Protest: ಪಾದಾಚಾರಿ ಒತ್ತುವರಿ ತೆರವು ಖಂಡಿಸಿ ಜುಲೈ 8ರಂದು ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಪಾದಾಚಾರಿ ಒತ್ತುವರಿ ತೆರವು ಅಭಿಯಾನ ಖಂಡಿಸಿ ನಾಳೆ ಬುಧವಾರ ಜುಲೈ 8 ರಂದು ಬೀದಿ ಬದಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸುವುದಾಗಿ ಸೋಮವಾರ 'ಬೀದಿ ಬದಿ ವ್ಯಾಪಾರಿಗಳ ಜಂಟಿ ಕ್ರಿಯಾ ಸಮಿತಿ' ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಬಸಮ್ಮ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಪಾದಾಚಾರಿ ಒತ್ತುವರಿ ತೆರವು ಅಭಿಯಾನ ಕೈಗೊಳ್ಳಲಾಗಿದೆ. ಈವರೆಗೆ ನೂರಾರು ಕಿಲೋ ಮೀಟರ್ ಪಾದಾಚಾರಿ ಅತಿಕ್ರಮಣ ತೆರವು ಮಾಡಲಾಗಿದೆ. ಅನೇಕ ಬೀದಿ ವ್ಯಾಪಾರಿಗಳ ಜೀವನ ಡೋಲಾಯಮಾನವಾಗಿದೆ. ಸರ್ಕಾರದ ಈ ಒಕ್ಕಲೆಬ್ಬಿಸುವ ನಡೆ ಖಂಡಿಸಿ ಪ್ರತಿಭಟನೆ ನಿರ್ಧಾರ ಕೈಗೊಂಡಿರುವುದಾಗಿ ಅವರು ವಿವರಿಸಿದರು.

ಏಕಾಎಕಿ ಎತ್ತಂಗಡಿ ಕ್ರಮ ಸರಿಯಲ್ಲ
ಪಾದಾಚಾರಿ ಮಾರ್ಗದ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತೆರವು ಅಭಿಯಾನ ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಸರ್ಕಾರವೇ ಕಾನೂನು ಪ್ರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿತ್ತು. ಇದೀಗ ಏಕಾಎಕಿ ಕಾನೂನು ಬಾಹಿರವಾಗಿ ನಮ್ಮನ್ನು ಎತ್ತಂಗಡಿ ಮಾಡಲಾಗುತ್ತಿದೆ.
ಕೂಡಲೇ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹ
ಸರ್ಕಾರದ ಪ್ರಕಾರ, ರಸ್ತೆ ಅಪಘಾತಗಳಿಗೆ, ಸಾವು ನೋವುಗಳಿಗೆ ಬೀದಿ ಬದಿ ವ್ಯಾಪಾರಿಗಳೇ ಕಾರಣ ಎಂದ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಗಳನ್ನು ಸಮಿತಿ ತೀವ್ರವಾಗಿ ಖಂಡಿಸಿದೆ. ರಸ್ತೆಗುಂಡಿಗಳಿಂದಲೂ ಸಾಕಷ್ಟು ಅಪಘಾತವಾಗಿ, ಜೀವ ಹಾನಿಯಾಗಿದೆ. ಅಪಘಾತಗಳಿಗೆ ಬೀದಿ ಬದಿ ವ್ಯಾಪಾರಿಗಳು ಕಾರಣವೆಂಬ ಹೇಳಿಕೆಗಳನ್ನು ಕೂಡಲೇ ಹಿಂಪಡೆಯಬೇಕು. ಪಾದಚಾರಿ ಅಭಿವೃದ್ಧಿ ನೆಪದಲ್ಲಿ ನಡೆಯುತ್ತಿರುವ ಬೀದಿ ಬದಿ ವ್ಯಾಪಾರಿಗಳ ಮೇಲಿನ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಸಮಿತಿ ಆಗ್ರಹಿಸಿದೆ.
ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕ್ರಮದಿಂದಾಗಿ ಎರಡು ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು, ಮತ್ತವರ ಕುಟುಂಬದ ಲಕ್ಷಾಂತರ ಸದಸ್ಯರಿಗೆ ತೊಂದರೆ ಆಗುತ್ತಿದೆ. ಬೆಂಗಳೂರಿನಾದ್ಯಂತ ಒಟ್ಟಾರೆ ಸುಮಾರು 10 ಲಕ್ಷ ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಮುಖ್ಯ ರಸ್ತೆಗೆ ಬದಲಾಗಿ ಒಳಗಿನ ಸಣ್ಣ ರಸ್ತೆಗಳಲ್ಲಿ ವ್ಯಾಪಾರ ಮಾಡುವಂತೆ ಸರ್ಕಾರ ಹೇಳಿದೆ. ಮುಂದೆ ಆ ಸಣ್ಣ ರಸ್ತೆಗಳ ಸಂಚಾರಕ್ಕೆ, ಜನರಿಗೆ ತೊಂದರೆ ಆಗುವುದಿಲ್ಲವೆ ಎಂದು ಸರ್ಕಾರದ ಮೇಲೆ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯ ಸಹ ಕಾರ್ಯದರ್ಶಿ ರವಿಂಚಂದ್ರನ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ನಾಳೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ರಸ್ತೆ ಬದಿ ವ್ಯಾಪಾರಿ ಸಂಘಗಳು, ಪ್ರಮುಖ ಸಂಘಟನೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.













Click it and Unblock the Notifications