ಯಡಿಯೂರಪ್ಪಗೆ ಮತ್ತೆ ಶನಿಕಾಟ, ಶಾಂತಿ ಮಾಡಿಸಿದ್ರು
ಬೂಕನಕೆರೆ(ಮಂಡ್ಯ), ನ.23: ಬಿಜೆಪಿ ಸಂಸದ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೆ ಶನಿ ಕಾಟ ಆರಂಭವಾಗಿದೆ. ಶನಿ ಗ್ರಹದ ದೋಷದಿಂದ ತಪ್ಪಿಸಿಕೊಳ್ಳಲು ತಮ್ಮ ಹುಟ್ಟೂರಾದ ಬೂಕನಕೆರೆಯಲ್ಲಿ ಶನಿವಾರ ಅಮಾವಾಸ್ಯೆ ದಿನ ಶನಿಶಾಂತಿ ಮಾಡಿಸಿದ್ದಾರೆ.
ಕಾರ್ತಿಕ ಮಾಸದ ಕೊನೆ ದಿನ ಅಮಾವಾಸ್ಯೆಯಂದು ಶನಿಶಾಂತಿ ಮಾಡಿಸಿದರೆ ನಿಮ್ಮ ರಾಶಿಗೆ ಹಿಡಿಯಲಿರುವ ಕಟಂಕ ದೂರಾಗಲಿದೆ. ಶನಿಕಾಟ ತಗ್ಗಲಿದೆ ಎಂದು ಜ್ಯೋತಿಷಿಗಳು ಹೇಳಿದ ಶಾಸ್ತ್ರವನ್ನು ನಂಬಿಕೊಂಡು ಯಡಿಯೂರಪ್ಪ ಅವರು ಭಕ್ತಿ ಭಾವದಿಂದ ಕಾಗೆ ವಾಹನರೂಢ ಶನಿದೇವರಿಗೆ ಅಡ್ಡಬಿದ್ದಿದ್ದಾರೆ.
ತಮ್ಮ ಕುಟುಂಬ ಸಮೇತರಾಗಿ ಬೂಕನಕೆರೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹಾಲಿ ಶಿಕಾರಿಪುರ ಸಂಸದ ಯಡಿಯೂರಪ್ಪ ಅವರು ಗಣಪತಿ ಹೋಮ, ಶನೈಶ್ಚರ ಯಾಗದಲ್ಲಿ ಪಾಲ್ಗೊಂಡಿದ್ದರು. ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಹೋಮ, ಹವನನಾದಿಗಳಲ್ಲಿ ಉಪಸ್ಥಿತರಿದ್ದರು. [ಯಾವ ರಾಶಿಗೆ ಸಾಡೇಸಾತಿಯಾಗಿ ಕಾಡಲಿದ್ದಾನೆ ಶನಿದೇವ?]
ಏನಿದು ಸಮಸ್ಯೆ?: ತುಲಾ ರಾಶಿಯಿಂದ ಶನಿ ಗ್ರಹವು ವೃಶ್ಚಿಕ ರಾಶಿ(ಯಡಿಯೂರಪ್ಪ ಅವರ ರಾಶಿ)ಯನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಶನಿಶಾಂತಿ ಮಾಡಿಸಬೇಕೆಂದು ಆಪ್ತ ಜ್ಯೋತಿಷಿಗಳು ಸಲಹೆ ನೀಡಿದ್ದರು. ಇದಕ್ಕಾಗಿ ಯಡಿಯೂರಪ್ಪ ಅವರು ಶಿಕಾರಿಪುರ ಅಥವಾ ಶಿವಮೊಗ್ಗ ಬಿಟ್ಟು ಮಂಡ್ಯ ಜಿಲ್ಲೆಯ ತಮ್ಮ ಜನ್ಮಸ್ಥಳನ್ನು ಏಕೆ ಆಯ್ಕೆ ಮಾಡಿಕೊಂಡರೋ ಗೊತ್ತಿಲ್ಲ.

ಮನೆ ದೇವರಾದ ಗವಿಮಠದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿಮೈಸೂರಿನಿಂದ ಬಂದಿದ್ದ 11 ಮಂದಿ ಪುರೋಹಿತರು, 19 ಸಾವಿರ ಜಪಯಜ್ಞ ಮಾಡುವ ಮೂಲಕ ಶನಿಯಾಗ ಮಾಡಿದ್ದಾರೆ. [ವೃಶ್ಚಿಕ ರಾಶಿಯವರ ಹೆಗಲೇರಿರುವ ಪರಾಕ್ರಮಿ ಶನೈಶ್ಚರ]
ಯಡಿಯೂರಪ್ಪ ಹೇಳಿಕೆ: ಲೋಕಕಲ್ಯಾಣಾರ್ಥವಾಗಿ ಈ ಯಾಗವನ್ನು ಮಾಡಲಾಗಿದೆ. ಗವಿಮಠದ ಸಿದ್ದಲಿಂಗೇಶ್ವರ ನಮ್ಮ ಮನೆ ದೇವರು. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿಗೆ ಬಂದು ಪೂಜೆ ನೆರವೇರಿಸುತ್ತೇವೆ. ಅದೇ ರೀತಿ ಈ ವರ್ಷವೂ ಬಂದು ಪೂಜೆ ನೆರವೇರಿಸಿದ್ದೇವೆ. ಇದರಲ್ಲಿ ವೈಯಕ್ತಿಕ ದೋಷ ಪರಿಹಾರಕ್ಕಿಂತ ಲೋಕ ಕಲ್ಯಾಣ ಮುಖ್ಯವಾಗಿದೆ ಎಂದಿದ್ದಾರೆ.
ಈ ಹಿಂದೆ ಕೂಡಾ ಶನಿಕಾಟ: ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ತಮಿಳುನಾಡಿನ ತಿರುನಲ್ಲಾರ್ ಶನಿದೇವಾಲಯಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಶನಿ ಅನುಗ್ರಹಕ್ಕಾಗಿ ಪ್ರಾರ್ಥಿಸಿದ್ದರು. ನಂತರ ಕುಂಭಕೋಣಂನ ಕುಂಭೇಶ್ವರ, ಚಿದಂಬರಂನ ನಟರಾಜ ದೇಗುಲಕ್ಕೂ ಭೇಟಿ ನೀಡಿದ್ದರು. ಇದಲ್ಲದೆ ಕೊಡಗಿನ ಭಾಗಮಂಡಲದ ಭಗಂಡೇಶ್ವರ ಸ್ವಾಮಿಗೂ ಯಡಿಯೂರಪ್ಪ ನಡೆದುಕೊಳ್ಳುತ್ತಾರೆ ಎಂದು ಮಂಡ್ಯದ ಜನಪ್ರಿಯ ಪುರೋಹಿತ ಭಾನುಪ್ರಕಾಶ್ ಶರ್ಮ ಹೇಳಿದ್ದಾರೆ.












Click it and Unblock the Notifications