ಕೆಟ್ಟುನಿಂತ ಟೂರಿಸ್ಟ್ ವಾಹನ; ಸ್ಪ್ಯಾನರ್ ಹಿಡಿದ ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು, ಡಿ 25: ತನ್ನ ಖಡಕ್ ನಿರ್ಧಾರದಿಂದ ಮನೆಮಾತಾಗಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಣ್ಣಾಮಲೈ, ಕೆಟ್ಟುನಿಂತ ವಾಹನ ರಿಪೇರಿಗೆ ಮುಂದಾಗಿ ಮತ್ತೆ ಸಾರ್ವಜನಿಕರ ಪ್ರಶಂಸೆಗೊಳಗಾಗಿದ್ದಾರೆ.
ಭಾನುವಾರ (ಡಿ 24) ಬೆಂಗಳೂರಿನಿಂದ ಹೊರಟಿದ್ದ ಪ್ರವಾಸಿ ವಾಹನ ತಡರಾತ್ರಿ ಚಿಕ್ಕಮಗಳೂರು - ಶೃಂಗೇರಿ ರಸ್ತೆಯಲ್ಲಿ ಪಂಚರ್ ಆಗಿ ನಿಂತಿತ್ತು. ಮಹಿಳೆಯರು ಸೇರಿದಂತೆ ಐದು ಜನ ವಾಹನದಲ್ಲಿದ್ದರು. ಆ ವೇಳೆ ಕೊಪ್ಪದಿಂದ, ಚಿಕ್ಕಮಗಳೂರಿಗೆ ಅದೇ ರಸ್ತೆಯಲ್ಲಿ ಆಗಮಿಸುತ್ತಿದ್ದ ಅಣ್ಣಾಮಲೈ, ಸಮಸ್ಯೆ ಏನು ಎಂದು ಕೇಳಿ ತಾವೇ ಖುದ್ದಾಗಿ ಸ್ಪ್ಯಾನರ್ ಹಿಡಿದು ಟಯರ್ ಅನ್ನು ಬಿಚ್ಚಲು ಮುಂದಾಗಿದ್ದಾರೆ.
ತಾನು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದಿದ್ದಾಗ, ಮೆಕ್ಯಾನಿಕ್ ಗೆ ಕರೆ ಮಾಡಿ ತಕ್ಷಣ ಬರುವಂತೆ ಸೂಚಿಸಿದ್ದಾರೆ. ಮೆಕ್ಯಾನಿಕ್ ಸ್ಥಳಕ್ಕೆ ಬಂದ ನಂತರ, ಗಾಡಿ ರೆಡಿ ಮಾಡಿ ಚಿಕ್ಕಮಗಳೂರಿಗೆ ತೆಗೆದುಕೊಂಡು ಬನ್ನಿ ಎಂದು ಮೆಕ್ಯಾನಿಕಿಗೆ ಅಣ್ಣಾಮಲೈ ಸೂಚಿಸಿದ್ದಾರೆ.

ಆನಂತರ ಎಲ್ಲಾ ಪ್ರವಾಸಿಗರನ್ನು ತಮ್ಮ ವಾಹನದಲ್ಲೇ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದು ಡ್ರಾಪ್ ಕೊಡಿಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರೊಬ್ಬರು ಈ ರೀತಿಯಲ್ಲೂ ಸಹಾಯ ಮಾಡುತ್ತಾರೆಂದು ಪ್ರವಾಸಿಗರು ಆಶ್ಚರ್ಯ ಪಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಜಿಲ್ಲೆಯ ಕರಗಡ ಗ್ರಾಮದ ವ್ಯಕ್ತಿ, ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಗರ್ಭಿಣಿ ಮಾಡಿ ಪರಾರಿಯಾಗಲು ಮುಂದಾಗಿದ್ದ. ಈ ಬಗ್ಗೆ ಯುವತಿ ಅಣ್ಣಾಮಲೈಗೆ ದೂರು ನೀಡಿದ್ದರು. ಯುವತಿಯ ಸಮಸ್ಯೆ ಪರಿಹಾರಕ್ಕೆ ಮುಂದೆ ಬಂದ ಅಣ್ಣಾಮಲೈ, ಎರಡೂ ಕುಟುಂಬದವರ ಜೊತೆ ಮಾತನಾಡಿ ನಗರದ ದೇವಾಲಯವೊಂದರಲ್ಲಿ ಮದುವೆ ಮಾಡಿಸಿದ್ದರು.
ದತ್ತ ಜಯಂತಿ - ಈದ್ ಮಿಲಾದ್ ಆಚರಣೆಯ ವೇಳೆಯೂ ಎಸ್ಪಿ ತೆಗೆದುಕೊಂಡ ಖಡಕ್ ನಿರ್ಧಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು. ದತ್ತಜಯಂತಿ ಆಚರಣೆ ಬಳಿಕ ಕರೆದಿದ್ದ ಸಭೆಯಲ್ಲಿ ಅಣ್ಣಾಮಲೈ ತಮ್ಮ ಇಲಾಖೆ ವಿರುದ್ಧ ಕೇಳಿಬಂದ ಆರೋಪಕ್ಕೆ ಖಡಕ್ ಉತ್ತರ ನೀಡಿದ್ದರು.
ಗೋರಿಗಳ ಧ್ವಂಸಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎನ್ನುವ ಆರೋಪ ಸಭೆಯಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಅಣ್ಣಾಮಲೈ, ಗೋರಿಗಳು ಎಷ್ಟು ಮುಖ್ಯವೋ ನನಗೆ ನನ್ನ ಪೊಲೀಸರ ರಕ್ಷಣೆಯೂ ಅಷ್ಟೇ ಮುಖ್ಯ. ನನ್ನ ಪೊಲೀಸರಿಗೆ ಏನಾದರೂ ಆದರೆ ಜವಾಬ್ದಾರಿ ಯಾರು. ಅವರ ಮನೆಯವರಿಗೆ ಏನು ಹೇಳುವುದು ಎಂದು ಸಭೆಯಲ್ಲೇ ಎಸ್ಪಿ ಕ್ಲಾಸ್ ತೆಗೆದುಕೊಂಡ್ಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಚಿತ್ರ: ಪಬ್ಲಿಕ್ ಟಿವಿ)












Click it and Unblock the Notifications