ಟಿಕೆಟ್ ರಾಜಕೀಯ: ಸಿದ್ದರಾಮಯ್ಯ ಮೇಲೆ ಹೈಕಮಾಂಡ್ಗೆ ಏಕಿಷ್ಟು ನಂಬಿಕೆ?
Recommended Video

ನಿನ್ನೆ (ಏಪ್ರಿಲ್ 15) ಕಾಂಗ್ರೆಸ್ ಪಕ್ಷ 218 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಿದೆ. ಸತತ ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ನಡೆದ ಹೈ ಡ್ರಾಮಾ ಬಳಿಕ ಅಳೆದು ಸುರಿದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಇಲ್ಲದೆ ಟಿಕೆಟ್ ಹಂಚಿಕೆ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹೇಳಿದ್ದಾರಾದರೂ, ಅದು ಕೇವಲ ಬಾಯುಪಚಾರದು ಮಾತು ಎಂಬುದು ಎಲ್ಲರಿಗೂ ಅರಿವಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಮೇಲ್ನೋಟಕ್ಕೆ ಕಣ್ಣಾಡಿಸಿದರೂ ಸಾಕು ತಿಳಿದುಹೋಗುತ್ತದೆ, ಇದು ಸಿದ್ದರಾಮಯ್ಯ ಅವರ ಪ್ರಭಾವದಿಂದ ತಯಾರಾಗಿರುವ ಪಟ್ಟಿ ಎಂದು.
ಜೆಡಿಎಸ್ ಪಕ್ಷದಿಂದ ಹಾರಿಬಂದ ಅಷ್ಟೂ ಜನಕ್ಕೆ ಟಿಕೆಟ್ ಭಾಗ್ಯ ದೊರೆತಿರುವುದು ಸಿದ್ದರಾಮಯ್ಯ ಅವರ ಕೃಪಾಪಟಾಕ್ಷದಿಂದಲೇ ಎನ್ನಲಾಗಿದೆ. ಕಾಂಗ್ರೆಸ್ ನ ಹಿರಿಯರನ್ನೇ ಎದುರುಹಾಕಿಕೊಂಡು ಪಕ್ಷಕ್ಕೆ ಕರೆದಂತ ಅಶೋಕ್ ಖೇಣಿಗೂ ಟಿಕೆಟ್ ದಯಪಾಲಿಸಲಾಗಿದೆ. ಇದಕ್ಕೆ ಮೂಲ ಕಾಂಗ್ರೆಸ್ಸಿಗರ ಭಾರಿ ವಿರೋಧದ ಹೊರತಾಗಿಯೂ ಟಿಕೆಟ್ ಕೊಡಿಸಿರುವುದನ್ನು ಗಮನಿಸಿದರೆ ತಿಳಿಯುತ್ತದೆ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಗೆಲುವಾಗಿರುವುದು.
ಪಕ್ಷಾಂತರಿಗಳಿಗೆ ಟಿಕೆಟ್ ಕೊಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಬಿಗಿ ಪಟ್ಟು ಹಿಡಿದಿದ್ದರೂ ಸಹಿತ ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಮಣೆ ಹಾಕಿದೆ. ಸಿದ್ದರಾಮಯ್ಯ ವಲಸಿಗರಾದರೂ ಸಹಿತ ಕಾಂಗ್ರೆಸ್ ಹೈಕಮಾಂಡ್ ಮೂಲ ಕಾಂಗ್ರೆಸ್ಸಿಗರಿಗಿಂತಲೂ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಹೆಚ್ಚು ಮಣೆ ಹಾಕುತ್ತಿದೆ. ಈ ಬಾರಿಯ ಅಭ್ಯರ್ಥಿಗಳ ಪಟ್ಟಿಯಲ್ಲಂತೂ ಅದು ಢಾಳಾಗಿ ಕಣ್ಣಿಗೆ ರಾಚುತ್ತಿದೆ.
ಆದರೆ ಮೂಲ ಕಾಂಗ್ರೆಸ್ಸಿಗರಿಗಿಂತಲೂ, ವಲಸಿಗ ಸಿದ್ದರಾಮಯ್ಯ ಮೇಲೆ ಹೈಕಮಾಂಡ್ಗೆ ಏಕಿಷ್ಟು ನಂಬಿಕೆ? ಇಲ್ಲಿಗೆ ಕೆಲವು ಕಾರಣಗಳು

ಮೋದಿ ಮುಂದೆ ಮಂಡಿ ಊರದ ಸಿದ್ದರಾಮಯ್ಯ
ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು ಮೋದಿಯನ್ನು ಎದುರಿಸಲು ಸ್ಪಷ್ಟವಾಗಿ ಸೋತರು ಆದರೆ ಸಿದ್ದರಾಮಯ್ಯ ಮೋದಿ ಮುಂದೆ ಮಂಡಿ ಊರಲಿಲ್ಲ, ಮೋದಿಯನ್ನು ದಿಟ್ಟತನದಿಂದ ಎದುರಿಸುತ್ತಿದ್ದಾರೆ. ಮೋದಿ ವಿರುದ್ಧ ಮಾತಿನ ಸೆಣೆಸಾಟವೇ ಆಗಲಿ ಬಿಜೆಪಿ ವಿರುದ್ಧ ರಾಜಕೀಯ ಪಟ್ಟುಗಳನ್ನು ಹಾಕುವುದರಲ್ಲೇ ಆಗಲಿ ಸಿದ್ದರಾಮಯ್ಯ ಧೈರ್ಯ ಪ್ರದರ್ಶಿಸಿದರು. ಇದು ಕಾಂಗ್ರೆಸ್ ಹೈಕಾಮಂಡ್ಗೆ ಸಿದ್ದರಾಮಯ್ಯ ಮೇಲೆ ನಂಬಿಕೆ ಹೆಚ್ಚಿಸಿದೆ.

ನುಡಿದಂತೆ ನಡೆದಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಆಡಿದಂತೆ ಮಾಡಿ ತೋರಿಸಿದ್ದರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ಗೆ ನೀಡಿದ ಮಾತಿನಂತೆ ಗೆದ್ದು ತೋರಿಸಿದ್ದರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಈಗಿನಷ್ಟು ಪ್ರಭಾವಿ ಅಲ್ಲದಿದ್ದರೂ ಸಹಿತ ಅವರ ಪ್ರಚಾರ ತಂತ್ರ, ಸಂಘಟನಾ ಶಕ್ತಿಯನ್ನು ಹೈಕಮಾಂಡ್ ಗಮನಿಸಿತ್ತು.

ಗುಜರಾತ್ನಲ್ಲಿ ಇಲ್ಲದ್ದು, ಇಲ್ಲಿದೆ
ಇತ್ತೀಚೆಗಷ್ಟೆ ಗುಜರಾತ್ ಚುನಾವಣೆ ಮುಗಿಸಿರುವ ರಾಹುಲ್ ಗಾಂಧಿಗೆ ಸ್ಥಳೀಯ ನಾಯಕರ ಪ್ರಭಾವದ ಶಕ್ತಿಯ ಅರಿವಿದೆ. ಗುಜರಾತ್ನಲ್ಲಿ ರಾಹುಲ್, ಜಿಗ್ನೇಶ್, ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ v/s ಮೋದಿ ಎಂದು ಬಿಂಬಿತವಾಗಿತ್ತು. ಸ್ಥಳೀಯವಾಗಿ ಕಾಂಗ್ರೆಸ್ನ ಪ್ರಭಾವಿ ನಾಯಕರಿಲ್ಲದಿರುವುದು ಗುಜರಾತ್ ಸೋಲಿಗೆ ಕಾರಣಗಳಲ್ಲೊಂದು ಎನ್ನಲಾಗಿತ್ತು. ಹಾಗಾಗಿ ಕರ್ನಾಟಕದಲ್ಲಿ ಉತ್ತಮ ಪ್ರಭಾವ ಹೊಂದಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನ 'ಎಲೆಕ್ಷನ್ ಫೇಸ್'ನಂತೆ ಬಳಸುತ್ತಿದೆ.

ಸಮುದಾಯದ ಮೇಲಿರುವ ಹಿಡಿತ
ಸಿದ್ದರಾಮಯ್ಯ ಅವರಿಗೆ ತಮ್ಮ ಮತ್ತು ದಲಿತ ಸಮುದಾಯದ ಮೇಲಿರುವ ಹಿಡಿತದ ಬಗ್ಗೆ ಹೈಕಮಾಂಡ್ಗೆ ಸ್ಪಷ್ಟವಾಗಿ ಅರಿವಿದೆ. ಅವರ ಅಹಿಂದದ ಶಕ್ತಿಯನ್ನು ಹೈಕಮಾಂಡ್ ಈ ಮುಂಚೆಯೇ ನೋಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯ ಪಾಲೂ ದೊಡ್ಡದೇ ಇದೆ. ಹಾಗಾಗಿ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ವಿರುದ್ಧ ಹೋಗಿ ಅಹಿಂದದ ದ್ವೇಷ ಕಟ್ಟಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಿದ್ದವಿಲ್ಲ.

ನೆಚ್ಚಿನ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ವಲಸಿಗರಾದರೂ ಸಹಿತ ಮೂಲ ಕಾಂಗ್ರೆಸ್ಸಿನ ಹಲವು ಶಾಸಕರ ಸಚಿವರ ಒಲವು ಪಡೆದುಕೊಂಡಿದ್ದಾರೆ. ಡಿಕೆಶಿ, ಗುಂಡೂರಾವ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ. ತಮ್ಮ ಸಚಿವ ಸಂಪುಟಕ್ಕೆ ಸಾಕಷ್ಟು ಸ್ವತಂತ್ರ ನೀಡುವ ಜೊತೆಗೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರ ಬೆನ್ನಿಗೆ ನಿಂತಿದ್ದರು ಸಿದ್ದರಾಮಯ್ಯ. ಜೊತೆಗೆ ಪರಮೇಶ್ವರ್ ಅವರೊಂದಿಗಿನ ಮುನಿಸನ್ನೂ ಸಿದ್ದರಾಮಯ್ಯ ಅವರು ಭಾಗಷಃ ಶಮನ ಮಾಡಿಕೊಂಡಂತಿದೆ. ಹಲವು ಮೂಲ ಕಾಂಗ್ರೆಸ್ಸಿಗರಿಗಿಂತಲೂ ಹೆಚ್ಚಿಗೆ ಪಕ್ಷದ ಒಳಗೆ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎನ್ನಲಾಗುತ್ತಿದೆ.

ವಿರೋಧ ಪಕ್ಷದ ನಾಯಕನಾಗಿ ಮಾಡಿದ ಕಾರ್ಯ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಣ್ಮಣಿ ಆಗಲು ಕಾರಣ ವಿರೋಧಪಕ್ಷದ ನಾಯಕರಾಗಿದ್ದಾಗ ಮಾಡಿದ ಕಾರ್ಯ. ರಾಜಕೀಯದಲ್ಲಿ ಅನುಭವಿಗಳಾದರೂ ಆಡಳಿತದಲ್ಲಿ ಅನನುಭವಿಗಳಾಗಿದ್ದ ಬಿಜೆಪಿ ಪಾಳಯವನ್ನು ಅವರು ಇಕ್ಕಟ್ಟಿಗೆ ಸಿಲುಕಿಸಿದ ಪರಿ ಜೊತೆಗೆ ಬಳ್ಳಾರಿಗೆ ಕಾಲ್ನಡಿಗೆ ಮಾಡಿ ಕಾಂಗ್ರೆಸ್ಗೆ ಕಂಟಕವಾಗಿದ್ದ ರೆಡ್ಡಿಗಳನ್ನು ಬಗ್ಗುಬಡಿದ ಪರಿ ಹೈಕಮಾಂಡ್ಗೆ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸ ಹೆಚ್ಚಿಸಿತ್ತು.

ದೆಹಲಿ ರಾಜಕಾರಣ ರಾಜ್ಯ ರಾಜಕಾರಣ
ರಾಜ್ಯ ರಾಜಕಾರಣದಲ್ಲಿ ದೆಹಲಿ ರಾಜಕಾರಣ ಮಾಡುವವರು ತಲೆ ಹಾಕಬಾರದು ಎಂಬ ಅಭಿಪ್ರಾಯವನ್ನು ಹೈಕಮಾಂಡ್ ತಳೆದಂತಿದೆ. ಹಾಗಾಗಿಯೇ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ ಎನ್ನಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಗೆ ಖರ್ಗೆ ಅವರದ್ದೇ ಉಸ್ತುವಾರಿ ಇರಲಿದೆ ಎನ್ನಲಾಗಿದೆ.












Click it and Unblock the Notifications