Karnataka Weather: ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಬಿರುಗಾಳಿ ಮಳೆ ಮುನ್ಸೂಚನೆ: ಕರಾವಳಿಗೆ ರೆಡ್ ಅಲರ್ಟ್
ಬೆಂಗಳೂರು: ಬರಗಾಲ ಭೀತಿ ಆವರಿಸಿದ್ದ ಕರ್ನಾಟಕದ ಹಲವು ಕಡೆಗಳಲ್ಲಿ ಮುಂಗಾರು ಮಳೆ ಆರ್ಭಟ ಶುರುವಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಪ್ರವಾಹ ಸೃಷ್ಟಿಸುವಷ್ಟರ ಮಟ್ಟಿಗೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದೆ. ನೆನ್ನೆ ಬೆಳಗಾವಿ ಸೇರಿ ವಿವಿಧ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಿದೆ. ಮುಂದಿನ 7 ದಿನ ಪೈಕಿ ಇಂದು ಮತ್ತು ನಾಳೆ ಎರಡು ದಿನ ಕರಾವಳಿಗೆ 'ರೆಡ್ ಅಲಟ್' ಘೋಷಿಸಲಾಗಿದೆ. ಇತರ 15ಕ್ಕೂ ಅಧಿಕ ಜಿಲ್ಲೆಗಳಿಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ಕರಾವಳಿ, ಪಶ್ಚಿಮ ಘಟ್ಟಗಳ ಸಾಲು ಹಾಗೂ ಉತ್ತರ ಒಳನಾಡಿನ ವಿವಿಧೆಡೆ ಮುಂಗಾರು ಸಕ್ರಿಯವಾಗಿದೆ. ಸಾಧಾರಣದಿಂದ ಭಾರೀ ಹಾಗೂ ಅತೀ ಭಾರಿ ಮಳೆ ಆಗುತ್ತಿದೆ. ಬೆಳಗಾವಿ, ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿಮವೊಗ್ಗ, ಚಿಕ್ಕಮಗಳೂರು, ಹಾಸನ, ಧಾರವಾಡ, ಹಾವೇರಿ ಭಾಗಗಳಲ್ಲಿ ಸೋಮವಾರ ಉತ್ತಮ ಮಳೆ ಆಗಿದೆ. ಈ ಮಳೆ ಇಂದು ಮಂಗಳವಾರದಿಂದ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜುಲೈ 7ರಂದು ಒಂದು ದಿನ ಬೆಳಗಾವಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದ 14 ತಾಲೂಕುಗಳ ಶಾಲೆಗಳನ್ನು ಸ್ಥಗಿತಕ್ಕೆ ಆದೇಶಿಸಲಾಗಿದೆ. ಮತ್ತೊಂದೆಡೆ ಮಳೆಗೆ ನದಿಗಳಿಗೆ ಜೀವ ಕಳೆ ಬಂದಿದ್ದು, ಒಳಹರಿವು ಏರಿಕೆ ಆಗುತ್ತಿದೆ. ಬಿತ್ತನೆ ಮಾಡಿದ ಉತ್ತರ ಕರ್ನಾಟಕದ ರೈತರಲ್ಲಿ ಮಂದಹಾಸ ಮೂಡಿಸಿದೆ.

ರಾಜ್ಯಾದ್ಯಂತ ಭಾರೀ ಮಳೆ: ರೆಡ್ & ಆರೆಂಜ್ ಅಲರ್ಟ್
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಇಂದು ಮತ್ತು ನಾಳೆ (ಜುಲೈ 7 ಮತ್ತು 8) ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ, ಮಲೆನಾಡಿನ ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 200ಮಿಲಿ ಮೀಟರ್ಗೂ ಅಧಿಕ ಮಳೆ ಸುರಿಯಲಿದ್ದು, 'ರೆಡ್ ಅಲರ್ಟ್' ಘೋಷಿಸಲಾಗಿದೆ. ಇಲ್ಲಿ ಬಿರುಗಾಳಿಯು ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ.
ಇನ್ನೂ ಜುಲೈ 9ರವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕಲಬುರಗಿ, ವಿಜಯಪುರ, ರಾಯಚೂರು, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೊಡಗು, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಒಟ್ಟು 15ಕ್ಕೂ ಅಧಿಕ ಜಿಲ್ಲೆಗಳ ಕೆಲವೆಡೆ 115 ರಿಂದ 200 ಮಿಲಿ ಮೀಟರ್ವರೆಗೆ ಧಾರಾಕಾರ ಮಳೆ ಆಗಲಿದ್ದು, 'ಆರೆಂಜ್ ಅಲರ್ಟ್' ನೀಡಲಾಗಿದೆ. ಇಲ್ಲಿ ಪ್ರತಿ ಗಂಟೆಗೆ 50-60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಯೆಲ್ಲೋ ಅಲರ್ಟ್ ಜಿಲ್ಲೆಗಳು
ಬೀದರ್, ಯಾದಗಿರಿ, ಹಾವೇರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರದ ವಿವಿಧ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ (65 ಮಿಲಿ ಂಮೀಟರ್ನಿಂದ 115 ಮಿಲಿ ಮೀಟರ್ವರೆಗೆ) ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡು, ಉತ್ತರ ಒಳನಾಡಿನಲ್ಲಿ ಜುಲೈ 9ರ ನಂತರ ಮುಂಗಾರು ಅಬ್ಬರ ಕೊಂಚ ತಗ್ಗಲಿದೆ. ಆಗಲೂ ಸಾಧಾರಣದಿಂದ ಭಾರೀ ಮಳೆ ಆಗಲಿದೆ.
ಭಾರೀ ಮಳೆಗೆ ಮುನ್ನೆಚ್ಚರಿಕೆ ಅಗತ್ಯ
ಒಟ್ಟಾರೆ ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆ ಆರ್ಭಟ ಹೆಚ್ಚಿರಲಿದೆ. ಒಳಹರಿವು ಹೆಚ್ಚಾಗಿರುವ ತುಂಗಾ ನದಿ ಮತ್ತು ಜಲಾಶಯ ಮತ್ತು ಕೃಷ್ಣಾ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಕರಾವಳಿ ಭಾಗದ ಮೀನುಗಾರರು, ಮಲೆನಾಡಿನ ಗುಡ್ಡಗಾಡು ಪ್ರದೇಶ, ತಗ್ಗು ಪ್ರದೇಶ ಜನರು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.
ಬೆಂಗಳೂರು ಹವಾಮಾನ ವರದಿ
ರಾಜಧಾನಿ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆ ನಿರೀಕ್ಷೆ ಇದ್ದು, ಗರಿಷ್ಠ 31 ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ನಗರಾದ್ಯಂತ ಸಾಮಾನ್ಯವಾಗಿ ಮಬ್ಬು ಕವಿದ ವಾತಾವರಣವೇ ಕಂಡು ಬರಲಿದೆ.













Click it and Unblock the Notifications