Get Updates
Get notified of breaking news, exclusive insights, and must-see stories!

ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾಲು: ದಕ್ಷಿಣ ರಾಜ್ಯಗಳ ನಿಯಂತ್ರಿಸುವ ಸುಲಭ ತಂತ್ರ: ರಾಜಾರಾಂ ತಲ್ಲೂರು ಬರಹ

Central Budget 2026: ಕೇಂದ್ರ ಸರ್ಕಾರದ 2026ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದ ತೆರಿಗೆ ಪಾಲು ಹೆಚ್ಚಳವಾಗಿದೆ ಎನ್ನುವ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಂಸದರು ಸಹ ಕರ್ನಾಟಕದ ತೆರಿಗೆ ಪಾಲು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಪಾಲು ಕಿಂಚಿತ್ ಏರಿದ್ದು ಹೌದು ಆದರೆ...: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಒಕ್ಕೂಟ ಸರ್ಕಾರದ ತೆರಿಗೆ ಪಾಲಿನಲ್ಲಿ ಕಿಂಚಿತ್ (3.647ನಿಂದ 4.131%) ಏರಿಕೆ ಮಾಡಿದೆ. ಈ ಲೆಕ್ಕಾಚಾರ, ಎಷ್ಟೊಂದು ಬಡ್ಡಾಗಿದೆ (ದೊಡ್ಡದಾಗಿದೆ) ಎಂಬುದು ಲೆಕ್ಕಾಚಾರದ ಆಳಕ್ಕಿಳಿದರೆ ಕಾಣಿಸುತ್ತದೆ. ದೇಶದಲ್ಲಿ ಅತಿ ಹೆಚ್ಚು GSDP (gross state domestic product) ಇರುವ ರಾಜ್ಯಕ್ಕೆ ಹೋಲಿಸಿದರೆ ನಿರ್ಣಯಿಸಬೇಕಾದ ರಾಜ್ಯದ GSDP ಎಷ್ಟು ಎಂಬುದರ ಆಧಾರದಲ್ಲಿ, 42.5% ಅಂಶ ನಿರ್ಧಾರ ಆಗುತ್ತದೆ. ಅರ್ಥಾತ್, ಕಡಿಮೆ GSDP ಇರುವ ರಾಜ್ಯಕ್ಕೆ ಹೆಚ್ಚಿನ ಪಾಲು ಸಿಗುತ್ತದೆ. 15ನೇ ಹಣಕಾಸು ಆಯೋಗದಲ್ಲಿ 45% ಇದ್ದಲ್ಲಿಂದ ಇದನ್ನು 2.5% ಕಡಿಮೆ ಮಾಡಿ, 42.5%ಗೆ ಇಳಿಸಲಾಗಿದೆ.

Nirmala Sitharaman

ಜನಸಂಖ್ಯೆಯ ಆಧಾರದಲ್ಲಿ 17.5% ಅಂಶ ನಿರ್ಧಾರ ಆಗುತ್ತದೆ. ಅರಣ್ಯ ಭೂಮಿಯ ವ್ಯಾಪ್ತಿಯ ಆಧಾರದಲ್ಲಿ 10%, ಜನಸಂಖ್ಯಾ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಆಧಾರದಲ್ಲಿ 10% ಅಂಶ, ರಾಜ್ಯದ ಗಾತ್ರದ ಆಧಾರದಲ್ಲಿ 10% ಅಂಶ ನಿರ್ಧಾರ ಆಗುತ್ತದೆ. ಕರ್ನಾಟಕದಂತಹ ರಾಜ್ಯಗಳ ಕೂಗಿಗೆ ಪ್ರತಿಕ್ರಿಯೆಯಾಗಿ, ಈ ಬಾರಿ ರಾಜ್ಯಗಳು ದೇಶದ GDPಗೆ ನೀಡಿರುವ ಕೊಡುಗೆಯನ್ನು ಆಧರಿಸಿ, 10%ಅಂಶವನ್ನು ಹೊಸದಾಗಿ 16ನೇ ಹಣಕಾಸು ಆಯೋಗ ಸೇರಿಸಿದೆ. ಇದು ಹೆಚ್ಚಿನಂಶ ರಾಜ್ಯದ ಪಾಲು ಕಿಂಚಿತ್ ಹೆಚ್ಚುವಲ್ಲಿ ಪಾತ್ರ ವಹಿಸಿದೆ.

ಇನ್ನು ಸಹಾಯಾನುದಾನ (grant-in aid) ದಲ್ಲೂ 16ನೇ ಹಣಕಾಸು ಆಯೋಗ ಹೊಸಹಾದಿ ತುಳಿದಿದ್ದು, ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿಪತ್ತು ನಿವಾರಣೆಗೆ ಎಂದು ನಿರ್ದಿಷ್ಟವಾಗಿ ಕೊತ್ತಗಳನ್ನು ನಿಗದಿಪಡಿಸಿದೆ. ಅದರಲ್ಲೂ ಗಮನಾರ್ಹ ಮೊತ್ತವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಗುರಿಗಳನ್ನು ತಲುಪಿದ್ದಕ್ಕೆ "ಖುಷಿವಾಶಿ" ದಯಪಾಲಿಸುವ ಮೊತ್ತವಾಗಿ ನಿಗದಿ ಮಾಡಲಾಗಿದೆ. ಇವೆಲ್ಲ ಅಂತಿಮವಾಗಿ ಹಣಕಾಸಿನ ಹಿಡಿತವನ್ನು ರಾಜ್ಯ ಸರ್ಕಾರಗಳಿಂದ ಕಿತ್ತುಕೊಳ್ಳುವ ಕೇಂದ್ರ ಸರ್ಕಾರದ ದೀರ್ಘಕಾಲಿಕ ಪ್ರಯತ್ನಗಳ ಭಾಗವಾಗಿಯೇ ಪರಿಗಣಿಸಬೇಕಾಗುತ್ತದೆ. ಇಂದು ಒಕ್ಕೂಟ ವ್ಯವಸ್ಥೆಯ ಆಡಳಿತದಲ್ಲಿರುವ ಪಕ್ಷ ನಾಳೆ ವಿರೋಧಪಕ್ಷ ಆದಾಗ, ಅವರ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಳ್ಳುವುದಕ್ಕೆ ಇದೇ ನಿಯಮಗಳು ಕಾರಣ ಆಗಲಿವೆ.. ನೋಡಿ ಬೇಕಿದ್ದರೆ!

ಕರ್ನಾಟಕದ ದೃಷ್ಟಿಕೋನದಿಂದ ನೋಡಿದರೆ, ಮಹಾರಾಷ್ಟ್ರ ಜಿಎಸ್‌ಡಿಪಿಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಕರ್ನಾಟಕ ಇದೆ. ಹಾಗಾಗಿ ನಮಗೆ ತೆರಿಗೆ ಪಾಲು ಕಡಿಮೆ ಬಂದಿರುತ್ತದೆ. ಅತಿ ಹೆಚ್ಚಿನ ತೆರಿಗೆ ಪಾಲು ಪಡೆಯುವ ರಾಜ್ಯಗಳ (ಅದರಲ್ಲೂ ಬೀಮಾರ್ ರಾಜ್ಯಗಳ) ಪ್ರಜೆಗಳು ಬೆಂಗಳೂರು, ಚೆನ್ನೈ, ಮುಂಬಯಿಗೆ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ. ಇಲ್ಲಿ ವಲಸೆ ಜನರ ದಟ್ಟಣೆಯಿಂದಾಗಿ ಮೂಲಸೌಕರ್ಯ, ನೆಲ-ಜಲ, ಸಂಪನ್ಮೂಲಗಳನ್ನು ನಾವು ಇಲ್ಲಿಗೆ ಬಂದವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಅವರ ಮೂಲ ರಾಜ್ಯಗಳಲ್ಲಿ, ಅವರಿಗೆ ಹೆಚ್ಚು ಹಣ, ಕಡಿಮೆ ದಟ್ಟಣೆ, ಕಡಿಮೆ ಖರ್ಚು! ಇಂತಹ ತರ್ಕ ಇದ್ದಾಗ, ಸಹಜವಾಗಿಯೇ "ಬಡತನದಲ್ಲೇ ಇದ್ದು ಬಿಡುವುದು ಹೆಚ್ಚು ಲಾಭಕರ" ಎಂಬ ಚಿಂತನೆಗೆ ಕಾರಣ ಆದರೆ ಅಚ್ಚರಿ ಇಲ್ಲ. ಈಗ ಆಗುತ್ತಿರುವುದು ಅದೇ.

ಹಣಕಾಸು ಆಯೋಗದ ಕ್ರೈಟೀರಿಯಾಗಳೆಲ್ಲ ಉತ್ತರ-ದಕ್ಷಿಣ ರಾಜ್ಯಗಳ ನಡುವಿನ ಬೆಳವಣಿಗೆಯ ಸಂತುಲನ ತರುವ ಬದಲು ಇದ್ದಲ್ಲೇ ಸುಲಭ ಲಾಭಗಳಿಸುವ, ದಕ್ಷಿಣದ ರಾಜ್ಯಗಳನ್ನು ನಿಯಂತ್ರಿಸುವ ಸುಲಭ ತಂತ್ರಕ್ಕೆ ಮೊರೆಹೋದಂತಿದೆ. ಕರ್ನಾಟಕ ಸರ್ಕಾರ ಸಿಕ್ಕಿರುವ ತನ್ನ ಪಾಲಿಗೆ ತೃಪ್ತಿ ಹೊಂದಬಾರದು. ಇಂತಹ ತಾರತಮ್ಯಕ್ಕೆ ಪಕ್ಷ ರಾಜಕೀಯ ಮರೆತು ವಿರೋಧವನ್ನು ಮುಂದುವರಿಸದಿದ್ದಲ್ಲಿ, ದೇಶ ಸಾಂವಿಧಾನಿಕ ಚೌಕಟ್ಟಿನ ಒಳಗೆ ಒಕ್ಕೂಟವಾಗಿ ಮುಂದುವರಿಯಲು ಸಾಧ್ಯವಿಲ್ಲದ ಸ್ಥಿತಿ ಮುಂದೊಂದು ದಿನ ಎದುರಾದರೂ ಅಚ್ಚರಿ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+