ಹಲೋ ಅಪ್ಪ...ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ದೊರೆತಿರುವ ಬಿರುದು!
ಬೆಂಗಳೂರು, ನವೆಂಬರ್ 20; 'ಹಲೋ ಅಪ್ಪ' ಕರ್ನಾಟಕದಲ್ಲಿ ಕಳೆದ ವಾರದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಯ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ 'ಹಲೋ ಅಪ್ಪ' ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಕರ್ನಾಟಕದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಯತೀಂದ್ರ ವಿಡಿಯೋ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿವೆ. ಯತೀಂದ್ರ ಸಿದ್ದರಾಮಯ್ಯ 'ಶ್ಯಾಡೋ ಸಿಎಂ' ಎಂದು ಟೀಕಿಸಿವೆ.

ಸೋಮವಾರ ಕರ್ನಾಟಕ ಬಿಜೆಪಿ ಟ್ವೀಟ್ ಒಂದನ್ನು ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪಡೆದ ಬಿರುದುಗಳ ಪಟ್ಟಿಯನ್ನು ನೀಡಿದೆ. ಕಾಂಗ್ರೆಸ್ ಸರ್ಕಾರವನ್ನು #ATMSarkara ಎಂದು ಬಿಜೆಪಿ ದೂರಿದೆ.
ಬಿಜೆಪಿಯ ಟ್ವೀಟ್ ಹೀಗಿದೆ
ಕರ್ನಾಟಕ ಬಿಜೆಪಿ, 'ಶ್ಯಾಡೋ ಸಿಎಂ ಯತೀಂದ್ರರವರಿಗೆ #ATMSarkara ದ ಆಡಳಿತದಲ್ಲಿ ದೊರೆತಿರುವ ಬಿರುದುಗಳು' ಎಂದು ಟ್ವೀಟ್ ಮಾಡಿದೆ.
▪️ ಕಡು ಭ್ರಷ್ಟ
▪️ ಹಲೋ ಅಪ್ಪ
▪️ ವೈ.ಎಸ್.ಟಿ
▪️ ಕಲೆಕ್ಷನ್ ಪ್ರಿನ್ಸ್
'ಸಿಎಂ ಸಿದ್ದರಾಮಯ್ಯರವರ ಕಲೆಕ್ಷನ್-ಕಮಿಷನ್-ಕರಪ್ಷನ್ ಆಡಳಿತ ಮುಗಿಯುವ ಮುನ್ನ ಮತ್ತಷ್ಟು ಬಿರುದುಗಳು ಬಂದರೂ ಸಹ ಅಚ್ಚರಿಯಿಲ್ಲ!!' ಎಂದು ಬಿಜೆಪಿ ಹೇಳಿದೆ.
ಶ್ಯಾಡೋ ಸಿಎಂ ಯತೀಂದ್ರರವರಿಗೆ #ATMSarkara ದ ಆಡಳಿತದಲ್ಲಿ ದೊರೆತಿರುವ ಬಿರುದುಗಳು.
— BJP Karnataka (@BJP4Karnataka) November 20, 2023
▪️ಕಡು ಭ್ರಷ್ಟ
▪️ಹಲೋ ಅಪ್ಪ
▪️ವೈ.ಎಸ್.ಟಿ
▪️ಕಲೆಕ್ಷನ್ ಪ್ರಿನ್ಸ್
ಸಿಎಂ ಸಿದ್ದರಾಮಯ್ಯರವರ ಕಲೆಕ್ಷನ್-ಕಮಿಷನ್-ಕರಪ್ಷನ್ ಆಡಳಿತ ಮುಗಿಯುವ ಮುನ್ನ ಮತ್ತಷ್ಟು ಬಿರುದುಗಳು ಬಂದರೂ ಸಹ ಅಚ್ಚರಿಯಿಲ್ಲ!!
ಯತೀಂದ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ, 'ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ' ಎಂದು ಮಾತನಾಡುವ ವಿಡಿಯೋ ವೈರಲ್ ಆಗಿದೆ. ಆದರೆ ಇದು ಯಾವ ವಿಚಾರಕ್ಕೆ ಎಂದು ಚರ್ಚೆಗಳು ಜೋರಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಇದು ವರ್ಗಾವಣೆ ದಂಧೆಗೆ ಸಂಬಂಧಿಸಿದ್ದು, ಎಂದು ಆರೋಪಿಸಿವೆ.
ಬಿಜೆಪಿ ಕಾರ್ಯಕರ್ತರು 'ಹಲೋ ಅಪ್ಪ' ಎಂಬ ಪೋಸ್ಟರ್ ಅಭಿಯಾನವನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಂಭಿಸಿದ್ದಾರೆ. 10 ನಿಮಿಷದಲ್ಲಿ ವರ್ಗಾವಣೆ ಬೇಕಾ?. ಅದೂ ಒಂದೇ ಕರೆಯಲ್ಲಿ. ಹಾಗಿದ್ದರೆ 'ಹಲೋ ಅಪ್ಪ' ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಎಂದು ಯತೀಂದ್ರ ಸಿದ್ದರಾಮಯ್ಯ ಇರುವ ಫೋಟೋವನ್ನು ಬಿಜೆಪಿ ಬಳಕೆ ಮಾಡುವ ಮೂಲಕ ವ್ಯಂಗ್ಯವಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ವಿಡಿಯೋ ವಿಚಾರ ಮುಂದಿಟ್ಟುಕೊಂಡು ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕಾಂಗ್ರೆಸ್ ಕರ್ನಾಟಕ ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ' ಎಂದು ಟೀಕಿಸಿದ್ದರು.
'ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು?' ಎಂದು ಆರೋಪಿಸಿದ್ದರು.
'ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.












Click it and Unblock the Notifications