ಲಾಕ್ಡೌನ್, ಕರ್ಫ್ಯೂ, ನೈಟ್ ಕರ್ಫ್ಯೂ ಯಾವುದೂ ಇಲ್ಲ: ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 17: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದಾರೆ.
ಇದಾದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸುದ್ದಿಗಾರರೊಂದಿಗೆ ಮೋದಿ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಜತೆಗೆ ರಾಜ್ಯದಲ್ಲಿ ಲಾಕ್ಡೌನ್, ಕರ್ಫ್ಯೂ, ನೈಟ್ ಕರ್ಫ್ಯೂ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಭೆಯ ಮುಖ್ಯಾಂಶಗಳು
*ಲಾಕ್ಡೌನ್, ಕರ್ಫ್ಯೂ, ನೈಟ್ ಕರ್ಫ್ಯೂ ಯಾವುದೂ ಇಲ್ಲ, ಸಾಮಾಜಿಕ ಜೀವನ ಎಂದಿನಂತೆ ನಡೆಯಲಿದೆ, ಆದರೆ ಜನರು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
*ಕೊರೊನಾ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ವಾತಾವರಣದಲ್ಲಿರುವ ವೈರಸ್ ನಾಶವಗುವುದಿಲ್ಲ, ಹೀಗಾಗಿ ಹೆಚ್ಚೆಚ್ಚು ಎಚ್ಚರವಹಿಸಬೇಕೆಂದು ಮೋದಿ ಹೇಳಿದ್ದಾರೆ.
*ಮಾಸ್ಕ್ ಕಡ್ಡಾಯ ಮಾಡುವುದು, ಸಾರ್ವಜನಿಕ ಅಂತರದ ಬಗ್ಗೆ ಎಚ್ಚರಿಕೆವಹಿಸುವುದು, ಟೆಸ್ಟ್ ಟ್ರ್ಯಾಕ್ ಟ್ರೀಟ್ ಮಾದರಿಯಲ್ಲಿ ಪರೀಕ್ಷೆ, ಸಂಪರ್ಕ ಶೋಧ ಮತ್ತು ಚಿಕಿತ್ಸೆಯನ್ನು ತೀವ್ರಗೊಳಿಸಲು ಹೇಳಿದ್ದಾರೆ.
*ಕೊರೊನಾ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಟೆಸ್ಟಿಂಗ್ಗಳನ್ನು ಹೆಚ್ಚಿಸುವಂತೆ ಮೋದಿ ಹೇಳಿದ್ದಾರೆ.
*ಬೆಂಗಳೂರು, ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದೆ ಎಂಬುದನ್ನು ಪ್ರಧಾನಿ ಗಮನಕ್ಕೆ ತರಲಾಗಿದೆ. ಜಾಗೃತಿ ಅಭಿಯಾನ ನಡೆಸುವುದು, ಮದುವೆಯಂಥ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಿ ಎಂದು ಪ್ರಧಾನಿ ಹೇಳಿದ್ದಾರೆ.
*ಮೂರು ಸಲಹೆಗಳನ್ನು ಕೇಂದ್ರ ನಾಯಕರು ನೀಡಿದ್ದಾರೆ, ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಒಳಾಂಗಣ ಸಭೆಯಲ್ಲಿ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದ್ದಾರೆ.
*ಜನರಲ್ಲಿ ಭಯ ಸೃಷ್ಟಿಸುವ ಅಗತ್ಯವಿಲ್ಲ, ಲಸಿಕೆ ವೇಸ್ಟೇಜ್ ಆಗದಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದ್ದಾರೆ.
*ರಾಜ್ಯದಲ್ಲಿ ಶೇ,.93ರಷ್ಟು ಆರ್ಟಿಪಿಸಿಆರ್ ಪರೀಕ್ಷೆ ನಡೆಸಿರುವುದಕ್ಕೆ ಕೇಂದ್ರ ಸರ್ಕಾರ ಶ್ಲಾಘಿಸಿದೆ.
*2042 ಆಸ್ಪತ್ರೆಗಳ ಪೈಕಿ 1 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುತ್ತಿಲ್ಲ, ಅಂತಹ ಆಸ್ಪತ್ರೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು.












Click it and Unblock the Notifications