ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ 5 ಸವಾಲುಗಳು
ಬೆಂಗಳೂರು, ಮೇ 18; "ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿ. ಕೆ. ಶಿವಕುಮಾರ್ ಒಬ್ಬರೇ ಉಪಮುಖ್ಯಮಂತ್ರಿಯಾಗಿರುತ್ತಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಮೂಲಕ ಗುರುವಾರ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೇ 20ರ ಶನಿವಾರ ಮಧ್ಯಾಹ್ನ12.30ಕ್ಕೆ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಸಂಜೆಯ ವೇಳೆಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, "ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ" ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮುಂದಿನ ಸವಾಲುಗಳು; ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಲಿದ್ದಾರೆ. ಆದರೆ ಸಿದ್ದರಾಮಯ್ಯ ಮುಂದಿನ ಹಾದಿ ಅಷ್ಟು ಸುಲಭವಾಗಿಲ್ಲ. ಸಂಪೂರ್ಣ ಬಹುಮತದ ಸರ್ಕಾರವಿದ್ದರೂ ಸಹ ಹಲವು ಸವಾಲುಗಳನ್ನು ಅವರು ಎದುರಿಸಬೇಕಿದೆ. ಸಿದ್ದರಾಮಯ್ಯ ಮುಂದಿನ 5 ಸವಾಲುಗಳು ಇಲ್ಲಿವೆ...

ಸವಾಲು 1: ಡಿ. ಕೆ. ಶಿವಕುಮಾರ್ & ಟೀಂ ನಡುವಿನ ಬಾಂಧವ್ಯ. ಕರ್ನಾಟಕ ಕಾಂಗ್ರೆಸ್ 2 ಪವರ್ ಸೆಂಟರ್ ಆಗಿದೆ ಎಂಬುದು ಟಿಕೆಟ್ ಹಂಚಿಕೆ ಸಮಯದಿಂದಲೇ ತಿಳಿದಿದೆ. ಈ ಮುಖ್ಯಮಂತ್ರಿ ಆಯ್ಕೆಗೆ ಎಷ್ಟು ಜಟಾಪಟಿ ನಡೆಯಿತು ಎಂಬುದು ಎಲ್ಲರ ಕಣ್ಣ ಮುಂದಿದೆ. ಹೈಕಮಾಂಡ್ ನಾಯಕರ ಸಂಧಾನಸೂತ್ರದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬಹುದು. ಆದರೆ ಉಪಮುಖ್ಯಮಂತ್ರಿಯಾಗುವ ಡಿ. ಕೆ. ಶಿವಕುಮಾರ್ ಮತ್ತು ಅವರ ಟೀಂ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು. ತಮ್ಮ ಬೆಂಬಲಿಗರ ಜೊತೆ ಡಿ. ಕೆ. ಶಿವಕುಮಾರ್ ಬೆಂಬಲಿಗರಿಗೂ ಅನುದಾನ ಹಂಚಿಕೆ ಸೇರಿದಂತೆ ವಿವಿಧ ಸಮಯದಲ್ಲಿ ಆದ್ಯತೆ ನೀಡಬೇಕು. ಇದು ನಿಜಕ್ಕೂ ದೊಡ್ಡ ಸವಾಲು ಆಗಿದೆ.
ಸವಾಲು 2: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ 135 ಶಾಸಕರು ಜಯಗಳಿಸಿದ್ದಾರೆ. ಇವರಲ್ಲಿ ಬಹುತೇಕರು ಹಿರಿಯ ನಾಯಕರು, ವಿವಿಧ ಸಮುದಾಯಕ್ಕೆ ಸೇರಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ರಚನೆ ಮಾಡುವುದು ಸಹ ದೊಡ್ಡ ಸವಾಲು ಆಗಿದೆ. ಸುಮಾರು 38 ಸಚಿವ ಸ್ಥಾನವನ್ನು ಭರ್ತಿ ಮಾಡುವಾಗ 7 ಪ್ಲಸ್ ಸ್ಥಾನಗಳನ್ನು ಡಿ. ಕೆ. ಶಿವಕುಮಾರ್ ಬೆಂಬಲಿಗರಿಗೆ ನೀಡಬೇಕು. ಅಲ್ಲದೇ ಖಾತೆಗಳ ಹಂಚಿಕೆಯಲ್ಲಿಯೂ ಸಮನ್ವಯತೆ ಸಾಧಿಸಬೇಕು.
ಸವಾಲು 3; ಗ್ಯಾರಂಟಿಗಳ ಜಾರಿ; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪಕ್ಷ ಘೋಷಣೆ ಮಾಡಿದ ಗ್ಯಾರಂಟಿಗಳ ಪಾತ್ರ ಬಹಳ ದೊಡ್ಡದು. ಈಗಾಗಲೇ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯದಡಿ 10 ಕೆಜಿ ಅಕ್ಕಿ, ಗೃಹ ಲಕ್ಷ್ಮಿ ಯೋಜನೆಯಡಿ 2 ಸಾವಿರ ಸೇರಿದಂತೆ 5 ಗ್ಯಾರಂಟಿಗಳ ಬಗ್ಗೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯದ ಆರ್ಥಿಕ ಸ್ಥಿತಿ ನೋಡಿಕೊಂಡು ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಸವಾಲಾಗಿದೆ.
ಸವಾಲು 4; ಪಕ್ಷ, ಸರ್ಕಾರ, ಹೈಕಮಾಂಡ್ ಸಮನ್ವಯತೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಸೂತ್ರದಂತೆ 30 ತಿಂಗಳು ಮುಖ್ಯಮಂತ್ರಿಯಾಗಿರಬಹುದು. ಆದರೆ ಈ ಅವಧಿಯಲ್ಲಿ ಪಕ್ಷ, ಸರ್ಕಾರ ಮತ್ತು ಹೈಕಮಾಂಡ್ ನಾಯಕರ ಜೊತೆ ಸಮನ್ವಯತೆ ಸಾಧಿಸಬೇಕು. ಸಂಪೂರ್ಣ ಬಹುಮತದಲ್ಲಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು. ಆದ್ದರಿಂದ ಅವರ ನಿರೀಕ್ಷೆಗಳು ಹೆಚ್ಚಿರುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ಮುಂದುವರೆಯಲಿದ್ದಾರೆ. ಆದ್ದರಿಂ ಸಮನ್ವಯ ಸಾಧಿಸುವುದು ಸಿದ್ದರಾಮಯ್ಯಗೆ ದೊಡ್ಡ ಸವಾಲು ಆಗಿದೆ.
ಸವಾಲು 5; ಲೋಕಸಭೆ ಚುನಾವಣೆ 2024. ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಮುಂದಿರುವ ಸವಾಲು 2024ರ ಲೋಕಸಭೆ ಚುನಾವಣೆ. ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳು. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಗೆದ್ದರುವುದು ಕೇವಲ ಒಂದು ಸೀಟು (ಬೆಂಗಳೂರು ಗ್ರಾಮಾಂತರ). ಮುಂದಿನ ಚುನಾವಣೆಯಲ್ಲಿ 18 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಹೈಕಮಾಂಡ್ ನಾಯಕರು ಟಾರ್ಗೆಟ್ ನೀಡಿದ್ದಾರೆ ಎಂಬ ಮಾಹಿತಿ ಇದೆ. ಚುನಾವಣೆಗೆ ಕೇವಲ 10 ತಿಂಗಳು ಬಾಕಿ. ಆದ್ದರಿಂದ ಚುನಾವಣೆ ಸಿದ್ಧತೆಯನ್ನು ಆರಂಭಿಸಿ ಅತ್ತ ಗಮನಹರಿಸುವುದು ಅನಿವಾರ್ಯ, ಅಗತ್ಯವೂ ಆಗಿದೆ.












Click it and Unblock the Notifications