ಕಾಫಿ ಬೆಳೆಗಾರರ ಸಮಸ್ಯೆ: ನಿರ್ಮಲಾ ಸೀತಾರಾಮನ್ ಭೇಟಿಯಾದ ಶೋಭಾ ಕರಂದ್ಲಾಜೆ
ನವದೆಹಲಿ, ನ 25: ರಾಜ್ಯದ ಕಾಫಿ ಬೆಳೆಗಾರರ ಸಮಸ್ಯೆಯನ್ನು ಹೊತ್ತು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬುಧವಾರ (ನ 25) ಭೇಟಿಯಾದರು.
"ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಕಾಫಿ ಬೆಳೆಗಾರರು ನಿತ್ಯವೂ ಅತಿವೃಷ್ಟಿ, ಅನಾವೃಷ್ಟಿ, ಕಾರ್ಮಿಕರ ಸಮಸ್ಯೆ, ಬೆಳೆಗೆ ತಕ್ಕ ಬೆಲೆ ಇಲ್ಲದಿರುವುದು ಸೇರಿದಂತೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ"ಎಂದು ಶೋಭಾ ಕರಂದ್ಲಾಜೆ ಹೇಳಿದರು.
"ರೋಗಬಾಧೆ ಮುಂತಾದ ಸಮಸ್ಯೆಗಳಿಂದ ಬಸವಳಿದ ಕಾಫಿ ಉದ್ಯಮವನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯದ ಪರಿಹಾರ ಹಾಗೂ ಸಾಲ ನೀತಿಗಳನ್ನು ಬೆಳೆಗಾರರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕು"ಎಂದು ಕೇಂದ್ರ ಹಣಕಾಸು ಸಚಿವರಲ್ಲಿ ಶೋಭಾ ಕರಂದ್ಲಾಜೆ ಮನವಿ ಮಾಡಿದರು.
ಬೆಳೆಗಾರರ ಸಂಕಷ್ಟಕ್ಕೆ ಸಹಾಯ ಮಾಡುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿ, ಅತಿವೃಷ್ಟಿ ಮುಂತಾದ ಪರಿಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
Recommended Video
"ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬದ್ಧವಾಗಿದೆ, ಈ ನಿಟ್ಟಿನಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸೀತರಾಮನ್ ಅವರು ಭರವಸೆಯನ್ನು ನೀಡಿರುತ್ತಾರೆ" ಎಂದು ಶೋಭಾ ಕರಂದ್ಲಾಜೆ, ಭೇಟಿಯ ನಂತರ ಹೇಳಿದರು.