Wayanad: ಕೇರಳದಲ್ಲೂ ಸಿದ್ದರಾಮಯ್ಯ ಕ್ರೇಜ್.. ವೇದಿಕೆ ಏರುತ್ತಿದ್ದಂತೆ ಶಿಳ್ಳೆ-ಚಪ್ಪಾಳೆ!
ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳು, ಬೆಂಬಲಿಗರನ್ನು ಹೊಂದಿದ್ದಾರೆ. ಅವರು ಪ್ರತಿ ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವಾಗಲೂ ಅವರ ಅಭಿಮಾನಿಗಳು ಜೋರಾಗಿ ಕಿರುಚುವುದು, ಘೋಷಣೆಗಳನ್ನು ಕೂಗುವುದು ಕಾಮನ್. ಆದರೆ, ಪಕ್ಕದ ಕೇರಳದಲ್ಲೂ ಸಿದ್ದರಾಮಯ್ಯ ಫುಲ್ ಹವಾ ಕ್ರಿಯೇಟ್ ಮಾಡಿದ್ದಾರೆ ಅಂದ್ರೆ ನೀವೆಲ್ಲ ನಂಬಲೇಬೇಕು..
ಹೌದು ಇಂದು ಕೇರಳದ ವಯನಾಡು ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಈ ಹಿಂದೆ ವಯನಾಡು ಸಂಸದರಾಗಿದ್ದ ರಾಹುಲ್ ಗಾಂಧಿ ಅವರು ಬೇರೆ ಕ್ಷೇತ್ರದಿಂದ ಗೆದ್ದಿರುವುದರಿಂದ ಅಲ್ಲಿ ಉಪಚುನಾವನೆ ಘೋಷಣೆಯಾಗಿದೆ. ಹಾಗಾಗಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಇಂದು ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಅಲ್ಲಿ ಅದ್ಧೂರಿ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಾರದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಭಾಗಿಯಾಗಿದ್ದರು.
ಈ ವೇಳೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ವೇದಿಕೆಗೆ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟರು. ಅಲ್ಲಿವರೆಗೆ ಸೈಲೆಂಟ್ ಆಗಿದ್ದ ಜನರು, ಸಿದ್ದರಾಮಯ್ಯ ಅವರನ್ನು ಕಂಡು ಜೋರಾಗಿ ಕಿರುಚಾಡಿದ್ದಾರೆ. ಶಿಳ್ಳೆ ಚಪ್ಪಾಳೆ ಹಾಕಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಬಳಿಕ ಸಿದ್ದರಾಮಯ್ಯ ಅವರು ತಮ್ಮದೇ ಸ್ಟೈಲಲ್ಲಿ ಅಲ್ಲಿದ್ದವರಿಗೆ ಕೈಬೀಸಿ ವೇದಿಕೆಯಲ್ಲಿ ಆಸೀನರಾದರು.
ಪ್ರಿಯಾಂಕಾ ಗಾಂಧಿ ಅವರು ಭರ್ಜರಿ ಬಹುಮತದಿಂದ ವಯನಾಡು ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ. ಬಿಜೆಪಿ ನಮ್ಮ ಸೈದ್ಧಾಂತಿಕ ವಿರೋಧಿ. ಬಿಜೆಪಿ ಸೋಲಿಸಲು ಎಲ್ಲ ಜಾತ್ಯತೀತ ಶಕ್ತಿ ಮತ್ತು ಮೌಲ್ಯಗಳೊಂದಿಗೆ ನಾವು ಜೊತೆ ಸೇರುತ್ತೇವೆ. ಬಿಜೆಪಿ ಸೋಲಿಸಿ ದೇಶ ಉಳಿಸುವುದು ನಮ್ಮ ಮೊದಲ ಗುರಿ ಎಂದು ಸಿದ್ದರಾಮಯ್ಯ ಹೇಳಿದರು. ವಯನಾಡಿನಲ್ಲಿ ರಾಹುಲ್ ಗಾಂಧಿ ಅವರು ಆರಂಭಿಸಿದ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗಲು ಪ್ರಿಯಾಂಕಾ ಗಾಂಧಿ ಅವರು ಅತ್ಯಂತ ಸಮರ್ಥರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬಳಿಕ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾವು ಬಹಳ ವಿಚಿತ್ರವಾದ ಟೈಮಲ್ಲಿ ಜೀವನ ನಡೆಸುತ್ತಿದ್ದೇವೆ. ಈಗ ಅಧಿಕಾರದಲ್ಲಿರುವವರು (ಬಿಜೆಪಿ) ದ್ವೇಷದ ಸಿದ್ಧಾಂತವನ್ನು ಎಲ್ಲೆಡೆ ಹರಡುತ್ತಿರುವ ದಿನಗಳಲ್ಲಿ ನಾವೆಲ್ಲ ಇದ್ದೇವೆ. ಅವರು ಪ್ರಜಾಪ್ರಭುತ್ವವನ್ನೇ ನಾಶ ಮಾಡಲು ಹಿಂಜರಿಯುವುದಿಲ್ಲ. ಜನರ ನ್ಯಾಯಕ್ಕಾಗಿ ರಾಹುಲ್ ಗಾಂಧಿ ದೇಶದುದ್ದಕ್ಕೂ ಸಂಚರಿಸಿದ. ನಿಮ್ಮ ಬೆಂಬಲ ಸಿಗದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.
ವಯನಾಡಿನ ಜನರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಬಾಂಧವ್ಯವು ಆಳವಾದ ಪ್ರೀತಿ, ವಿಶ್ವಾಸ ಮತ್ತು ಹಂಚಿಕೆಯ ಆದರ್ಶಗಳಲ್ಲಿ ಮುಖ್ಯವಾಗಿದೆ. ಪ್ರಿಯಾಂಕಗಾಂಧಿ ಈ ಪರಂಪರೆಯನ್ನು ಮುಂದುವರಿಸಲು ಹೆಜ್ಜೆ ಇಡುತ್ತಿದ್ದಾರೆ.ಇಂದು ಇಲ್ಲಿ ಪ್ರಿಯಾಂಕಾ ಅವರು ಒಂದು ಭರವಸೆಯಾಗಿದ್ದಾರೆ. ವಯನಾಡ್ ಮತ್ತು ಇಲ್ಲಿನ ಜನರಿಗೆ ಅವರು ಚಾಂಪಿಯನ್ ಆಗುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.












Click it and Unblock the Notifications