ನಾನ್ವೆಜ್ ತಿಂದಿರುವುದನ್ನು ಮರೆತು ದೇವಸ್ಥಾನಕ್ಕೆ ಹೋಗಿದ್ದೆ: ಸಿ.ಟಿ ರವಿ ಸ್ಪಷ್ಟನೆ
ಬೆಂಗಳೂರು, ಫೆಬ್ರವರಿ 23: ಕಳೆದ ಫೆಬ್ರವರಿ19 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ರಾಜ್ಯ ಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಸಿ.ಟಿ ರವಿ ಆಗಮಿಸಿದ್ದರು. ಕಾರವಾರದಿಂದ ತೆರಳಿದ ಸಿ.ಟಿ ರವಿ ಭಟ್ಕಳಕ್ಕೆ ತೆರಳಿ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಅವರ ಮನೆಯಲ್ಲಿ ಊಟ ಮಾಡಿ ನಂತರ ಪಟ್ಟಣದ ನಾಗಭನ ಹಾಗೂ ಕರಿಭಂಟ ಹನುಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದರು.
ಶಾಸಕ ಸಿ.ಟಿ ರವಿ, ಸುನೀಲ್ ನಾಯ್ಕ ಅವರ ಮನೆಯಲ್ಲಿ ಮಾಂಸಹಾರ ತಿನ್ನುತ್ತಿರುವ ಫೋಟೋ ವೈರಲ್ ಆಗಿತ್ತು, ಜೊತೆಗೆ ದೇವರ ದರ್ಶನವನ್ನು ಪಡೆದಿರುವ ಎರಡೂ ಫೋಟೋಗಳು ವೈರಲ್ ಆಗಿದ್ದು ಸಿ.ಟಿ ರವಿ ವಿರುದ್ಧ ಹೊಸ ವಿವಾದ ಹುಟ್ಟುಹಾಕಿತ್ತು. ಈ ವಿಚಾರ ವಿಪಕ್ಷಗಳ ಟೀಕೆಗೆ ಆಹಾರವಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಿ.ಟಿ ರವಿ ವಿರುದ್ಧ ವ್ಯಂಗ್ಯವಾಡಿದ್ದರು.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ ರವಿ ಸ್ಪಷ್ಟನೆ ನೀಡಿದ್ದಾರೆ. ನಾನು ನಾನ್ ವೆಜ್ ತಿಂದಿರುವುದನ್ನು ಎನ್ನುವುದನ್ನು ಮರೆತಿದ್ದೆ. ಅದು ನನ್ನ ಭೇಟಿಯ ಉದ್ದೇಶವಾಗಿರಲಿಲ್ಲ ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಅದರ ವೀಕ್ಷಣೆಗೆ ಹೋಗಿದ್ದು, ಅಲ್ಲಿಯ ಸ್ಥಳೀಯರೇ ಕರೆದುಕೊಂಡು ಹೋಗಿದ್ದರು ಎಂದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಂಸಹಾರ ತಿಂದಿದ್ದೆ ಎನ್ನುವುದನ್ನು ಮರೆತಿದ್ದೆ. ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ದೇವಸ್ಥಾನದ ಆವರಣದ ಬಳಿ ಮಾತ್ರ ಹೋಗಿದ್ದೆ. ಎಲ್ಲವನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್ನವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ನಾನು ಗರ್ಭಗುಡಿಯ ಹೊರಭಾಗದಲ್ಲಿ ಇದ್ದೆ. ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಈ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಮೊದಲೇ ನಿರ್ಧಾರ ಮಾಡಿರಲಿಲ್ಲ. ಅಲ್ಲಿನ ಸ್ಥಳೀಯರು ಕರೆದುಕೊಂಡು ಹೋಗಿದ್ದರು. ಕೆಲವು ವೆಜ್ ಮತ್ತು ನಾನ್ ವೆಜ್ ದೇವಸ್ಥಾನಗಳಿವೆ, ಕೆಲವು ದೇವಸ್ಥಾನಗಳಲ್ಲಿ ಮಾಂಸಹಾರಿ ನೈವೇದ್ಯ ಮಾಡಲಾಗುತ್ತದೆ. ಅಂತಹ ದೇವಸ್ಥಾನಗಳಿಗೆ ಹೋಗಬಹುದು ಎಂದು ಹೇಳಿದರು.












Click it and Unblock the Notifications