'ಶೂನ್ಯ ಬಡ್ಡಿಯಲ್ಲಿ 19.97 ಲಕ್ಷ ರೈತರಿಗೆ 15841.48 ಕೋಟಿ ರೂ. ಕೃಷಿ ಸಾಲ'
ಬೆಂಗಳೂರು, ಜನವರಿ 21: ಬರಗಾಲದಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಶೂನ್ಯ ಬಡ್ಡಿ ದರದಲ್ಲಿ 15,841.48 ಕೋಟಿ ರೂ. ಸಾಲ ನೀಡುವ ಮೂಲಕ ನಮ್ಮ ಸರಕಾರ ಆಸರೆಯಾಗಿ ನಿಂತಿದೆ. ನಮ್ಮ ಕಾಂಗ್ರೆಸ್ ರೈತಸ್ನೇಹಿ ಸರ್ಕಾರವಾಗಿದೆ ಎಂದು ಶಾಸಕ, ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೂಕ್ತ ಸಮಯದಲ್ಲಿ ಕೃಷಿ ಸಾಲ ನೀಡಿ ರೈತರಿಗೆ ಸ್ಪಂದನೆ ನೀಡಿದೆ. ಆ ಮೂಲಕ ರೈತರ ಅಭ್ಯುದಯಕ್ಕೆ ಕಾಂಗ್ರೆಸ್ ಸರಕಾರ ಕಾರಣವಾಗಿದೆ.ಕಳೆದ ಬಾರಿಗಿಂತ 775.49 ಕೋಟಿ ಹೆಚ್ಚುವರಿ ಸಾಲ ವಿತರಣೆ ಮಾಡುವ ಮೂಲಕ ಸಂಕಷ್ಟ ಕಾಲದಲ್ಲಿ ಅನ್ನದಾತನ ನೆರವಿಗೆ ಸರ್ಕಾರ ಧಾವಿಸಿದ್ದು ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ ಎಂದರೆ ನುಡಿದಂತೆ ನಡೆಯುವ ಪಕ್ಷವಾಗಿದೆ. ರಾಜ್ಯದಲ್ಲಿ ಈಗ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸಿದೆ. ಅಲ್ಲದೆ, ಜನರ ಪ್ರತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ನಮ್ಮ ಸರ್ಕಾರ ಮುಂದಿದೆ ಎಂದು ದಿನೇಶ್ ಗೂಳಿಗೌಡ ವಿವರಿಸಿದ್ದಾರೆ.
ರೈತರ ಸಂಕಷ್ಟಗಳಿಗೆ ನೆರವಾಗುವತ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈವರೆಗೆ 19,97,607 ರೈತರಿಗೆ 15841.48 ಕೋಟಿ ರೂಪಾಯಿ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಣೆ ಮಾಡಿದ್ದು, ಅಗತ್ಯ ಸಂದರ್ಭದಲ್ಲಿ ರೈತರ ಕೈಹಿಡಿಯಲಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
24600 ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ
ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ತಿಂಗಳವರೆಗಿನ ಸಾಧನೆಯಾಗಿದೆ. 21 ಡಿಸಿಸಿ ಬ್ಯಾಂಕ್ ಹಾಗೂ 6040 ಪ್ಯಾಕ್ಸ್ (ಕೃಷಿ ಪತ್ತಿನ ಸಹಕಾರ ಸಂಘಗಳು) ರೈತರಿಗೆ 24600 ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಇದರಲ್ಲಿ ಈಗ 19,97,607 ರೈತರಿಗೆ 15841.48 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಈ ಗುರಿಯನ್ನೂ ಶೀಘ್ರ ತಲುಪುವ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುತ್ತಿದೆ ಎಂದು ದಿನೇಶ್ ಗೂಳಿಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಆಸರೆಯಾಗಿರುವ ಕಾಂಗ್ರೆಸ್ ಸರ್ಕಾರ
ಅಲ್ಪಾವಧಿ ಕೃಷಿ ಸಾಲದ ಅಡಿ 19,63,962.7 ರೈತರಿಗೆ 15,031.72 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ. ಮಧ್ಯಮಾವಧಿ ಕೃಷಿ ಸಾಲದಡಿ 15,771 ರೈತರಿಗೆ 536.35 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಇನ್ನು ದೀರ್ಘಾವಧಿ ಕೃಷಿ ಸಾಲದಡಿ 17,873 ರೈತರಿಗೆ 273.41 ಕೋಟಿ ರೂಪಾಯಿ ಸಾಲವನ್ನು ನೀಡುವ ಮೂಲಕ ಒಟ್ಟಾರೆಯಾಗಿ 19,97,607 ರೈತರಿಗೆ 15,841.48 ಕೋಟಿ ರೂಪಾಯಿ ಸಾಲವನ್ನು ನೀಡಿದಂತಾಗಿದೆ ಎಂದು ದಿನೇಶ್ ಗೂಳಿಗೌಡ ಮಾಹಿತಿ ನೀಡಿದ್ದಾರೆ.
ನಮ್ಮದು ರೈತಪರ-ಜನಪರ ಸರ್ಕಾರ
ರಾಜ್ಯದಲ್ಲಿ ಎಂದೂ ಕಂಡರಿಯದ ಭೀಕರ ಬರಗಾಲ ಬಂದಿದ್ದು, 48 ಸಾವಿರ ಹೆಕ್ಟೇರ್ ಪ್ರದೇಶವು ಬರಗಾಲಕ್ಕೆ ತುತ್ತಾಗಿವೆ. ಈ ಎಲ್ಲ ರೈತರಿಗೆ ಶೀಘ್ರದಲ್ಲೇ ಬರ ಪರಿಹಾರ ನೀಡುವ ಕೆಲಸವನ್ನು ನಮ್ಮ ರಾಜ್ಯ ಸರ್ಕಾರ ಮಾಡಲಿದೆ. ಈ ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ 72 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು. ರೈತರ ಸಂಕಷ್ಟಕ್ಕೆ ಸದಾ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸರ್ಕಾರವಾಗಿದೆ. ಅದು ಕೇಂದ್ರದಲ್ಲಾಗಿರಲಿ ಅಥವಾ ರಾಜ್ಯದಲ್ಲಾಗಿರಲಿ ಜನಪರ ಸರ್ಕಾರ ನಮ್ಮದಾಗಿದೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಹೆಚ್ಚುವರಿಯಾಗಿ 776.48 ಕೋಟಿ ರೂ. ಸಾಲ ವಿತರಣೆ
ಕಾಂಗ್ರೆಸ್ ಸರ್ಕಾರದ ವತಿಯಿಂದ ಜನಪರ ಆಡಳಿತ ನೀಡಲಾಗುತ್ತಿದೆ. ಜನಪರ ಕಾಳಜಿಯಿಂದ ಇಂದು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನು ರೈತರಿಗೆ ನೀಡುವ ಸಾಲ ವಿತರಣೆಯನ್ನು ನೋಡುವುದಾದರೆ ಈವರೆಗೆ ಕಳೆದ ಬಾರಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಲಾಗಿದೆ. ಕಳೆದ ಬಾರಿ ಈವರೆಗೆ ಒಟ್ಟು 15,065.99 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿತ್ತು. ಈ ವರ್ಷ 15,841.48 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಅಂದರೆ ಹೆಚ್ಚುವರಿಯಾಗಿ 776.48 ಕೋಟಿ ರೂ. ಸಾಲ ವಿತರಣೆ ಮಾಡಿದಂತಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.












Click it and Unblock the Notifications