ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸೋಕ್ಕೆ ನಿಮ್ಮಲ್ಲೇ ಪ್ಲಾನ್ ಬಿ ರೆಡಿ ಇದೆಯಂತೆ?
ಬೆಂಗಳೂರು, ಅಕ್ಟೋಬರ್ 20: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನ ಜೈಲಿಗೆ ಕಳುಹಿಸೋಕ್ಕೆ ನಿಮ್ಮಲ್ಲೇ ಪ್ಲಾನ್ ಬಿ ರೆಡಿ ಇದೆಯಂತೆ? ಕಣ್ಣು ಬಿಟ್ಟು ನೋಡಿಕೊಳ್ಳಿ, ಕಾಣಲಿಲ್ಲ ಅಂದರೆ "ಮಿಂಟೋ ಆಸ್ಪತ್ರೆಯಲ್ಲಿ" ಚಿಕಿತ್ಸೆ ಪಡೆಯಿರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಮ್ಮ ಅಧ್ಯಕ್ಷರಿಗೆ ಅಹಂಕಾರದ ಮದ ಏರಿ ಕಣ್ಣು ಕಾಣಿಸುತ್ತಿಲ್ಲವಿರಬಹುದು.ಮಿಂಟೋ ಆಸ್ಪತ್ರೆಯಲ್ಲಿ ಗುಣವಾಗಲಿಲ್ಲ ಅಂದರೆ ನನ್ನ ಕಚೇರಿಗೆ ಬನ್ನಿ ನಿಮ್ಮ ಕಣ್ಣಿಗೆ ಚಿಕಿತ್ಸೆ ಉಚಿತ ಖಚಿತ ಹಾಗು ನಿಶ್ಚಿತವಾಗಿ ಕೊಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದು, ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆ ಉಂಟಾಗಿದೆ! ಕರ್ನಾಟಕ ಬಿಜೆಪಿ ಕಣ್ಣು ಕುರುಡಾದ ಕಾರಣ ಬೇರೆಯವರನ್ನು ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ! ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಕುರುಡುತನವನ್ನು ಸರಿಪಡಿಸಿಕೊಳ್ಳಲಿ.
ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ, ದೃಷ್ಟಿ ದೋಷ ಸರಿಹೋಗಲಿ ಎಂದು ಹಾರೈಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಕಮಿಷನ್ ಆರೋಪ ಮಾಡುತ್ತಿರುವ ಬಿಜೆಪಿ, ಇದೀಗ ಮತ್ತೆ ಆರೋಪ ಮಾಡಿದೆ. ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ ಎಂದು ಬಿಜೆಪಿ ಹೇಳಿದೆ.
▪️ಬಿಡಿಎ - ₹50 ಕೋಟಿ
▪️ಬಿಡಬ್ಲೂಎಸ್ಎಸ್ಬಿ - ₹45 ಕೋಟಿ
▪️ಕೆಆರ್ಐಡಿಎಲ್ - ₹20 ಕೋಟಿ
▪️ಕಿಯೋನಿಕ್ಸ್ - ₹15 ಕೋಟಿ
▪️ಕರ್ನಾಟಕ ಉಗ್ರಾಣ ನಿಗಮ - ₹12 ಕೋಟಿ
▪️ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - ₹10 ಕೋಟಿ
ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್ಗಳಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್ ಆಗುವ ಸಾಧ್ಯತೆ ಇದೆಯಂತೆ. ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಕಲೆಕ್ಷನ್ ಹಾವಳಿಗೆ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನ ತತ್ತರಿಸಿದ್ದಾರೆ. ಅಗತ್ಯ ಸೌಕರ್ಯಗಳಿಗೂ ಕೈ ಬಿಸಿ ಮಾಡಬೇಕಾದ ಕಾರಣ ಮಹಿಳೆಯರಂತೂ ಬೇಸತ್ತಿದ್ದಾರೆ. ಸ್ಟಾಲಿನ್ ಜತೆಗಿನ ಹೊಂದಾಣಿಕೆಗಾಗಿ ಬರದಲ್ಲೂ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮನೆಗಳಿಗೆ ನೀರು ಬಿಡಲು ಮಾತ್ರ ಲಂಚ ಕೊಡಲೇಬೇಕು. ಮೇಲಿನಿಂದ ಕೆಳ ಹಂತದವರೆಗೂ ಸರ್ಕಾರಿ ವ್ಯವಸ್ಥೆಯೇ ಲಂಚಕ್ಕಾಗಿ ಹಾತೊರೆಯಲು, ಸರ್ಕಾರ ನಡೆಸುವ ಕಲೆಕ್ಷನ್ ಮಾಸ್ಟರ್ಗಳೇ ಸ್ಫೂರ್ತಿ ಎಂದು ಬಿಜೆಪಿ ಹೇಳಿದೆ.












Click it and Unblock the Notifications