ʼಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇʼ ತೆರೆದ ಬಿಜೆಪಿ; ಇದೆಲ್ಲಿದೆ ಗೊತ್ತಾ?
ಬೆಂಗಳೂರು, ಆಗಸ್ಟ್ 26: ಬೆಂಗಳೂರಿಗರು ಅದರಲ್ಲೂ ಟೆಕ್ಕಿಗಳು ವೀಕೆಂಡ್ ಬಂತಂದ್ರೆ ಸಾಕು ದೂರದ ರೆಸಾರ್ಟ್ಸ್ ಹಾಗೂ ಹೋಮ್ ಸ್ಟೇಗಳತ್ತ ಗಂಟು ಮೂಟೆ ಕಟ್ಕೊಂಡು ಹೋಗೋದನ್ನು ನೋಡಿರುತ್ತೇವೆ. ಸದ್ಯ ಬೆಂಗಳೂರಿನಲ್ಲಿ ಇದೀಗ ಹೊಸ ರೆಸಾರ್ಟ್ನ ಹೆಸರು ಸಖತ್ ಸದ್ದು ಮಾಡುತ್ತಿದೆ. ಅದ್ಯಾವುದು ಅಂತೀರಾ? ಅದರ ಹೆಸರೇನಪ್ಪಾ ಅಂದ್ರೆ.. " ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ".
ಅರೇ ಈ ಹೆಸರು ಎಲ್ಲೋ ಕೇಳಿದಂತಿದ್ಯಲ್ಲ ಅಂತ ತಲೆಕೆಡಿಸಿಕೊಳ್ಳಬೇಡಿ. ಇದು ಬೆಂಗಳೂರಿನಲ್ಲಿ ಕೈದಿಗಳನ್ನು ಹಾಕ್ತಾರಲ್ಲ ಅದೇ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು. ಈ ಜೈಲು ಯಾವಾಗ ರೆಸಾರ್ಟ್ ಹಾಗೂ ಹೋಮ್ ಸ್ಟೇ ಆಯ್ತು? ಅಂತ ಮತ್ತೆ ತಲೆಕೆಡಿಸಿಕೊಳ್ಳಬೇಡಿ. ಹೀಗಂತ ನಾಮಕರಣ ಮಾಡಿರೋದು ಬಿಜಿಪಿಯವರು.

ಇದೇ ಜೈಲಿನಲ್ಲಿರುವ ನಟ ದರ್ಶನ್ ಅವರು ಜಾಲಿಯಾಗಿದ್ದ ಫೋಟೋ ನಿನ್ನೆ ಲೀಕ್ ಆಗಿತ್ತು. ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಈ ರೀತಿ ಟೀಕಿಸಿದೆ. ಹಾಗಾಗಿ ಪರಪ್ಪನ ಅಗ್ರಹಾರ ರೆಸಾರ್ಟ್ಸ್-ಹೋಮ್ಸ್ಟೇ ಹೆಸರು ಮುನ್ನೆಲೆಗೆ ಬಂದಿದೆ.
ಈ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನಲ್ಲಿ ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ಇರಬಹುದು ಎನ್ನುವ ವಿಚಾರಕ್ಕೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದೆ. ಈ ಬಗ್ಗೆ ಟ್ವಿಟರ್ನಲ್ಲಿ ವಿಶೇಷ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದೆ.
ಜಾಹೀರಾತಿನಲ್ಲಿ ಏನಿದೆ?: ಟ್ವೀಟ್ನಲ್ಲಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಹೊಸ ಉದ್ಯಮ, ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ!!! ಎಂದು ಕುಟುಕಿದ್ದು, ಸುಂದರವಾದ ಪ್ರಕೃತಿಯ ಮಡಿಲಲ್ಲಿ ಅಪರಾಧಿಗಳೊಂದಿಗೆ ಗುಂಡು-ತಿಂಡು-ಸಿಗರೇಟ್ ಜೊತೆ ಆರಾಮದಾಯಕವಾದ ಸಂಜೆಯನ್ನು ಕಳೆಯಿರಿ.. ಉತ್ತಮವಾದ ವಸತಿ ವ್ಯವಸ್ಥೆ, ಟಿವಿ, ಶವರ್, ಆಪ್ತರ ಜೊತೆ ವಿಡಿಯೋ ಕಾಲ್ ಸೇರಿದಂತೆ ಇತರ ಎಲ್ಲ ವ್ಯವಸ್ಥೆಗಳನ್ನು ನಿಮ್ಮ ಬ್ಯಾರಕ್ಗಳಲ್ಲಿಯೇ ಒದಗಿಸಲಾಗುವುದು.

ಇನ್ನೇಕೆ ತಡ, ಕೂಡಲೇ ಬನ್ನಿ ಪರಪ್ಪನ ಅಗ್ರಹಾರ ರೆಸಾರ್ಟ್ ಮತ್ತು ಹೋಂಸ್ಟೇಗೆ ಎಂದು ಜಾಹೀರಾತು ನೀಡಿದೆ. ಈ ಎಲ್ಲ ಸೇವೆಗಳು ಅತಿ ಹೆಚ್ಚು ದುಡ್ಡು ನೀಡುವವರಿಗೆ ಮಾತ್ರ, ಚೌಕಾಸಿ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ವಿಶೇಷ ಸೂಚನೆಯನ್ನೂ ಪ್ರಕಟಿಸಿದೆ. ಈ ಮೂಲಕ ನಟ ದರ್ಶನ್ ಫೋಟೋ ಲೀಕ್ ಆಗಿರುವ ವಿಚಾರವನ್ನು ಬಿಜೆಪಿಯವರು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳೊಂದಿಗೆ ಸಿಗರೇಟ್ ಸೇದಿಕೊಂಡು ಕುಳಿತಿರುವ ಫೋಟೋ ನಿನ್ನೆ ಲೀಕ್ ಆಗಿತ್ತು. ಈ ಫೋಟೋ ಎಲ್ಲೆಡೆ ಹರಿದಾಡಿ, ಜೈಲಿನಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೆ ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಜೈಲಿನ ಅಧಿಕಾರಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ, ಜೈಲಿನ ಏಳು ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಲ್ಲದೆ, ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಭ್ರಷ್ಟ @INCKarnataka ಸರ್ಕಾರದ ಹೊಸ ಉದ್ಯಮ, ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ!!!#ResignCM #CongressFailsKarnataka pic.twitter.com/mv01x4zfuX
— BJP Karnataka (@BJP4Karnataka) August 26, 2024
ಜೈಲಿನಲ್ಲಿ ದರ್ಶನ್ ಹೇಗಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಜೈಲಿನಲ್ಲಿ ದರ್ಶನ್ ಮೋಜು ಮಸ್ತಿ ಮಾಡುತ್ತಿರುವುದು ಒಂದೆಡೆ ಶಾಕ್ ನೀಡಿದ್ದರೆ, ಈ ಫೋಟೊ ಲೀಕ್ ಆಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲಿ ಬಂದು ನಿಂತಿದೆ. ಮೂಲಗಳ ಪ್ರಕಾರ ಜೈಲಿನಲ್ಲಿರುವ ಕೈದಿಯೊಬ್ಬ ಈ ಫೋಟೊ ತೆಗೆದು ತನ್ನ ಹೆಂಡತಿಗೆ ವಾಟ್ಸಾಪ್ ಮಾಡಿದ್ದನಂತೆ. ಬಳಿಕ ಫೋಟೋ ಅಲ್ಲಿಂದಲೇ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.
ಫೋಟೋದಲ್ಲಿ ದರ್ಶನ್ ಮೂರ್ನಾಲ್ಕು ಮಂದಿಯೊಂದಿಗೆ ಕುಳಿತು ಜಾಲಿಯಾಗಿ ಮಾತುಕತೆ ನಡೆಸುತ್ತಿದ್ದು, ಅದರಲ್ಲಿ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಕೂಡ ಇದ್ದಾನೆ ಎನ್ನಲಾಗಿದೆ. ಸದ್ಯ ಜೈಲು ಸೇರಿದ್ದರೂ ಒಳಗೆ ಆರಾಮದಾಯಕವಾಗಿ ಟೀ ಕುಡಿಯುತ್ತಾ, ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.












Click it and Unblock the Notifications