Lok Sabha Elections 2024: ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದು ಗ್ಯಾರಂಟಿ?
ಬೆಳಗಾವಿ, ಮಾರ್ಚ್ 27: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಣಕಣ ರಂಗೇರುತ್ತಿದೆ. 28 ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಸ್ತಿತ್ವ ಸಾಧಿಸಲೇಬೇಕು ಎಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಕಾರ್ಯತಂತ್ರ ಹೆಣೆದಿವೆ. ಸುಮಾರು 20 ವರ್ಷಗಳಿಂದ ಒಂದಂಕಿ ಸೀಟು ಗೆಲ್ಲುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್ ಹಣೆಬರಹ ಈ ಬಾರಿಯಾದರೂ ಬದಲಾಗಲಿದೆಯೇ?. ಬದಲಾಗುತ್ತದೆ ಎನ್ನುವುದಾದರೆ, ಅದರ ಕಾರಣಗಳೇನು? ಎಂಬ ವರದಿ ವಿಶ್ಲೇಷಣೆ ಇಲ್ಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 2008ರ ಚುನಾವಣೆಯಿಂದ ನಿರಂತರವಾಗಿ ಒಂದಂಕಿ ಸೀಟುಗಳೇ ಬಂದಿವೆ. ಅಂದರೆ ಒಟ್ಟು 28 ಸ್ಥಾನಗಳ ಪೈಕಿ ಕೇವಲ 8, 9 ಈ ರೀತಿಯಲ್ಲಿ ಸ್ಥಾನಗಳು ಬಂದಿವೆ. 2019ರಲ್ಲಿ ಕೇವಲ ಒಂದು ಸೀಟು ಮಾತ್ರ ಕಾಂಗ್ರೆಸ್ ಗೆದ್ದಿತ್ತು.

1999ರಲ್ಲಿ ಬರೋಬ್ಬರಿ 18 ಸ್ಥಾನ ಗಳಿಸಿದ್ದ ಕಾಂಗ್ರೆಸ್ ನಂತರ ಒಂದಂಕಿಗೆ ಇಳಿಕೆ ಆಗಿತ್ತು. ಮತ್ತೆ ಅಲ್ಲಿಂದ ಈವರೆಗೆ ಹೆಚ್ಚು ಸ್ಥಾನ ಗಳಿಸುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಲೆ ಬಂತು. ಆದರೆ 2024ರಲ್ಲಿ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗಿದೆ. ಈ ಭಾರಿ ಕಾಂಗ್ರೆಸ್ಗೆ ಅದೃಷ್ಟ ಒಳಿಯುವುದು ಗ್ಯಾರೆಂಟಿ ಎನ್ನುತ್ತಿವೆ ರಾಜಕೀಯ ಮೂಲಗಳು.
ಕಾಂಗ್ರೆಸ್ 'ಕೈ' ಹಿಡಿಯಲಿವೆ 'ಭರವಸೆ'ಗಳು
ಕರ್ನಾಟಕದ ಆಡಳಿತ ಪಕ್ಷವಾದ ಕಾಂಗ್ರೆಸ್ ವಿಧಾನಸಭೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ ಕಾರಣ ಪಕ್ಷದ ನಾಯಕರಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿದೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರೇ ಆದರೂ, ಸಿಎಂ ಸ್ಥಾನದ ಮೇಲೆ ಕನಸಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದೆ.
ಇನ್ನೂ ಆಡಳಿತ ಪಕ್ಷವಾದ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಇತ್ತ ವಿಪಕ್ಷ ಬಿಜೆಪಿಯಲ್ಲಿನ ಬಂಡಾಯದ ಬಿಸಿ ಕಾಂಗ್ರೆಸ್ಗೆ ವರದಾನವಾಗುವ ಸಾಧ್ಯತೆ ಇದೆ.

ವರ್ಚಸ್ಸು ತಂದು ಕೊಟ್ಟ ಗ್ಯಾರೆಂಟಿಗಳು
ಕಾಂಗ್ರೆಸ್ ಹೇಳಿದಂತೆ ಐದು ಗ್ಯಾರೆಂಟಿಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಪಕ್ಷಕ್ಕೆ ಈ ಭರವಸೆಗಳು ವರ್ಚಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ಕರ್ನಾಟಕ ಕಾಂಗ್ರೆಸ್ ನಿರ್ಧಾರ ಬೇರೆ ರಾಜ್ಯಗಳಲ್ಲೂ ಭರವಸೆ ಹುಟ್ಟು ಹಾಕಿವೆ. ಮಹಿಳಾ ಮತಗಳು ಸೆಳೆಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಈ ಎಲ್ಲ ಕಾರಣಗಳಿಂದ ಭರವಸೆಯ ಯೋಜನೆಗಳು ಕಾಂಗ್ರೆಸ್ 'ಕೈ' ಹಿಡಿಯವುದು ಗ್ಯಾರೆಂಟಿ ಎನ್ನಲಾಗುತ್ತಿದೆ.
ಲೋಕಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಸಮುದಾಯ, ಹಿರಿತನ ವರ್ಚಸ್ಸು ಆಧಾರದ ಜೊತೆಗೆ ಯುವಕರಿಗೂ ಟಿಕೆಟ್ ನೀಡುವಲ್ಲಿ ಹೆಚ್ಚು ಗಮನ ಹರಿಸಿದೆ. ಇಲ್ಲಿ ಬಂಡಾಯಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದೆ. ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದ್ದು, ಶೀಘ್ರವೇ ಘೋಷಣೆ ಆಗಲಿದೆ.
20 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್
ವಿಧಾನಸಭಾ ಚುನಾವಣೆ ಫಲಿತಾಂಶ, ಸಾಮಾಜಿಕ ನ್ಯಾಯದ ಮೇಲೆ ಸರ್ಕಾರ ಕೈಗೊಂಡ ಕೆಲಸಗಳು ಕಾಂಗ್ರೆಸ್ಗೆ ವಿಶ್ವಾಸ ಮೂಡಿಸಿವೆ. ಇದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಪಕ್ಷವು ಈ ಭಾರಿ 20 ಸ್ಥಾನ ಗೆಲ್ಲುವ ತವಕದಲ್ಲಿದೆ. ಬಿಜೆಪಿ ಮಣಿಸಲು ತಯಾರಿಯೋಂದಿಗೆ ಆಖಾಡಕ್ಕೆ ಇಳಿದಿದೆ.
ಕರ್ನಾಟಕಕ್ಕೆ ಅದರಲ್ಲೂ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನ್ಯಾಯ ಆಗುತ್ತಿವೆ ಎಂಬುದನ್ನು ಗಟ್ಟಿಯಾಗಿ ತಿಳಿಸಿದ ಕಾಂಗ್ರೆಸ್, ಈ ವಿಚಾರವನ್ನು ಮುನ್ನೆಲೆಗೆ ತಂದಿತು. ಇದೇ ವೇಳೆ ಚುನಾವಣಾ ಬಾಂಡ್ ವಿಚಾರ ಎಲ್ಲೆಡೆ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಪರ ಜನರ ಗ್ರಹಿಕೆ ಬದಲಾಗಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾ, ಬಂಡಾಯ ಕಾಂಗ್ರೆಸ್ನಲ್ಲಿ ವಿಶ್ವಾಸ ಹೆಚ್ಚಾಗುವಂತೆ ಮಾಡಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ಗೆ ಪರವಾದ ಬೆಳವಣಿಗೆಗಳು
ವಿಧಾನಸಭೆಯಲ್ಲಿನ ಬಿಜೆಪಿಯ ಹೀನಾಯ ಸೋಲು ಕಾಂಗ್ರೆಸ್ಗೆ ಕೇಸರಿಪಡೆ ಮೆಟ್ಟಿ ನಿಲ್ಲುವ ತಾಕತ್ತು ತಂದುಕೊಟ್ಟಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ಬಿಜೆಪಿ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ. ಅನ್ನಭಾಗ್ಯ, ಬರ ಪರಿಹಾರ, ಅನುದಾನ ಹಂಚಿಕೆಯ ಅಂಶಗಳನ್ನು ಕಾಂಗ್ರೆಸ್ ಜನರೆದುರು ಪ್ರಸ್ತಾಪಿಸಿದೆ.
ಹಾಲಿ ಸಂಸದರಿಗೆ ಟಿಕೆಟ್ ಮಿಸ್: ಬಂಡಾಯದ ಬಿಸಿ
ಬಿಜೆಪಿಯು ವಿಧಾನಸಭೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾಡಿದಂತಹ ಯಡವಟ್ಟನ್ನು ಲೋಕಸಭೆಯಲ್ಲೂ ಮಾಡಿದೆ. ಹಾಲಿ ಸಂಸದರಿಗೆ ಕೈ ಕೊಟ್ಟ ಬಿಜೆಪಿ ನೀರ್ಣಯ ಮುಳುವಾಗಬಹುದು. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಾಂಗ್ರೆಸ್ಗೆ ವರದಾನ ಆಗಬಹುದು. ಬಿಜೆಪಿ ಕೆಲ ನಾಯಕರು ಬಂಡಾಯವೆದ್ದಿದ್ದಾರೆ. ಬಿಜೆಪಿಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯ ಇನ್ನೂ ಶಮನವಾಗಿಲ್ಲ.
ಮೈಸೂರು ಕ್ಷೇತ್ರದಲ್ಲಿ ತನ್ನದೇ ಆದ ಮತ ಹೊಂದಿರುವ ಪ್ರತಾಪ್ ಸಿಂಹ ಬದಲಾಗಿ ರಾಜಮನೆತನದವರಿಗೆ ಟಿಕೆಟ್ ಕೊಡಲಾಗಿದೆ. ತುಮಕೂರಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಟಿಕೆಟ್ ತಪ್ಪಿದೆ. ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಬಂಡಾಯವೆದ್ದರೂ ನಾಯಕರ ಮಾತಿಗೆ ಗೌರವ ಕೊಟ್ಟು ಸುಮ್ಮನಾಗಿದ್ದಾರೆ. ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಇವರ ಬೇಸರ ಶಮನವಾದರೂ ಬೂದಿ ಮುಚ್ಚಿದ ಕೆಂಡಂದಂತಿದೆ.
ಬಿಜೆಪಿಯ ಭಿನ್ನಮತ, ನಿರ್ಧಾರ ಕಾಂಗ್ರೆಸ್ಗೆ ಅಸ್ತ್ರ
ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ನಿರ್ಧಾರಗಳು ಸ್ವಪಕ್ಷದ ಕೆಲ ನಾಯಕರನ್ನು ಕೆರಳಿಸಿವೆ. ಹೀಗಾಗಿ ಬಿಎಸ್ವೈ-ಬಿವಿವೈ ವಿರುದ್ಧ ನಿರ್ಭಿತಿಯಿಂದ ಮಾತನಾಡುವ ಪರಿಪಾಠ ಶುರುವಾಗಿದೆ. ಇದು ಪಕ್ಷಕ್ಕೆ ಮುಜುಗರ ತರುವ ಜೊತೆಗೆ ಕೆಲವು ಸತ್ಯಗಳು ಬಹಿರಂಗವಾಗಲು ಕಾರಣವಾಗಿದೆ. ಇದನ್ನು ಪ್ರತಿಸ್ಪರ್ಧಿ ಕಾಂಗ್ರೆಸ್ ಅಸ್ತ್ರವಾಗಿ ಬಳಕೆ ಮಾಡುತ್ತಿದೆ.
ಇತ್ತ ಕಾಂಗ್ರೆಸ್ನ ಲೋಪ ದೋಷ ತೋರ್ಪಡಿಸುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಡಿಕೆ ಶಿವಕುಮಾರ್ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಈ ಎಲ್ಲ ಅಂಶಗಳು ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಬರಲು (ಎರಡಂಕಿ ಸೀಟು) ದಾರಿಯಾದರೆ, ಬಿಜೆಪಿಗೆ ಗೆಲುವಿನ ದಾರಿ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications