School Holiday: ಭಾರೀ ಮಳೆ! ಇಂದು ಕರ್ನಾಟಕದ 14 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ, ಎಲ್ಲೆಲ್ಲಿ?
ಬೆಂಗಳೂರು: ಬರಗಾಲ ಸನ್ನಿವೇಶ ನಿರ್ಮಾಣವಾಗಿದ್ದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗಿದೆ. ಕರಾವಳಿ ಭಾಗದಲ್ಲಿ ಅತ್ಯಧಿಕ ಭಾರೀ ಮಳೆ ಮುನ್ಸೂಚನೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ ವ್ಯಾಪ್ತಿಯಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ ಮುಂದುವರಿಯಲಿದೆ. ಹೀಗಾಗಿ ಒಟ್ಟು 14 ತಾಲೂಕುಗಳ ಶಾಲೆಗಳಿಗೆ ಇಂದು ಮಂಗಳವಾರ (ಜುಲೈ 7) ರಜೆ ಘೋಷಿಸಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಒಟ್ಟು 14 ತಾಲೂಕುಗಳ ಶಾಲೆಗಳಿಗೆ ರಜೆ ನೀಡಿ ಸೋಮವಾರ ಸಂಜೆ ಆದೇಶಿಸಿದ್ದಾರೆ.

ಯಾವೆಲ್ಲ ತಾಲೂಕುಗಳ ಶಾಲೆಗಳಿಗೆ ಇಂದು ರಜೆ?
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆ, ಕೊಪ್ಪ, ಶೃಂಗೇರಿ, ಕಳಸ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದರಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ, ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳ ವ್ಯಾಪ್ತಿಯ ಶಾಲೆಗಳಿಗ ಭಾರೀ ಮಳೆ ಹಿನ್ನೆಲೆ ರಜೆ ನೀಡಲಾಗಿದೆ.
ಅಂಗನವಾಡಿಯಿಂದ ಎಸ್ಎಸ್ಎಲ್ಸಿವರೆಗಿನ ಮಕ್ಕಳಿಗೆ ಈ ರಜೆ ಅನ್ವಯಿಸಲಿದೆ. ಸೋಮವಾರ ಸಹ ಸಕಲೇಶಪುರ ಸೇರಿದಂತೆ ವಿವಿಧೆಡೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಉತ್ತರ ಒಳನಾಡಿನ ಬೆಳಗಾವಿಯಲ್ಲಿ ವರುಣಾರ್ಭಟ ಜೋರಾಗಿದೆ. ಇಲ್ಲೂ ಸಹ ಶಾಲೆಗೆ ರಜೆ ಕೊಡಲಾಗಿದೆ. ಮಳೆಗಾಲದಲ್ಲಿ ಜೋರು ಮಳೆ ಬಂದಾಗ ಗುಡ್ಡಕುಸಿತ, ಹಳ್ಳ ಕೊಳ್ಳಗಳು ಉಕ್ಕಿ ಹರಿಯುವುದು, ಪ್ರವಾಹದಂತಹ ಸನ್ನಿವೇಶ ಇರುತ್ತದೆ. ಸಣ್ಣ ಸಣ್ಣ ಮಕ್ಕಳಿಗೆ ಅಪಾಯದ ಮುನ್ಸೂಚನೆ ಅರಿಯುವ ತಿಳುವಳಿಕೆ ಇರುವುದಿಲ್ಲ. ಶಾಲೆಗೆ ಹೋಗುವಾಗ ಹತ್ತಿರದಲ್ಲೇ ಹರಿಯುವ ನೀರನ್ನು ಕುತೂಹಲದಿಂದ ನೋಡಲು, ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಇದರಿಂದ ಅವರ ಜೀವಕ್ಕೆ ಹಾನಿ ಸಂಭವವಿರುತ್ತದೆ.
ಇದೆಲ್ಲ ಕಾರಣಗಳಿಂದ ಮಕ್ಕಳ ಹಿತದೃಷ್ಟಿ ಪರಿಗಣಿಸಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಈ ವೇಳೆ ಜಿಲ್ಲಾಧಿಕಾರಿಗಳು ಹವಾಮಾನ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಹವಾಮಾನ, ಭಾರೀ ಮಳೆ ಮುನ್ಸೂಚನೆ ತಿಳಿದು ರಜೆ ಆದೇಶ ಹೊರಡಿಸುತ್ತಾರೆ.
ಭಾರೀ ಮಳೆಗೆ ಜೀವ ಹಾನಿ, ವಿದ್ಯಾರ್ಥಿನಿಗೆ ಗಾಯ
ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಿರಂತರ ಮಳೆ ಆಗುತ್ತಿರುವ ಪರಿಣಾಮ ಇಲ್ಲಿನ ಮಾಲತಿ ನದಿ ಪ್ರವಾಹದಲ್ಲಿ ವೃದ್ಧರೊಬ್ಬರು ಕೊಚ್ಚಿ ಹೋಗಿದ್ದಾರೆ. ಕೊಡುಗು, ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಮಳೆಗೆ ಮರಗಳ ಬಿದ್ದು ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಉಡುಪಿ ಜಿಲ್ಲೆಯಲ್ಲಿ ಶಾಲಾ ಮೇಲ್ಘಾವಣಿ ಹೆಂಚು ಬಿದ್ದು ವಿದ್ಯಾರ್ಥಿನಿಯೊಬ್ಬರು ಗಾಯಗೊಂಡ ಘಟನೆಗಳು ವರದಿ ಆಗಿವೆ.
ಮೊದಲಿನಿಂದ ಕೆಲವು ಜಿಲ್ಲೆಗಳಲ್ಲಿ ಸರ್ಕಾರ ಶಾಲೆಗಳನ್ನು ದುರಸ್ತಿ ಮಾಡಬೇಕೆಂಬ ಕೂಗಿದೆ. ಇನ್ನೂ ಕೆಲವೆಡೆ ಹಳೇಯ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಇಂತಹ ಗಾಳಿ, ಮಳೆ ಸಂದರ್ಭದಲ್ಲಿ ತರಗತಿ ನಡೆಸುವುದಕ್ಕಿಂತ ಅಂದು ಶಾಲೆ ಬಂದ್ ಮಾಡುವುದು ಉತ್ತಮ ನಿರ್ಧಾರವಾಗಿದೆ.
2 ದಿನ ಭಾರೀ ಮಳೆ ಸಂಭವ
ಕರ್ನಾಟಕದಲ್ಲಿ ಮುಂದಿನ ಎರಡು ದಿನ ಕರಾವಳಿ, ಮಲೆನಾಡು ಹಾಗೂ ಹಲವು ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರಿಸಲಿದೆ. ಕರಾವಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಕರಾವಳಿಯಿಂದ ಕಲ್ಯಾಣ ಕರ್ನಾಟಕದವರೆಗೂ ಸಾಮಾನ್ಯದಿಂದ ಭಾರೀ ಹಾಗು ಅತೀ ಭಾರೀ ಮಳೆ ಆಗುತ್ತಿದೆ.














Click it and Unblock the Notifications