ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ!
ಬೆಂಗಳೂರು, ನ. 21: ಉಪ ಚುನಾವಣೆ ಸೋಲಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಉಪ ಚುನಾವಣೆಯ ಸೋಲಿನ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡಲು ಡಿಕೆಶಿ ತೀರ್ಮಾನಿಸಿದ್ದಾರೆ. ಹೀಗಾಗಿ ನಾಳೆ (ನ.22)ಯಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಅವರು ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಆರ್.ಆರ್. ನಗರ ಹಾಗೂ ಶಿರಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಬಳಿಕ ತಮ್ಮ ಪುತ್ರಿಯ ವಿವಾಹ ನಿಶ್ಚಿತಾರ್ಥದಲ್ಲಿ ಡಿಕೆಶಿ ಅವರು ಬ್ಯೂಸಿಯಾಗಿದ್ದರು. ಅದೇ ಸಂದರ್ಭದಲ್ಲಿ ಸಂಕಷ್ಟ ಎದುರಾಗಿದೆ. ಮೊನ್ನೆ(ನ. 19)ಯಷ್ಟೇ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರ ವಿವಾಹ ನಿಶ್ಚಿತಾರ್ಥ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮಾರ್ಥ್ಯ ಹೆಗ್ಡೆ ಅವರೊದಿಗೆ ನಡೆದಿತ್ತು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು. ಸಿಎಂ ಯಡಿಯೂರಪ್ಪ, ಸಚಿವರಾದ ಸೋಮಣ್ಣ, ಡಾ. ಸುಧಕಾರ್ ಸೇರಿದಂತೆ ಹಲವರು ಎಸ್ಎಂಕೆ ಅವರಿಂದ ಆಹ್ವಾನ ಇದ್ದುದರಿಂದ ಭಾಗವಹಿಸಿದ್ದರು.
ಆದರೆ ಕಾಂಗ್ರೆಸ್ ನಾಯಕರನ್ನು ಡಿಕೆಶಿ ಕರೆದಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಸೇರಿದಂತೆ ಹಿರಿಯ ನಾಯಕರು ನಿಶ್ಚಿತಾರ್ಥಕ್ಕೆ ಬಂದಿರಲಿಲ್ಲ. ನಿಶ್ಚಿತಾರ್ಥದಂತೆ ಮತ್ತೊಂದು ಸಂಕಷ್ಟ ಡಿಕೆಶಿ ಅವರಿಗೆ ಎದುರಾಗಿದೆ. ಏನದು ಸಂಕಷ್ಟ? ಇಲ್ಲಿದೆ ಸಂಪೂರ್ಣ ಮಾಹಿತಿ!

ಮತ್ತೆ ಸಿಬಿಐ ಸಂಕಷ್ಟ
ಪುತ್ರಿಯ ನಿಶ್ಚಿತಾರ್ಥದ ದಿನವೇ ಅಂದರೆ ನವೆಂಬರ್ 19 ರಂದು ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸಮನ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಚಿತಪಡಿಸಿದ್ದು, ಅವರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ನಾಡಿದ್ದು ನವೆಂಬರ್ 23 ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ನಲ್ಲಿ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.

ವಿಚಾರಣೆಗೆ ಹಾಜರಾಗಲ್ಲ!
ಸಿಬಿಐನಿಂದ ಸಮನ್ಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು, ನವೆಂಬರ್ 19 ರಂದು ನನಗೆ ಸಮನ್ಸ್ ಬಂದಿರುವುದು ನಿಜ. ಬೆಂಗಳೂರಿನ ಸಿಬಿಐ ಕಚೇರಿಯಿಂದ ನೊಟೀಸ್ ಬಂದಿದೆ. ನವೆಂಬರ್ 23 ರಂದು ವಿಚಾರಣೆಗೆ ಬರಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೇನೆ. ಹೀಗಾಗಿ ನವೆಂಬರ್ 25 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸದಾಶಿವನಗರದ ನಿವಾಸದಲ್ಲಿ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ಪ್ರವಾಸ
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಕುರಿತಂತೆ ಪ್ರವಾಸದಲ್ಲಿರುತ್ತೇನೆ. ಹೀಗಾಗಿ ನವೆಂಬರ್ 23ರ ಬದಲಿಗೆ ನವೆಂಬರ್ 25ರಂದು ವಿಚಾರಣೆ ಎದುರಿಸುವುದಾಗಿ ಮನವಿ ಮಾಡಿದ್ದೇನೆ. ಅದಕ್ಕೆ ಸಿಬಿಐ ಅಧಿಕಾರಿಗಳು ಕೂಡ ಒಪ್ಪಿಕೊಂಡು ಓಕೆ ಎಂದಿದ್ದಾರೆ. ಹೀಗಾಗಿ ಅವತ್ತು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Recommended Video

ಕಳೆದ ತಿಂಗಳು ನಡೆದಿದ್ದ ದಾಳಿ
ಕಳೆದ ಅಕ್ಟೋಬರ್ 5 ರಂದು ಡಿ.ಕೆ. ಶಿವಕುಮಾರ್, ಸಹೋದರ ಡಿಕೆ ಸುರೇಶ್ ಅವರ ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಒಟ್ಟು 14 ಕಡೆಗಳಲ್ಲಿ ಸಿಬಿಐನವರು ದಾಳಿ ನಡೆಸಿದ್ದರು. ಅದೇ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಈಗ ಸಿಬಿಐನಿಂದ ಸಮನ್ಸ್ ಜಾರಿಯಾಗಿದೆ.












Click it and Unblock the Notifications