ಸೋನಿಯಾ ಗಾಂಧಿ ಗನ್ ಮ್ಯಾನ್ ಭೇಟಿ ಮಾಡಿ, ಹೈಕಮಾಂಡ್ ಭೇಟಿ ಎನ್ನುತ್ತಿದ್ದರು: ಬಿಜೆಪಿ ವ್ಯಂಗ್ಯ
ಬೆಂಗಳೂರು ನವೆಂಬರ್ 29: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿ ಜೋರಾಗಿದೆ. ಎರಡೂ ಪಕ್ಷಗಳು ಸರಣಿ ಟ್ವೀಟ್ಗಳ ಮೂಲಕ ಒಂದನ್ನೊಂದು ದೂಷಿಸುತ್ತಿವೆ.
ರಾಜ್ಯ ಸರ್ಕಾರದ ಸಮರ್ಥ ಆಡಳಿತ, ಕರ್ನಾಟಕ ಕಾಂಗ್ರೆಸ್ ಅನ್ನು ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ದಿನಕ್ಕೊಂದು ಸುಳ್ಳಿನ ಮೂಟೆ ಬಿಚ್ಚಿಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸಂಗ್ರಹಿಸಿದ್ದ ಸುಳ್ಳಿನ ಗೋದಾಮು ಖಾಲಿ ಆಗುತ್ತಿದೆ ಎನ್ನುವ ಚಿಂತೆಯಿಂದ ಕಾಂಗ್ರೆಸ್ ನಾಯಕರು ಮೈ ಕೈ ಪರಚಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಲೇವಡಿ ಮಾಡಿ ಸರಣಿ ಟ್ವೀಟ್ ಮಾಡಿದೆ.
ಒಂದು ಕಾಲದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸ್ಥಿತಿ ಹೇಗಿತ್ತು ಎಂದರೆ, 21 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಈಗಲೂ ಬ್ಯಾಕ್ ಚೇರ್ ಡ್ರೈವಿಂಗ್ ಮಾಡುತ್ತಿರುವ ಸೋನಿಯಾ ಮೇಡಮ್ ಅವರ ಗನ್ ಮ್ಯಾನ್ಗಳನ್ನು ಭೇಟಿ ಮಾಡಿ, ಅದನ್ನೆ ಹೈಕಮಾಂಡ್ ಭೇಟಿ ಎಂದು ಬೀಗುತ್ತಿದ್ದರು.
— BJP Karnataka (@BJP4Karnataka) November 29, 2022
ಈಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಎರಡು ಕೂಡಾ ನಿರುದ್ಯೋಗಿ! pic.twitter.com/tlRPDihVa4

ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು..?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೈಕಮಾಂಡ್ ಭೇಟಿ ವಿಳಂವಾಗುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದ ಕಾಂಗ್ರೆಸ್ ರಾಜ್ಯದ ಸಿಎಂ ಬೊಮ್ಮಾಯಿ ಅವರನ್ನು ಕಂಡರೆ, ಬಿಜೆಪಿ ಹೈಕಮಾಂಡ್ಗೆ ಅಷ್ಟೊಂದು ತಾತ್ಸಾರವೇ ಎಂದು ಪ್ರಶ್ನಿಸಿತ್ತು. ಈ ಟ್ವೀಟ್ಗೆ ತಿರುಗೇಟು ನೀಡಿರುವ ಬಿಜೆಪಿ, ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು..? ಮಲ್ಲಿಕಾರ್ಜುನ ಖರ್ಗೆ ಅವರು ಹೆಸರಿಗೆ ಮಾತ್ರ ಅಧ್ಯಕ್ಷ. ಸ್ವತಂತ್ರ ನಿರ್ಧಾರ ಪ್ರಕಟಿಸುವುದು ಬಿಡಿ, ಸಹಿ ಮಾಡುವ ಮೊದಲು, ಪೆನ್ನಿನ ಟಾಪ್ ಓಪನ್ ಮಾಡಲೂ ಬ್ಯಾಕ್ ಚೇರ್ ಡ್ರೈವರ್ ಸೋನಿಯಾ ಮೇಡಮ್ ಅವರ ಆಣತಿಗೆ ಕಾಯಬೇಕು ಎಂದು ಲೇವಡಿ ಮಾಡಿದೆ.

ಸಿದ್ದರಾಮಯ್ಯ-ಡಿಕೆಶಿ ಜಟಾಪಟಿಗೆ ಬಿಜೆಪಿ ಲೇವಡಿ
ಇನ್ನು ಒಂದು ಕಾಲದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸ್ಥಿತಿ ಹೇಗಿತ್ತುಎಂದರೆ, 21 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಈಗಲೂ ಬ್ಯಾಕ್ ಚೇರ್ ಡ್ರೈವಿಂಗ್ ಮಾಡುತ್ತಿರುವ ಸೋನಿಯಾ ಮೇಡಮ್ ಅವರ ಗನ್ ಮ್ಯಾನ್ಗಳನ್ನು ಭೇಟಿ ಮಾಡಿ, ಅದನ್ನೇ ಹೈಕಮಾಂಡ್ ಭೇಟಿ ಎಂದು ಬೀಗುತ್ತಿದ್ದರು. ಈಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಎರಡು ಕೂಡಾ ನಿರುದ್ಯೋಗಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು 'ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯ ಅವರಿಗಿಲ್ಲ' ಎನ್ನುವ ಹೇಳಿಕೆಯನ್ನು ಡಿ.ಕೆ ಶಿವಕುಮಾರ್ ಘಂಟಾಘೋಷವಾಗಿ ನೀಡಿದರು. ಸಿಎಂ ಕುರ್ಚಿಗಾಗಿ ಶೀತಲ ಸಮರವೇ..? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯಗೆ ಖೆಡ್ಡಾ ತೋಡುತ್ತಿದ್ದಾರೆ
ಇನ್ನು ಹೈಕಮಾಂಡ್ ಒತ್ತಡದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಟಿಕೆಟ್ಗಾಗಿ ಅರ್ಜಿ ಸಲ್ಲಿಸುತ್ತಿದ್ದಂತೆ 'ಒಬ್ಬರಿಗೆ ಒಂದೇ ಕ್ಷೇತ್ರ' ಎಂಬ ಹೊಸ ನಿಯಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಿಸಿದರು. ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಚುನಾವಣೆಗೂ ಮೊದಲೇ ಕಾಂಗ್ರೆಸ್ನಲ್ಲಿ ಸಿಎಂ ಮ್ಯೂಸಿಕಲ್ ಚೇರ್
ಚುನಾವಣಾ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ದಿನನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನು ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು. ಚುನಾವಣೆಗೂ ಮೊದಲೇ ಕಾಂಗ್ರೆಸ್ ನಲ್ಲಿ ಸಿಎಂ ಮ್ಯೂಸಿಕಲ್ ಚೇರ್ ಆರಂಭಗೊಂಡಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಬೀದಿ ಜಗಳಕ್ಕೆ ನಿಂತಿದ್ದಾರೆ. ಕುರ್ಚಿಗಾಗಿ ಕಿತ್ತಾಡುವ ಇವರು ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯದ ಗತಿ ಏನಾಗಬಹುದು ಯೋಚಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications