ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?
Recommended Video
ಬೆಂಗಳೂರು, ಫೆಬ್ರವರಿ 06: ಹತ್ತು ಮಂದಿ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ಸಂಪುಟದಲ್ಲಿ ಈಗ 28 ಮಂದಿ ಸಚಿವರಿದ್ದಾರೆ.
ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಈಗ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬಂದಿದ್ದು, ಯಾವ ಜಾತಿಗೆ ಸಂಪುಟದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ಯಾವುದಕ್ಕೆ ಕಡಿಮೆ ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಿವೆ.
ಪ್ರಸ್ತುತ ಸಂಪುಟದಲ್ಲಿ ಲಿಂಗಾಯತ ಸಮುದಾಯದ ಮಂದಿ ಹೆಚ್ಚಿದ್ದಾರೆ. ಒಕ್ಕಲಿಗ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ. ಇಂದು ಸಂಪುಟಕ್ಕೆ ಸೇರ್ಪಡೆಯಾದ ಹತ್ತು ಸಚಿವರಲ್ಲಿ ನಾಲ್ಕು ಮಂದಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಇಂದು ಸಚಿವರಾದ ಕೆ.ಸುಧಾಕರ್, ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಮೇಶ್ ಜಾರಕಿಹೊಳಿ ನಾಯಕ ಸಮುದಾಯ, ಭೈರತಿ ಬಸವರಾಜ್ ಕುರುಬ ಸಮುದಾಯ, ಆನಂದ್ ಸಿಂಗ್ ರಜಪೂತ್, ಶಿವರಾಮ್ ಹೆಬ್ಬಾರ್ ಬ್ರಾಹ್ಮಣ, ಬಿ.ಸಿ.ಪಾಟೀಲ್ ಲಿಂಗಾಯತ, ಶ್ರೀಮಂತಪಾಟೀಲ್ ಜೈನ ರಾಗಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಒಂಬತ್ತು ಮಂದಿ ಸಚಿವರು ಲಿಂಗಾಯತ ಸಮುದಾಯದವರಾಗಿದ್ದಾರೆ. ಏಳು ಮಂದಿ ಒಕ್ಕಲಿಗ ಸಮುದಾಯದವರಾಗಿದ್ದಾರೆ. ಯಡಿಯೂರಪ್ಪ ಸಂಪುಟದ ಒಟ್ಟು ಜಾತಿವಾರು ಲೆಕ್ಕಾಚಾರ ಇಂತಿದೆ.

ಸಂಪುಟದಲ್ಲಿರುವ ಲಿಂಗಾಯತ ಸಮುದಾಯದ ಸಚಿವರು
ಯಡಿಯೂರಪ್ಪ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ್ ಸವದಿ, ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್ ಒಟ್ಟು ಒಂಬತ್ತು ಮಂದಿ ಲಿಂಗಾಯತರು ಸಂಪುಟದಲ್ಲಿದ್ದಾರೆ. ಲಿಂಗಾಯತ ಸಮುದಾಯದವರೇ ಸಂಪುಟದಲ್ಲಿ ಹೆಚ್ಚಿಗೆ ಇದ್ದಾರೆ

ಒಕ್ಕಲಿಗ ಸಮುದಾಯಕ್ಕೆ ಎರಡನೇ ಸ್ಥಾನ
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಆರ್.ಅಶೋಕ್, ಸಿ.ಟಿ.ರವಿ, ಎಸ್.ಟಿ.ಸೋಮಶೇಖರ್, ಸುಧಾಕರ್, ಕೆ.ಗೋಪಾಲಯ್ಯ, ನಾರಾಯಣಗೌಡ ಅವರುಗಳು ಸಂಪುಟದಲ್ಲಿರುವ ಒಕ್ಕಲಿಗ ಸಮುದಾಯದವರಾಗಿದ್ದಾರೆ. ಇಂದು ಸಂಪುಟ ಸೇರಿರುವ ಹತ್ತು ಮಂದಿಯಲ್ಲಿ ನಾಲ್ವರು ಒಕ್ಕಲಿಗರಾಗಿದ್ದಾರೆ.

ಇಬ್ಬರು ಕುರುಬ, ಇಬ್ಬರು ಬ್ರಾಹ್ಮಣ
ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜು ಇದ್ದಾರೆ. ಸುರೇಶ್ ಕುಮಾರ್, ಶಿವರಾಂ ಹೆಬ್ಬಾರ್ ಇಬ್ಬರೂ ಬ್ರಾಹ್ಮಣ ಸಮುದಾಯದವರಾಗಿದ್ದಾರೆ.

ವಾಲ್ಮಿಕಿ, ಪರಿಶಿಷ್ಟ ಜಾತಿ ಸಚಿವರು ಎಷ್ಟು?
ವಾಲ್ಮಿಕಿ ಸಮುದಾಯದ ಶ್ರೀರಾಮುಲು, ರಮೇಶ್ ಜಾರಕಿಹೊಳಿ. ಪರಿಶಿಷ್ಟ ಜಾತಿಯ ಎಡಗೈ ಬಣದ ಗೋವಿಂದ ಕಾರಜೋಳ. ಬಲಗೈ ಸಮುದಾಯದಿಂದ ಎಚ್.ನಾಗೇಶ್, ಪ್ರಭು ಚೌಹ್ವಾಣ್ ಇದ್ದಾರೆ. ಬಿಲ್ಲವ ಸಮುದಾಯದಿಂದ ಕೋಟಾ ಶ್ರೀನಿವಾಸ ಪೂಜಾರಿ. ಜೈನ ಸಮುದಾಯದಿಂದ ಶ್ರೀಮಂತ ಪಾಟೀಲ್, ರಜಪೂತ್ ಸಮುದಾಯದಿಂದ ಆನಂದ್ ಸಿಂಗ್ ಸಚಿವರಾಗಿದ್ದಾರೆ.












Click it and Unblock the Notifications