ಸಿಎಂ, ಡಿಸಿಎಂ ನಡುವೆ 'ತಂದಿಡುವ' ಎಂ.ಪಿ.ರೇಣುಕಾಚಾರ್ಯ ಹೇಳಿಕೆ
ಬೆಂಗಳೂರು, ಡಿ 18: "ಸಮರ್ಥ ಮುಖ್ಯಮಂತ್ರಿಯಿದ್ದಾಗ, ಉಪಮುಖ್ಯಮಂತ್ರಿ ಹುದ್ದೆಯಾಕೆ ಬೇಕು" ಎಂದು ಹೇಳಿದ್ದ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಮತ್ತೊಂದು ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
"ನಾನು ಅಶ್ವಥ್ ನಾರಾಯಣ್ ಅವರಿಂದ ನೀತಿ ಪಾಠ ಕಲಿಯಬೇಕಾಗಿಲ್ಲ. ನಾನು ಬಿಜೆಪಿಯ ತತ್ವ ಸಿದ್ದಾಂತವನ್ನು ಒಪ್ಪಿ, 1990ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹವಾಯಿತು. ಅಲ್ಲಿಂದ, ಬಿಜೆಪಿಗೆ ಬಂದವನು" ಎಂದು ರೇಣುಕಾಚಾರ್ಯ ಹೇಳಿದ್ದಾರೆ.
"ನಾನು ಸಂಘಟನೆಯಲ್ಲಿ ಬೆಳೆದವನು, ಸಂಘ ಪರಿವಾರದ ಹಿನ್ನಲೆ ನನಗೂ ಇದೆ. ನಾನೇನು ಜನತಾ ಪರಿವಾರದಿಂದ ಬಂದವನಲ್ಲ. ನನಗೆ ಎಲ್ಲಿ, ಏನು, ಯಾವಾಗ ಮಾತನಾಡಬೇಕು ಎನ್ನುವುದು ಗೊತ್ತಿದೆ. ಅಶ್ವಥ್ ನಾರಾಯಣ್ ಅವರಿಂದ ಕಲಿಯುವ ಅವಶ್ಯಕತೆ ನನಗಿಲ್ಲ" ಎಂದು, ರೇಣುಕಾಚಾರ್ಯ ಕಿಡಿಕಾರಿದ್ದಾರೆ.

"ಡಿಸಿಎಂ ಬೇಡ ಎನ್ನುವುದು ಎಲ್ಲಾ ಶಾಸಕರ ಮತ್ತು ಜನರ ಅಭಿಪ್ರಾಯ, ಅದನ್ನೇ ನಾನು ಹೇಳಿರುವುದು. ನನಗೆ ನಮ್ಮ ಪ್ರಧಾನಿ ಮತ್ತು ರಾಷ್ಟ್ರಾಧ್ಯಕ್ಷರ ಮೇಲೆ ಗೌರವವಿದೆ. ಇದೇ, ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಏನೇನು ಮಾತನಾಡಿದ್ದರು ಎನ್ನುವುದು ನನಗೆ ಗೊತ್ತಿದೆ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.
"ಐದು ವರ್ಷದ ಹಿಂದೆ ಬಿಬಿಎಂಪಿ ಚುನಾವಣೆಯ ವೇಳೆ, ಏನೇನು ಮಾತನಾಡಿದರೆ ಎನ್ನುವುದು ನನಗೆ ಗೊತ್ತಿದೆ. ಅದನ್ನು ಮತ್ತೆ ನಾನು ಉಲ್ಲೇಖ ಮಾಡುವುದಿಲ್ಲ. ನಾನು ಹಾದಿಬೀದಿಯಲ್ಲಿ ಮಾತನಾಡಿಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದು" ಎಂದು, ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ದ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
"ಟಿಕೆಟ್ ನೀಡುವ ವಿಚಾರದಲ್ಲಿ ಯಡಿಯೂರಪ್ಪನವರನ್ನು, ಅಶ್ವಥ್ ನಾರಾಯಣ್ ಪ್ರಶ್ನಿಸಿರಲಿಲ್ಲವೇ" ಎಂದು ಹೇಳಿದ ರೇಣುಕಾಚಾರ್ಯ, " ಅವರು (ಅಶ್ವಥ್ ನಾರಾಯಣ್) ಡಿಸಿಎಂ ಸ್ಥಾನವನ್ನು ತ್ಯಾಗ ಮಾಡಿ, ಪಕ್ಷಕ್ಕಾಗಿ ಕೆಲಸ ಮಾಡಲಿ" ಎಂದು ರೇಣುಕಾಚಾರ್ಯ ಹೇಳಿದ್ದಾರೆ. "ಪಕ್ಷದ ಮುಖಂಡರು, ಬಹಿರಂಗ ಹೇಳಿಕೆಯನ್ನು ನೀಡಬಾರದು" ಎಂದು ಅಶ್ವಥ್ ನಾರಾಯಣ್ ಹೇಳಿದ್ದರು.












Click it and Unblock the Notifications