ವಾಜಪೇಯಿ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿ, ಅಜಾತಶತ್ರು: ಎಚ್ಡಿಕೆ ಸಂತಾಪ
ಬೆಂಗಳೂರು, ಆಗಸ್ಟ್ 16: ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ, ಅಜಾತ ಶತ್ರು, ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತ ಪಡಿಸಿದ್ದಾರೆ.
"ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ" ಎನ್ನುವ ಅವರ ಕವನದ ಸಾಲೊಂದು ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ವಾಜಪೇಯಿ ಅವರು ಭ್ರಾತೃತ್ವ ಮತ್ತು ಸಹಬಾಳ್ವೆಯಲ್ಲಿ ಅಪರಿಮಿತ ನಂಬಿಕೆ ಇಟ್ಟವರು. ಅವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ಸಂಸದೀಯ ಪಟುವಾಗಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಅವರ ಮಾಡಿದ ಪ್ರಯತ್ನಗಳು ಶ್ಲಾಘನೀಯ.
ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ.

ಅವರ ನಿಧನದಿಂದ ದೇಶ ಒಬ್ಬ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಕುಮಾರಸ್ವಾಮಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಾಜಪೇಯಿಯವರ ಪಾರ್ಥಿವ ಶರೀರದ ದರ್ಶನಕ್ಕೆ ದೆಹಲಿಗೆ ಹೋಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಬಹುಪಾಲು ಹೋಗುತ್ತೇನೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅವರೊಬ್ಬರು ರಾಷ್ಟ್ರ ಮೆಚ್ಚುವ ನಾಯಕ, ದೇಶದಲ್ಲಿ ಶೋಕಾಚರಣೆ ಈಗಾಗಲೇ ಘೋಷಣೆಯಾಗಿದೆ. ಕರ್ನಾಟಕದಲ್ಲೂ ಶೋಕಾಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಾಜಪೇಯಿ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತ ಪಡಿಸಿರುವ ಕರ್ನಾಟಕ ಸರ್ಕಾರ ಆಗಸ್ಟ್ 16 ರಿಂದ 22 ರ ವರೆಗೆ ರಾಜ್ಯದಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಇರುವ ಕಾರಣ ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು ಹೊರತು ಪಡಿಸಿ ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17 ರಂದು ಒಂದು ದಿನ ರಜೆ ಘೋಷಿಸಲಾಗಿದೆ.












Click it and Unblock the Notifications