ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ!
ಬೆಂಗಳೂರು, ನ. 06: ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರು ತೀರಿಹೋಗಿ ಇಂದಿಗೆ (ಶುಕ್ರವಾರಕ್ಕೆ) ಎಂಟು ದಿನಗಳಾದವು. ಕಳೆದ ಶುಕ್ರವಾರ ಬೆಳಗ್ಗೆ ಕನ್ನಡಿಗರ ಪ್ರೀತಿಯ ಅಪ್ಪು ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಅವರ ಅಗಲಿಕೆಯ ಶೋಕದಿಂದ ಕುಟುಂಬಸ್ಥರು, ಅಭಿಮಾನಿಗಳು ಈಗಲೂ ಹೊರಗೆ ಬಂದಿಲ್ಲ. ಈ ಸಲ ದೀಪಾವಳಿ ಹಬ್ಬದ ಸಂಭ್ರಮ ಕೂಡ ನಾಡಿನಲ್ಲಿ ಕಂಡು ಬಂದಿಲ್ಲ.
ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯ ನೋವು ಕುಟುಂಬಸ್ಥರನ್ನು, ಅಭಿಮಾನಿಗಳನ್ನು, ಅವರ ಸ್ನೇಹಿತರನ್ನು, ಭಾರತೀಯ ಚಿತ್ರರಂಗದವರನ್ನು ಹಾಗೂ ನಾಡಿನ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ದೀಪಾವಳಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಸಚಿವರಾದ ಆರ್. ಅಶೋಕ್, ಡಾ. ಸಿ. ಎನ್. ಅಶ್ವಥ್ ನಾರಾಯಣ, ರಾಘವೇಂದ್ರ ರಾಜಕುಮಾರ, ಚಿನ್ನೇಗೌಡ, ಎಸ್. ಎ. ಗೋವಿಂದರಾಜ್, ಶಿವರಾಜಕುಮಾರ ಮತ್ತು ಡಾ. ರಾಜಕುಮಾರ್ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು. ಭೇಟಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋವಿನಿಂದಲೇ ಮಾತನಾಡಿದ್ದಾರೆ.
ಅಪ್ಪು ನಮ್ಮನ್ನು ಅಗಲಿ ಎಂಟು ದಿನಗಳಾದವು!
"ಅಪ್ಪು ನಮ್ಮನ್ನು ಅಗಲಿ ಎಂಟು ದಿನಗಳಾದವು ಎಂದು ಮಾತು ಆರಂಭಿಸಿದ ಸಿಎಂ ಬೊಮ್ಮಾಯಿ ಅವರು, "ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ" ಎಂದರು. ಶುಕ್ರವಾರ ಸಂಜೆ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಬೊಮ್ಮಾಯಿ ಮಾತನಾಡಿದ್ದಾರೆ. "ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎಂಟು ದಿನಗಳಾದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಅಪ್ಪು ಇಲ್ಲವಾಗಿರುವುದು ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಇಡೀ ಕರ್ನಾಟಕದ ಜನತೆ ಕುಟುಂಬದೊಂದಿಗೆ ಇದೆ ಎಂದು ಧೈರ್ಯ ಹೇಳಿದ್ದೇವೆ" ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ನಾವು ನಮ್ಮ ಕರ್ತವ್ಯ ಮಾಡಿದ್ದೇವೆ!
ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಕುಟುಂಬದವರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. "ಅಪ್ಪು ಅಂತ್ಯಕ್ರಿಯೆಯನ್ನು ಅತ್ಯಂತ ಪ್ರೀತಿ ಮತ್ತು ಗೌರವಗಳಿಂದ, ಆತ್ಮೀಯತೆಯಿಂದ ಹಾಗೂ ಭಾವನಾತ್ಮಕವಾಗಿ ನಡೆಸಿಕೊಟ್ಟಿರುವುದಕ್ಕಾಗಿ ಕುಟುಂಬದವರು ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹಾಗೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಕರ್ತವ್ಯವನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಡಲಾಗಿದೆ ಎಂದು ಅಪ್ಪು ಕುಟುಂಬದವರಿಗೆ ಹೇಳಿದ್ದೇವೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.
ಅಪ್ಪು ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ಸಹಾಯ!
"ಕುಟುಂಬದವರು ಮುಂದೆ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ. ಅಪ್ಪು ಅವರಿಗಿದ್ದ ಜನಮನ್ನಣೆ, ಗೌರವಗಳಿಗೆ ತಕ್ಕ ಹಾಗೆ ಮುಂದಿನ ಕಾರ್ಯಗಳನ್ನು ನೆರವೇರಿಸಲಾಗುವುದು. ಅಪಾರ ಜನಸ್ತೋಮ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿ ದರ್ಶನವನ್ನು ಪಡೆಯುತ್ತಿದ್ದಾರೆ. ಜೊತೆಗೆ ಸರ್ಕಾರ ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುತ್ತದೆ" ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು!
ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಗತ್ಯವಿರುವ ಭದ್ರತೆ ನೀಡಲಾಗುವುದು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ನಟ ಪುನೀತ್ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕೆಂಬ ಅಭಿಮಾನಿಗಳ ಅಭಿಲಾಷೆಯಂತೆ ಕ್ರಮ ವಹಿಸಲಾಗುವುದು. ಸದ್ಯ ಪುನೀತ್ ಅವರ ಕುಟುಂಬ ದುಃಖದಲ್ಲಿದ್ದು, ನವೆಂಬರ್ 16ರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಅಪ್ಪು ಅವರಿಗೆ ಪದ್ಮಶ್ರೀ ನೀಡುವ ವಿಚಾರ ಸರ್ವಸಮ್ಮತವಾಗಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ.
Recommended Video