ಶಾಸಕ ಮುನಿರತ್ನಗೆ ಎರಡು ದಿನ ಪೊಲೀಸ್ ಕಸ್ಟಡಿ
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ನಿನ್ನೆ ತಡರಾತ್ರಿವರೆಗೂ ಮುನಿರತ್ನ ಅವರ ಬಂಧನ ಪ್ರಕ್ರಿಯೆ, ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ಎರಡು ದಿನಗಳವರೆಗೆ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.
ಪೊಲೀಸರು ಮುನಿರತ್ನ ಅವರನ್ನು ಒಂದು ವಾರದ ಮಟ್ಟಿಗೆ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಿಗೆ ಕೋರಿದ್ದರು. ಆದರೆ ನ್ಯಾಯಾಧೀಶರು ವಿಚಾರಣೆ ನಡೆಸಿ ಕೇವಲ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ನಿನ್ನೆ ಕೋಲಾರ ಜಿಲ್ಲೆಯಿಂದ ಮುನಿರತ್ನ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಅವರನ್ನು ವಿಚಾರಣೆ ನಡೆಸಲಾಗಿತ್ತು.
ಈ ವೇಳೆ ಮುನಿರತ್ನ ಅವರನ್ನು ನನ್ನದೇನೂ ತಪ್ಪಿಲ್ಲ, ನಾನೇನು ಮಾಡಿಲ್ಲ ಎಂದು ಹೇಳುತ್ತಲೇ ಇದ್ದರು. ನ್ಯಾಯಾಧೀಶರ ಮುಂದೆಯೂ ಇದೇ ರೀತಿ ಹೇಳಿದ್ದು, ಇದೆಲ್ಲ ನನ್ನ ವಿರುದ್ಧ ಮಾಡುತ್ತಿರು ಷಡ್ಯಂತ್ರ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?:ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಶಾಸಕ ಮುನಿರತ್ನ ಜೀವ ಬೆದರಿಕೆ ಹಾಕಿದ್ದಲ್ಲದೆ, ಜಾತಿ ನಿಂದನೆ ಕೂಡ ಮಾಡಿದ್ದಾರೆ ಎನ್ನಲಾದ ಆಡಿಯೋ ಎಲ್ಲೆಡೆ ಹರಿದಾಡಿತ್ತು. ಇದರ ಬೆನ್ನಲ್ಲೇ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಮುನಿರತ್ನ ಅವರ ಪತ್ತೆಗೆ ಪೊಲೀಸರು ಮುಂದಾದಾಗ ಅವರು ಕೋಲಾರ ಜಿಲ್ಲೆಯಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಕೊನೆಗೆ ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ಲಾಕ್ ಮಾಡಿದ್ದರು. ಕೋಲಾರದಿಂದ ಆಂಧ್ರದ ಚಿತ್ತೂರು ಕಡೆಗೆ ಹೋಗಲು ಶಾಸಕ ಮುನಿರತ್ನ ಮುಂದಾಗಿದ್ದರು. ಮುನಿರತ್ನ ಅವರ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಅವರಿದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಇದಕ್ಕೂ ಮುನ್ನ ವಿಡಿಯೋ ಮಾಡಿದ್ದ ಮುನಿರತ್ನ, ಚಲುವರಾಜು ಅವರು ಆ ಆಡಿಯೋ ತೆಗೆದುಕೊಂಡು ಕೂಡಲೇ ಸ್ಪೀಕರ್ ಕಚೇರಿಗೆ ಬರಲಿ. ಎರಡು ಸಮುದಾಯಗಳು ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ. ಚಲುವರಾಜು ಹಲವು ವರ್ಷಗಳಿಂದ ನನ್ನೊಂದಿಗೆ ಇದ್ದವರು, ಒಂದು ತಿಂಗಳ ಹಿಂದಷ್ಟೇ ಇದೇ ಚಲುವರಾಜ್ ನನ್ನ ಬಗ್ಗೆ ಹೊಗಳಿದ್ದರು. ಈಗ ನಾನು ಅವರ ಬಳಿ ಹಣ ಕೇಳುತ್ತೀನಾ?ʼ ಎಂದು ಮುನಿರತ್ನ ಪ್ರಶ್ನಿಸಿದ್ದರು.
ರಾಜಕೀಯ ಪಿತೂರಿಯಿಂದಾಗಿ ಈ ರೀತಿಯ ಆರೋಪಗಳನ್ನು ನನ್ನ ಮೇಲೆ ಮಾಡಿದ್ದಾರೆ. ನಾನೆಲ್ಲೂ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆ ಆಡಿಯೋ ನನ್ನದೇ ಎಂದು ಸಾಬೀತಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದೂ ಮುನಿರತ್ನ ಹೇಳಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಮುನಿರತ್ನ ಅವರನ್ನು ವಶಕ್ಕೆ ಪಡೆದಿದ್ದರು.
ಮತ್ತೊಂದೆಡೆ ಬಿಜೆಪಿಯು ಮುನಿರತ್ನ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಮುಂದಿನ ಐದು ದಿನಗಳಲ್ಲಿ ಈ ಘಟನೆಯ ಕುರಿತು ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.












Click it and Unblock the Notifications