Congress Government: ಹೈಕಮಾಂಡ್ ಎಚ್ಚರಿಕೆಯ ಬಳಿಕವೂ ಸಿಎಂ ಹೇಳಿಕೆಯ ಸದ್ದು: ವರಿಷ್ಠರ ಸೂಚನೆಗೂ ಬೆಲೆಯಿಲ್ಲ
ಬೆಂಗಳೂರು, ಜನವರಿ 28: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರ್ಕಾರ ರಚನೆಯ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಲೆಕ್ಕಾಚಾರವಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದು, ಎರಡುವರೆ ವರ್ಷದ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಯುತ್ತಾರಾ ಎನ್ನುವ ಅನುಮಾನ ಶುರುವಾಗಿದೆ.
ಈಗಾಗಲೇ ಮುಖ್ಯಮಂತ್ರಿ ಹಾಗೂ ಕೆಪಿಪಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಹೇಳಿಕೆ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಎಐಸಿಸಿ ವರಿಷ್ಠರು ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ, ಸಚಿವರು ಶಾಸಕರು ಇದೀಗ ಮತ್ತೆ ಸಿಎಂ ಬದಲಾವಣೆ ವಿಷಯವಾಗಿ ಚರ್ಚೆ ಮುಂದುವರೆಸಿದ್ದಾರೆ. ಈ ಮೂಲಕ ವರಿಷ್ಠರ ಸೂಚನೆಗೂ ಕಾಂಗ್ರೆಸ್ ನಾಯಕರು ಬೆಲೆಯನ್ನ ನೀಡುತ್ತಿಲ್ಲವಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಸಚಿವ ಡಿ, ಸುಧಾಕರ್ ಅವರು ಮಾತನಾಡಿ, ಸಿದ್ದರಾಮಯ್ಯನವರು ತಾವೇ 5 ವರ್ಷ ಸಿಎಂ ಎಂದು ಹೇಳಿಲ್ಲ, ಕಾಂಗ್ರೆಸ್ ಐದು ವರ್ಷವೂ ಅಧಿಕಾರದಲ್ಲಿ ಇರುತ್ತೆ ಎಂದಷ್ಟೇ ಹೇಳಿದ್ದಾರೆ ಎಂದಿದ್ದಾರೆ. ಈ ಮೂಲಕ ಸಚಿವ ಡಿ, ಸುಧಾಕರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಪೂರ್ಣಾವಧಿ ಅಧಿಕಾರಲ್ಲಿರುತ್ತೇನೆ ಎಂದು ಹೇಳಿಲ್ಲ, ನಾವೇ ಐದು ವರ್ಷ ಅಧಿಕಾರದಲ್ಲಿ ಇರ್ತೇವೆ ಎಂದಿದ್ದಾರೆ. ಅಂದರೆ, ಕಾಂಗ್ರೆಸ್ ಸರ್ಕಾರ 5 ವರ್ಷ ಅವಧಿ ಪೂರೈಸುತ್ತೆ ಎಂದರು.
ಇನ್ನೂ ಸಚಿವ ಡಿ ಸುಧಾಕರ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಜಮೀರ್ ಅಹಮದ್ ಖಾನ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಅಪ್ರಸ್ತುತ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಇಲಾಖೆಯ ಸಚಿವ ಜಮೀರ್ ಅಹಮದ್ ಅವರು, ಸಚಿವರಾದ ಡಿ ಸುಧಾಕರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಮುಖ್ಯಮಂತ್ತಿಗಳ ಖುರ್ಚಿ ಖಾಲಿ ಇಲ್ಲ ಎಂದು ಸಮರ್ಥಿಸಿಕೊಂಡರು. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಖುರ್ಚಿಯೂ ಖಾಲಿ ಇಲ್ಲ ಎಂದರು.
ಇನ್ನೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. 'ಅವರಂತಹ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಇದಕ್ಕಾಗಿಯೇ ನಾನು ಅವರ ಜೊತೆಗೆ ಇದ್ದೇನೆ. ಅವರು ಐದು ವರ್ಷಗಳ ಕಾಲ ಸಿಎಂ ಆಗಿರಬೇಕು ಎನ್ನುವುದರಲ್ಲಿ ಮೊದಲಿಗ ಎಂದು ಹೇಳಿದರು.
ಜಮೀರ್ ಹುಟ್ಟು ಶ್ರೀಮಂತನಾಗಿದ್ದಾನೆ. ಆತನಿಗೆ ರಾಜಕೀಯಕ್ಕೆ ಬಂದು ಹಣ ಗಳಿಸುವ ಅವಶ್ಯಕತೆಯಿಲ್ಲ. ಆದರೆ, ಬಡವರ ಬಗ್ಗೆ ಹೆಚ್ಚು ಕಾಳಜಿಯಿದೆ. ಹೀಗಾಗಿ ನನಗಿಂತ 13 ವರ್ಷ ಚಿಕ್ಕವನಾಗಿರುವ ಜಮೀರ್ ಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿರುವೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.












Click it and Unblock the Notifications