ಕರ್ನಾಟಕಕ್ಕೆ ಬಿಜೆಪಿಯ ಚುನಾವಣಾ ಚಾಣಕ್ಯರ ದಾಪುಗಾಲು!
ಖಾಸಗಿ ಸಂಸ್ಥೆಗಳ ಮೂಲಕ ರಾಜಕೀಯ ಪಕ್ಷಗಳಿಗೆ ತಂತ್ರಗಾರಿಕೆ ರೂಪಿಸುವ ಕೆಲಸಕ್ಕೆ ಹೊಸ ರೂಪ ಕೊಟ್ಟವರು ಪ್ರಶಾಂತ್ ಕಿಶೋರ್. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಂತ್ರಗಾರಿಕೆ ರೂಪಿಸಿ ಸೈ ಎನಿಸಿಕೊಂಡಿದ್ದ ಪ್ರಶಾಂತ್, ನಂತರ ಬಿಜೆಪಿಯಿಂದ ದೂರವಾದರು.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಜಯದ ನಂತರ ಬಿಜೆಪಿಯ ಮುಂದಿನ ಗುರಿ ಕರ್ನಾಟಕದತ್ತ. ದಕ್ಷಿಣಭಾರತದಲ್ಲಿ ಬಿಜೆಪಿಗೆ ನೆಲೆಯಿರುವ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ. ಇಲ್ಲಿಂದ ಮಿಕ್ಕ 3ರಾಜ್ಯಗಳಲ್ಲಿ ತನ್ನ ಶಕ್ತಿ ಬೆಳೆಸಿಕೊಳ್ಳಲು ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಅತಿಮುಖ್ಯ. ಹಾಗಾಗಿ, ಕರ್ನಾಟಕಕ್ಕೆ ಪಳಗಿದ ರಾಜಕೀಯ ತಂತ್ರಗಾರರೊಬ್ಬರನ್ನು ಶಾ, ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಕಳುಹಿಸಲಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಅತ್ಯವಶ್ಯಕ ಎನ್ನುವುದನ್ನು ಅರಿತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅತ್ಯಂತ ಜಾಗರೂಕತೆಯಿಂದ ಹೆಜ್ಜಿಯಿಡುತ್ತಿದ್ದು ಒಬ್ಬರ ಮೇಲೊಬ್ಬರಂತೆ, ಯಾವುದೇ ಮುಲಾಜಿಲ್ಲದೆ ಗ್ರೌಂಡ್ ರಿಯಾಲಿಟಿ ನೀಡುವ ಮುಖಂಡರನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಗುಜರಾತ್ ಚುನಾವಣಾ ಫಲಿತಾಂಶ ಬಂದ 24ಗಂಟೆಯಲ್ಲಿ ಅಮಿತ್ ಶಾ ಕಾರ್ಯೋನ್ಮುಖರಾಗಿದ್ದಾರೆ.
ಮುರಳೀಧರ್ ರಾವ್ ಅವರನ್ನು ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ನೇಮಿಸಿದ್ದರೂ, ಪ್ರಕಾಶ್ ಜಾವಡೇಕರ್ ಮತ್ತು ಪಿಯೂಶ್ ಗೋಯಲ್ ಅವರನ್ನೂ ಹೆಚ್ಚುವರಿಯಾಗಿ ಶಾ ರಾಜ್ಯಕ್ಕೆ ಕಳುಹಿಸಿದ್ದರು. ಇದರ ಜೊತೆಗೆ, ಬಿ ಎಲ್ ಸಂತೋಷ್ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಅಮಿತ್ ಶಾ ನೀಡುವ ಮೂಲಕ, ರಾಜ್ಯ ಬಿಜೆಪಿ ಮುಖಂಡರಿಗೆ ತಮ್ಮ ವರ್ಕಿಂಗ್ ಸ್ಟೈಲಿನ ಪರಿಚಯ ಮಾಡಿಸಿದ್ದರು.
ಚುನಾವಣಾ ಪ್ರಚಾರದ ಕೆಲಸವನ್ನು ನೀವು ಮಾಡಿ, ಮಿಕ್ಕಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎನ್ನುವ ಸಂದೇಶವನ್ನು ಈಗಾಗಲೇ ಯಡಿಯೂರಪ್ಪ ಎಂಡ್ ಟೀಂಗೆ ರವಾನಿಸಿರುವ ಶಾ, ಯಾವ ಕಾರಣಕ್ಕೂ ಕರ್ನಾಟಕ ಕೈತಪ್ಪಬಾರದು ಎನ್ನುವ ಲೆಕ್ಕಾಚಾರದಿಂದ ಒಂದೊಂದು ಹೆಜ್ಜೆಯನ್ನು ಅಳೆದುತೂಗಿ ಇಡುತ್ತಿದ್ದಾರೆ. ಹೊಸ ರಾಜಕೀಯ ಸ್ಟ್ರಾಟಜಿಸ್ಟ್ ಯಾರು? ಮುಂದೆ ಓದಿ.,

ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಸಿಂಗ್ ಯಾದವ್
ಗುಜರಾತ್ ನಲ್ಲಿ ಪಕ್ಷಕ್ಕೆ ಗೆಲುವು ಅಷ್ಟೇನೂ ಸುಲಭವಲ್ಲ ಎನ್ನುವ ಅಂತರಿಕ ಸಮೀಕ್ಷೆಯ ನಂತರ ತಂತ್ರಗಾರಿಕೆ ರೂಪಿಸಲು ಅಮಿತ್ ಶಾ, ನೇಮಿಸಿದ್ದೇ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಭೂಪಿಂದರ್ ಸಿಂಗ್ ಯಾದವ್ ಅವರನ್ನು. ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ, ಹಲವು ಭಾಷೆಗಳನ್ನು ಬಲ್ಲ, ಅಜ್ಮೀರ್ (ರಾಜಸ್ಥಾನ) ಮೂಲದ ಯಾದವ್, ಮುಂದಿನ ವಾರದಲ್ಲಿ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ.

ಪ್ರಯಾಸದ ಗೆಲುವು ತಂದುಕೊಡುವಲ್ಲಿ ಯಶಸ್ವಿ
47ವರ್ಷ ವಯಸ್ಸಿನ ಯಾದವ್, ತನ್ನದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಗುಜರಾತ್ ನಲ್ಲಿ ಬಿಜೆಪಿಗೆ ಕೊನೆಗೂ ಪ್ರಯಾಸದ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಸತತ ಐದು ಬಾರಿ ಅಧಿಕಾರದಲ್ಲಿರುವ ಬಿಜೆಪಿಗೆ, ಆಡಳಿತ ವಿರೋಧಿ ಅಲೆ ಮತ್ತು ವಿರೋಧ ಪಕ್ಷಗಳ ರಾಜಕೀಯ ತಂತ್ರಗಾರಿಕೆಯ ನಡುವೆಯೂ ಯಾದವ್ ಉತ್ತಮ ಎನ್ನಬಹುದಾದ ರಾಜಕೀಯ ಸ್ಟ್ರಾಟರ್ಜಿ ರೂಪಿಸಿದ್ದರು ಎನ್ನುವ ಮಾಹಿತಿ ಬಿಜೆಪಿ ಆಪ್ತ ವಲಯದಿಂದ ಲಭ್ಯವಾಗಿದೆ.

ಅತಿತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಶಾಗೆ ವರದಿ
ಅಮಿತ್ ಶಾ ಬೆಂಗಳೂರಿಗೆ ಬರುವ ಮೊದಲು ರಾಜ್ಯಕ್ಕೆ ಆಗಮಿಸುವ ಯಾದವ್, ಮೊದಲ ಹಂತದ ವರದಿ ಮತ್ತು ಅತಿತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮದ ವರದಿಯನ್ನು ಶಾಗೆ ನೀಡಲಿದ್ದಾರೆ ಎನ್ನುವ ಮಾಹಿತಿಯಿದೆ. ಒಟ್ಟಿನಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಇನ್ನೊಂದು ಹೆಸರು ಚಾಲನೆಗೆ ಬಂದಂತಾಗಿದೆ, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರಂತೂ ಯಾದವ್ ಹೆಸರು ಕರ್ನಾಟಕದಲ್ಲಿ ಹೆಸರುವಾಸಿಯಾಗಲಿದೆ.

ಅಮಿತ್ ಶಾ ಬೆಂಗಳೂರಿಗೆ ಸ್ಥಳಾಂತರ
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ನಂತರ, ಇನ್ನು ಕೆಲವೇ ದಿನಗಳಲ್ಲಿ ತನ್ನ ವಾಸ್ತವ್ಯವನ್ನೇ ಅಮಿತ್ ಶಾ ಬೆಂಗಳೂರಿಗೆ ಸ್ಥಳಾಂತರಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯಿದೆ. ಜನವರಿ ಎರಡರಂದು ಅಮಿತ್ ಶಾ ಬೆಂಗಳೂರಿಗೆ ಬರುವ ಕಾರ್ಯಕ್ರಮವಿದೆ. ದೇವನಹಳ್ಳಿಯ ಬಳಿ ಅಮಿತ್ ಶಾ ಅವರಿಗೆ ವಿಲ್ಲಾವೂ ತಯಾರಾಗಿದೆ.

ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್
ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಮೊದಲು ಬಿಜೆಪಿ ಜೊತೆ ನಂತರ ನಿತೀಶ್ ಕುಮಾರ್ ಜೊತೆ ಕೆಲಸ ಮಾಡಿ ಅಲ್ಲೂ ಭೇಷ್ ಅನಿಸಿಕೊಂಡಿದ್ದರು. ಅದಾದ ಮೇಲೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿ ದಯನೀಯ ಸೋಲುಂಡಿದ್ದರು. ಸದ್ಯ, ಪ್ರಶಾಂತ್, ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ (ವೈ ಎಸ್ ಜಗನ್) ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications