ಚಾಮರಾಜಪೇಟೆ: ಜಮೀರ್, ಗೌಡ್ರ ಪೈಪೋಟಿಯ ಮಧ್ಯೆ ಬಿಜೆಪಿ ಗೆಲ್ಲುತ್ತಾ?
ಇಬ್ಬರ ನಡುವಿನ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವ ಗಾದೆಮಾತೆಯಂತೆ, ಜಮೀರ್ ಅಹಮದ್ ವರ್ಸಸ್ ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಬಿಜೆಪಿ ಗೆಲುವಿನ ನಗೆಬೀರುತ್ತಾ? ಯಾಕೆ ಸಾಧ್ಯವಿಲ್ಲ ಎನ್ನುವ ಮಾತು ಖುದ್ದು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿರುವ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಚಾಮರಾಜಪೇಟೆ (168) ಕ್ಷೇತ್ರ ಕೂಡಾ ಒಂದು. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಜಮೀರ್, ಭರ್ಜರಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಈ ಬಾರಿ ಅವರಿಗೆ ಹಿಂದಿನ ಚುನಾವಣೆಯಲ್ಲಿದ್ದಷ್ಟು ಅನುಕೂಲ ಪರಿಸ್ಥಿತಿಯಿಲ್ಲ ಎನ್ನುವುದು ಸದ್ಯದ ರಾಜಕೀಯ ಚಿತ್ರಣ.
ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರಿರುವ ಜಮೀರ್ ಅಹಮದ್ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ದೇವೇಗೌಡ್ರು, ಮೊದಲು ಪಾದರಾಯನಪುರ ವಾರ್ಡಿನ ಕೌನ್ಸಿಲರ್ ಇಮ್ರಾನ್ ಪಾಷಾ ಅವರನ್ನು ಜಮೀರ್ ವಿರುದ್ದ ಕಣಕ್ಕಿಳಿಸುವ ತೀರ್ಮಾನಕ್ಕೆ ಬಂದಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಆಮೇಲೆ ಅದೇನಾಯಿತೋ, ಕಾಂಗ್ರೆಸ್ ಪಾಳಯದಲ್ಲಿದ್ದ ಅಲ್ತಾಫ್ ಖಾನ್ ಅವರನ್ನು ಯಾವಾಗ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ದೇವೇಗೌಡರು ಯಶಸ್ವಿಯಾದರೋ, ಇಡೀ ಚಾಮರಾಜಪೇಟೆ ಕ್ಷೇತ್ರದ ಸಮೀಕರಣವೇ ಬದಲಾಗಿದೆ. ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ನಡುವಿನ ಮೇಲಾಟದಲ್ಲಿ ಬಿಜೆಪಿ ಗೆಲುವಿನ ನಗೆಬೀರಲಿದೆಯೇ ಎನ್ನುವುದೀಗ ಎದ್ದಿರುವ ಪ್ರಶ್ನೆ.
ಕಾಂಗ್ರೆಸ್ಸಿನಿಂದ ಜಮೀರ್ ಅಹಮದಿಗೆ ಮತ್ತು ಜೆಡಿಎಸ್ ನಿಂದ ಅಲ್ತಾಫ್ ಖಾನಿಗೆ 'ಬಿ' ಫಾರಂ ಸಿಗುವುದು ಬಹುತೇಕ ಖಚಿತ. ಇನ್ನು ಕಳೆದ ಬಾರಿಯ ಬಿಜೆಪಿಯಿಂದ ಟಿಕೆಟಿನಿಂದ ಸ್ಪರ್ಧಿಸಿ ಸೋತಿದ್ದ ಬಿ ವಿ ಗಣೇಶ್ ಮತ್ತು ಲಹರಿ ವೇಲು ಪಕ್ಷದ ಟಿಕೆಟ್ ಆಕಾಂಕ್ಷಿಗಳು. ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಯಾರಿಗೂ ಖಾತ್ರಿಯಾಗಿಲ್ಲ. ಮುಂದೆ ಓದಿ..

ನಿರ್ಣಾಯಕ ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರ
1957 ರಿಂದ 2013ರ ವರೆಗೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದದ್ದು ಒಂದೇ ಒಂದು ಬಾರಿ. ಅದು 1994ರಲ್ಲಿ ಪ್ರಮೀಳಾ ನೇಸರ್ಗಿ, ಕಾಂಗ್ರೆಸ್ಸಿನ ಆರ್ ವಿ ದೇವರಾಜ್ ಅವರನ್ನು ಸೋಲಿಸಿದ್ದನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚುಕಮ್ಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದೇ ಹೆಚ್ಚು. ಆದರೆ, ಈಬಾರಿ ಇಬ್ಬರು ಮುಸ್ಲಿಂ ಸಮುದಾಯದ ಮುಖಂಡರ ಪೈಪೋಟಿ ಹೆಚ್ಚಾಗಿರುವುದರಿಂದ ಮುಸ್ಲಿಮೇತರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇದು ನಿರ್ಣಾಯಕವಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದು ಮುಸ್ಲಿಂ ಮತ್ತು ದಲಿತ ಮತಗಳು
ಚಾಮರಾಜಪೇಟೆ ಕ್ಷೇತ್ರದಲ್ಲಿನ ಒಟ್ಟು ಏಳು ವಾರ್ಡುಗಳಲ್ಲಿ ಕಾಂಗ್ರೆಸ್ ಕಾರ್ಪೋರೇಟರುಗಳು ಇರುವುದು ಎರಡೇ ಕಡೆ (ಚಾಮರಾಜಪೇಟೆ, ಆಜಾದ್ ನಗರ), ಜೆಡಿಎಸ್ ಮೂರು ಕಡೆ (ಪಾದರಾಯನಪುರ, ಜೆ ಜೆ ನಗರ, ಕೆ ಆರ್ ಮಾರುಕಟ್ಟೆ) ಇನ್ನು ರಾಯಪುರಂ ಮತ್ತು ಛಲವಾದಿ ಪಾಳ್ಯದಲ್ಲಿ ಬಿಜೆಪಿ ಕಾರ್ಪೋರೇಟರುಗಳಿದ್ದಾರೆ. ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದು ಮುಸ್ಲಿಂ ಮತ್ತು ದಲಿತ ಮತಗಳು ಜೊತೆಗೆ ತಮಿಳರು, ತೆಲುಗು ಭಾಷಿಗರು.

ಇಮ್ರಾನ್ ಮತ್ತು ಅಲ್ತಾಫ್ ನಡುವಿನ ಸಂಬಂಧ ಅಷ್ಟಕಷ್ಟೇ.
ಮುಸ್ಲಿಂ ಸಮುದಾಯದ ಈ ಭಾಗದ ಪ್ರಭಾವಿ ಮುಖಂಡ ಅಲ್ತಾಫ್ ಖಾನ್ ಈಗ ಜೆಡಿಎಸ್ ಸೇರಿರುವುದು ಜಮೀರ್ ಅಹಮದಿಗೆ ಆದ ಹಿನ್ನಡೆಯೇ. ಕ್ಷೇತ್ರದ ಆಜಾದ್ ನಗರ, ಪಾದರಾಯನಪುರ ಮತ್ತು ಜೆ ಜೆ ನಗರದಲ್ಲಿ ಮುಸ್ಲಿಂ ಪ್ರಾಭಲ್ಯ ಜಾಸ್ತಿ. ಆದರೆ, ಪಾದರಾಯನಪುರ ವಾರ್ಡಿನ ಜೆಡಿಎಸ್ ಕೌನ್ಸಿಲರ್ ಇಮ್ರಾನ್ ಮತ್ತು ಅಲ್ತಾಫ್ ನಡುವಿನ ಸಂಬಂಧ ಅಷ್ಟಕಷ್ಟೇ. ಜಮೀರ್ ಅಹಮದಿಗೆ ಈ ಅಂಶ ಚುನಾವಣೆಯಲ್ಲಿ ಲಾಭ ತಂದುಕೊಡಬಹುದು.

ಜಮೀರ್ ಸೋಲಿಸಲೇಬೇಕು ಎಂದು ಜೆಡಿಎಸ್ ಕಾರ್ಯಕರ್ತರು
ಮುಸ್ಲಿಂ ಮತ್ತು ದಲಿತ ಸಮುದಾಯದ ಮತ ವಿಭಜನೆಯಾಗಿ ಜೊತೆಗೆ, ತಮ್ಮ ಕಾರ್ಪೋರೇಟರುಗಳು ಇರುವ ಎರಡು ವಾರ್ಡಿನಲ್ಲಿ ಹೆಚ್ಚಿನ ಮತ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿದೆ ಬಿಜೆಪಿ. ಜೊತೆಗೆ, ಏನೇ ಆಗಲಿ ಜಮೀರ್ ಅವರನ್ನು ಸೋಲಿಸಲೇಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಜೊತೆಗೆ, ನಾವು ಗೆಲ್ಲದಿದ್ದರೂ ಪರವಾಗಿಲ್ಲ, ಜಮೀರ್ ಗೆಲ್ಲಬಾರದು ಎನ್ನುವ ನಿರ್ಧಾರಕ್ಕೆ ಬಂದು, ಅದಕ್ಕೆ ತಕ್ಕಂತೆ ಪ್ರಚಾರ ಮಾಡಬಹುದು.

ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಚನೆ
ಜಮೀರ್ ಜೊತೆ ಇನ್ನೊಬ್ಬ ಮುಸ್ಲಿಂ ಅಭ್ಯರ್ಥಿ (ಅಲ್ತಾಫ್) ಅವರನ್ನು ಕಣಕ್ಕಿಳಿಸಿ, ಮತವಿಭಜನೆಯಾಗುವಂತೆ ನೋಡಿಕೊಂಡು, ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಚನೆಯನ್ನು ಜೆಡಿಎಸ್ ಹೊಂದಿದೆ ಎನ್ನುವ ಮಾತೂ ಈ ಭಾಗದಲ್ಲಿ ಕೇಳಿಬರುತ್ತಿದೆ. ಹಾಗಾಗಿ, ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ಹೈಪ್ರೊಫೈಲ್ ಹೋರಾಟದ ನಡುವೆ, ದಲಿತ ಮತ್ತು ಮುಸ್ಲಿಮೇತರ ಮತಗಳು ಬಿಜೆಪಿ ಪರ ವಾಲಿದರೆ, ಬಿಜೆಪಿಗೆ ಗೆಲುವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಾಂಬೂಲ ಇಟ್ಟುಕೊಟ್ಟಂತೆ.












Click it and Unblock the Notifications