ಬೆಂಗಳೂರು: ವಾರಕ್ಕೆ 2.5 ಕಿಮೀಯಂತೆ 1,100 ಕಿಮೀ ಪಾದಾಚಾರಿ ಕಾಮಗಾರಿ ಪೂರೈಕೆಗೆ ಒತ್ತು: ಜಿಬಿಎ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾಲಿಕೆಗಳಿಂದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಅಥವಾ ಒಂದಿಲ್ಲ ಒಂದು ಹೊಸ ಉಪಕ್ರಮಗಳು ಜಾರಿಯಲ್ಲಿರುತ್ತವೆ. ಅದೇ ರೀತಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ ನಲ್ಲಿ 10 ಕಿಲೋ ಮೀಟರ್ ಪಾದಚಾರಿ ಮಾರ್ಗ ಅಭಿವೃದ್ಧಿ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಹಾಗೂ ಸುರಕ್ಷ 75 ಉಪಕ್ರಮ ಜಾರಿಗೊಳಿಸಲಾಗುತ್ತಿದೆ. ಇದರಿಂದ ನಗರ ಅಂದ ಹೆಚ್ಚಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಈ ಸಂಬಂಧ ಎಂಜಿನಿಯರ್ಗಳಿಗೆ ಶನಿವಾರ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಪಾಲ್ಗೊಂಡು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸುರಕ್ಷ 75 ಜಂಕ್ಷನ್, ವಾರ್ಡ್ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕುರಿತು ನಿರ್ದೇಶಿಸಿದರು.

1,100 ಕಿ.ಮೀ ಕಾಮಗಾರಿ ಅಭಿವೃದ್ಧಿ ಗುರಿ ಸಾಧಿಸಿ
ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ 10 ಕಿಲೋ ಮೀಟರ್ ಪಾದಚಾರಿ ಮಾರ್ಗ ಅಭಿವೃದ್ಧಿ ಸಂಬಂಧಿಸಿದಂತೆ, ಪಾಲಿಕೆಯ ಪ್ರತಿ ವಾರ್ಡ್ನಲ್ಲಿ ವಾರಕ್ಕೆ 2.5 ಕಿ.ಮೀ.ನಂತೆ ಕಾಮಗಾರಿ ಪೂರೈಸಬೇಕು. ಒಟ್ಟು ಸುಮಾರು 1,100 ಕಿ.ಮೀ ಕಾಮಗಾರಿ ಗುರಿ ಸಾಧಿಸಬೇಕು. ಮುಖ್ಯ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು, ತಮ್ಮ ಅಧೀನ ಅಧಿಕಾರಿಗಳಿಗೆ ರಸ್ತೆಗಳನ್ನು ನಿಯೋಜಿಸಿ, ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದರು.
ರಸ್ತೆ ಕರ್ಬ್ಗಳು, ಪಾದಚಾರಿ ಮಾರ್ಗಗಳ ದುರಸ್ತಿ ಇತ್ಯಾದಿ ಎಲ್ಲ ಕೆಲಸಗಳು ಸಮರ್ಪಕವಾಗಿ ಆಗಬೇಕು. ಸಿಲ್ಟ್ ಆಂಡ್ ಟ್ರ್ಯಾಕ್ಟರ್ ಬಳಸಿ ರಸ್ತೆ ಬದಿಯ ಹೂಳು ತೆರವು ಕಾರ್ಯಾಚರಣೆ ಪೂರೈಸಬೇಕು. ಅಂಡರ್ ಪಾಸ್ ಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಪಾದಾಚಾರಿಗಳ ಸಮಸ್ಯೆಗಳಿಗೆ ಪರಿಹಾರ ಅತ್ಯಗತ್ಯ
ಪಶ್ಚಿಮ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಕೆ. ವಿ. ಅವರು ಮಾತನಾಡಿ, ಸಮರ್ಪಕ ಡ್ರೈನೇಜ್ ವ್ಯವಸ್ಥೆ, ಶೋಲ್ಡರ್ ಡ್ರೇನ್ ಸಹಿತವಾದ ಉತ್ತಮ ರಸ್ತೆಗಳು ಇರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಪಾಲಿಕೆಯಲ್ಲಿ ಇಂಜಿನಿಯರಿಂಗ್ ವಿಭಾಗ ಮಾತೃ ವಿಭಾಗವಿದ್ದಂತೆ. ಅಭಿಯಂತರರು ತಂಡಗಳನ್ನು ಮುನ್ನಡೆಸಬೇಕು. ಪಾದಚಾರಿಗಳ ಹಕ್ಕುಗಳನ್ನು ಗೌರವಿಸುವುದು ಅತ್ಯಗತ್ಯ. ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಸಲಹೆ ಕೊಟ್ಟರು.
ನಗರದ ಮರುವಿನ್ಯಾಸ, ರಸ್ತೆ 'ಸುರಕ್ಷ 75' ಉಪಕ್ರಮ
ಕಾರ್ಯಾಗಾರದಲ್ಲಿ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳು ಹೇಗೆ ಕಾಣಬೇಕು, ನಗರದ ಅಂದ ಹೆಚ್ಚಿಸಲು ಮುಖ್ಯ ಆಯುಕ್ತರು ಅಭಿಯಂತರರಿಗೆ ಪ್ರಮುಖ ನಿರ್ದೇಶನ ನೀಡಿದರು. ಅವುಗಳ ಪಟ್ಟಿ ಮುಂದಿದೆ.
* ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಒಂದೊಂದು ಮಾದರಿ ವಾರ್ಡ್ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
* 200 ಬ್ಕ್ಯಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಬೇಕು.
* ಒಣತ್ಯಾಜ್ಯ ಸಂಗ್ರಹ ಸ್ಥಳಕ್ಕೆ ವ್ಯವಸ್ಥೆ ಮಾಡಬೇಕು.
* ಕಸ ಸಂಗ್ರಹಕ್ಕೆ 'ಕಸ ಕಿಯೋಸ್ಕ್' ಸ್ಥಾಪಿಸುವ ಬಗ್ಗೆ ಆಲೋಚಿಸಬಹುದು.
* ಮೂಲದಲ್ಲಿಯೇ ಒಣತ್ಯಾಜ್ಯ ಹಸಿತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಮೂಡಿಸಿ.
* ಬಲ್ಕ್ ಜನರೇಟರ್ಸ್ ವಿರುದ್ಧ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
* ಆರೋಗ್ಯ ಅಧಿಕಾರಿಗಳು ವ್ಯಾಪಾರ ಪರವಾನಗಿ (ಟ್ರೇಡ್ ಲೈಸನ್ಸ್) ಸಂಗತಿಗಳ ಬಗ್ಗೆ ಕಟ್ಟುನಿಟ್ಟಾಗಿರಬೇಕು.
* ಇನ್ನು ಒಂದು ತಿಂಗಳ ಅವಧಿಯಲ್ಲಿ 10 ಕಿ.ಮೀ. ರಸ್ತೆಯುದ್ದಕ್ಕೆ ಟ್ರೇಡ್ ಲೈಸನ್ಸ್ ಕುರಿತಂತೆ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
* ಎಇಇ, ಜೆಇ ಗಳನ್ನು ಒಂದೊಂದು ರಸ್ತೆಗೆ ಜವಾಬ್ದಾರರನ್ನಾಗಿಸಬೇಕು
* ಹೊರಗುತ್ತಿಗೆ ಅಭಿಯಂತರರು ಕೂಡ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಕೆಲಸ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
* ಸ್ಕೈವಾಕ್, ಬಸ್ ನಿಲ್ದಾಣ, ಅಂಡರ್ ಪಾಸ್, ಫ್ಲೈ ಓವರ್, ಪಾದಚಾರಿಗಳ ಸಬ್ ವೇ ಇತ್ಯಾದಿ ಸ್ಥಳಗಳನ್ನು ಪರಿಶೀಲಿಸಿ ನ್ಯೂನತೆ ಸರಿಪಡಿಸುವಂತೆ ತಿಳಿಸಿದರು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿ ಸುಮಾರು 1,100 ಕಿ. ಮೀ ವಾರ್ಡ್ ರಸ್ತೆ, ಪಾದಚಾರಿ ಮಾರ್ಗ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಬಗ್ಗೆ ವಾಕಲೂರು ಎನ್.ಜಿ.ಓ ಸಂಸ್ಥಾಪಕ ಅರುಣ್ ಪೈ ತಾಂತ್ರಿಕ ಕಾರ್ಯಾಗಾರ ನಡೆಸಿದರು. ಪಾಲಿಕೆಯ ಎಲ್ಲ ವಿಭಾಗದ ಅಭಿಯಂತರರು, ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.













Click it and Unblock the Notifications