ಮೈತ್ರಿ ಸರ್ಕಾರದ ಮಾತೇ ಇಲ್ಲ, ಬಿಜೆಪಿಗೆ 120+ ಸೀಟು : ಡಿವಿಎಸ್
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಪರ ಜನಮತ ಬರಲಿದ್ದು, ಸ್ವಂತ ಬಲದಿಂದ ಅಧಿಕಾರ ಸ್ಥಾಪಿಸಲಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಹೇಳಿದ್ದಾರೆ. ಜೆಡಿಎಸ್ ಜತೆ ಮೈತ್ರಿ ಸರ್ಕಾರ ಸ್ಥಾಪನೆ ಸಾಧ್ಯತೆಯನ್ನು ತಳ್ಳಿ ಹಾಕಿದ ಡಿವಿಎಸ್, ಬಿಜೆಪಿ 120ಪ್ಲಸ್ ಸ್ಥಾನ ಗಳಿಸಲಿದೆ ಎಂದರು.
ಮೇ 12ರಂದು ನಡೆದ ಮತದಾನದ ನಂತರ ಬಂದ ಎಕ್ಸಿಟ್ ಪೋಲ್ ನ ಸರಾಸರಿಯಂತೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಬಹುಮತ ಸ್ಥಾಪಿಸಲು ಬೇಕಾದ 113 ಸ್ಥಾನ(ಈಗ112) ಗಳಿಸಲು ಬಿಜೆಪಿಗೆ ಇನ್ನೂ ಐದಾರು ಸ್ಥಾನಗಳು ಬೇಕಾಗಿದೆ.
ಹೀಗಾಗಿ, ಜೆಡಿಎಸ್ ನ ಮೈತ್ರಿ ಸರ್ಕಾರದ ಮಾತುಕತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಶೇಕಡಾವಾರು ಮತದಾನದ ಅಂಕಿ ಅಂಶಗಳನ್ನು ಗಮನಿಸಿದರೆ, ಪ್ರಾಯಶಃ ತೀವ್ರ ಸ್ಪರ್ಧೆ ಇದೆ ಎನ್ನಬಹುದು. ಆದರೆ, ಬಿಜೆಪಿಗೆ ನೂರಕ್ಕೆ ನೂರರಷ್ಟು ಬಹುಮತ ಸಿಗಲಿದ್ದು, ಅಧಿಕಾರ ಸ್ಥಾಪಿಸಲಿದೆ ಎಂದರು.

ಟೈಮ್ಸ್ ನೌ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿವಿಎಸ್, 120ಪ್ಲಸ್ ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಭಾವ ಬೀರದ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲಿದೆ ಎಂದರು.
ಅತಂತ್ರ ವಿಧಾನಸಭೆ ಪರಿಸ್ಥಿತಿ ಎದುರಾಗುವುದಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ- ಕಾಂಗ್ರೆಸ್ ಮಾಡಿದ ಚುನಾವಣೆ ತಂತ್ರ ಎಂದು ಜನತೆಗೆ ಗೊತ್ತಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯ ಕೈಗೊಂಡ ಬಳಿಕ ಮತದಾರರಿಗೆ ಕಾಂಗ್ರೆಸ್ ಸರ್ಕಾರದ ಹುಳುಕು ಗೊತ್ತಾಗಿದೆ. ಶೇ 2ರಷ್ಟು ಹೆಚ್ಚಿನ ಶೇಕಡಾವಾರು ಮತಗಳು ಬಿಜೆಪಿಗೆ ಸಿಗಲಿದೆ ಎಂದು ಎಕ್ಸಿಟ್ ಪೋಲ್ ಗಳೇ ಹೇಳಿವೆ ಎಂದರು.











Click it and Unblock the Notifications