನ್ಯಾಯಾಲಯಕ್ಕೆ ಹೋಗಲು ಕಾಂಗ್ರೆಸ್ ತೀರ್ಮಾನಿಸಿದೆ. "ಒಟ್ಟಾರೆ ಶೇಕಡಾ 56 ಮತ ನಮಗೆ ಬಿದ್ದಿದೆ ಮತ್ತು ಸರಕಾರ ರಚನೆಗೆ ಸಾಕಷ್ಟು ಸಂಖ್ಯಾಬಲ ಇದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿರುವುದಾಗಿ," ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೇ ಮೊದಲ ಅವಕಾಶ?
ಒಂದೊಮ್ಮೆ ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸದೇ ಇದ್ದಲ್ಲಿ ಕಾಂಗ್ರೆಸ್ ಏನು ಮಾಡಲಿದೆ ಎಂಬ ಪ್ರಶ್ನೆಗೆ, "ಕಾಂಗ್ರೆಸ್ ಮುಂದೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ," ಎಂದು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
"ಸರಕಾರ ರಚನೆಗೆ ಬೇಕಾದಷ್ಟು ಸಂಖ್ಯಾಬಲ ಹೊಂದಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಸರಕಾರ ರಚನೆಗೆ ಆಹ್ವಾನಿಸಿದೆ ರಾಜ್ಯಪಾಲರಿಗೆ ಬೇರೆ ದಾರಿ ಇಲ್ಲ," ಎಂದು ಸುರ್ಜೇವಾಲ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ತೀರ್ಮಾನಿಸಿದೆ ಎಂಬ ವರದಿಗಳ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಗ್ವಿಯವರಿಗೆ ಕಾಂಗ್ರೆಸ್ ಬುಲಾವ್ ನೀಡಿದೆ. ದೆಹಲಿಯಲ್ಲೇ ಇರುವಂತೆ ಅವರಿಗೆ ಕಾಂಗ್ರೆಸ್ ಸೂಚಿಸಿದೆ.