ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಕುರಿತು ಇರುವ ಭಯವೇನು ಗೊತ್ತಾ?
ಬೆಂಗಳೂರು, ಅ. 28: ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎಂಬಂತೆ, ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದರೂ, ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ನಿಲ್ಲುತ್ತಿಲ್ಲ.
ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಆಯಾ ಕ್ಷೇತ್ರಗಳ ಸಮಸ್ಯೆಗಳನ್ನು ಎತ್ತಿ ತೋರಿಸಿ ಮಾತನಾಡಿದ್ದರು. ಇದೀಗ ಅವರ ಪ್ರಚಾರದ ಸಂದರ್ಭದಲ್ಲಿ ಆಡಿದ್ದ ಸಂಗತಿಗಳಿಗೆ ರಾಜ್ಯ ಬಿಜೆಪಿ ತಿರುಗೇಟು ಕೊಟ್ಟಿದೆ.
ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅ. 27ರಂದು ಸಂಜೆ 7ಕ್ಕೆ ತೆರೆ ಬಿದ್ದಿದೆ. ಇದೀಗ ಮನೆ-ಮನೆಗೆ ತೆರಳಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ವಿಪಕ್ಷ ನಾಯಕರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದೆ.
ಸಿದ್ದರಾಮಯ್ಯಗೆ ಗಣೇಶ್ ಕಾರ್ಣಿಕ್ ತಿರುಗೇಟು!
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿರುವ ಬಿಜೆಪಿ ನಾಯಕರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. "ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಿದ್ದು, ರಾಜ್ಯ ಸರಕಾರವು ಅದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರದಿಂದ 7,103 ಕೋಟಿ ಮತ್ತು ರಾಜ್ಯದಿಂದ 2,849 ಕೋಟಿ ರೂಪಾಯಿ ವಿತರಣೆಯಾಗಿದೆ. ಶೇ 97ರಷ್ಟು ರೈತರ ಖಾತೆಗಳು ಆಧಾರ್ ಲಿಂಕ್ ಆಗಿದ್ದು, ನೇರ ವರ್ಗಾವಣೆ (ಡಿಬಿಟಿ) ಸಾಧ್ಯವಾಗಿದೆ. ಈ ಚಟುವಟಿಕೆಗೆ 2020- 21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ ಲಭಿಸಿದೆ" ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಸ್ಪಷ್ಟನೆ ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಉಪಯೋಗವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
ಯಾವ ಪಾಡಿಗಾಗಿ ಕಾಂಗ್ರೆಸ್ ಸೇರಿದ್ದೀರಿ?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, "ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ನೀವು ಕಾಂಗ್ರೆಸ್ ಪಕ್ಷದವರಲ್ಲ; ನೀವೆಲ್ಲೋ ಜನತಾದಳದಲ್ಲಿ ಇದ್ದವರು. ನೀವು ಕೂಡ ಕಾಂಗ್ರೆಸ್ಗೆ ಹೋಗಿದ್ದೀರಿ. ನೀವು ಯಾವ ಪಾಡಿಗಾಗಿ ಹೋಗಿದ್ದೀರೆಂದು ಸ್ಪಷ್ಟಪಡಿಸಿ" ಎಂದು ಸವಾಲು ಹಾಕಿದ್ದಾರೆ.
ಅವಹೇಳನಕಾರಿ ಮಾತನಾಡಲು ನಿಮಗೆ ಯಾವ ಹಕ್ಕಿದೆ?
"ದಲಿತರ ಬಗ್ಗೆ ಈ ರೀತಿ ಅವಹೇಳನಕಾರಿ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ?" ಎಂದು ಇದೇ ವೇಳೆ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. "ನೀವು ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳ ಕಾಲ ದುಡಿದ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇತ್ತು. ಆಗ ನೀವು ಹೊರಗಡೆಯಿಂದ ಬಂದು, ಇಡೀ ಕಾಂಗ್ರೆಸ್ ಪಕ್ಷವನ್ನು ಬ್ಲಾಕ್ಮೇಲ್ ಮಾಡಿ, ಮುಖಂಡರನ್ನು ತುಳಿದು, ದಲಿತರ ಸಂಹಾರ ಮಾಡಿ ನೀವು ಮುಖ್ಯಮಂತ್ರಿ ಆದವರು. ಸಿದ್ದರಾಮಯ್ಯ ಒಬ್ಬ ಕಪಟ ರಾಜಕಾರಣಿ, ಅವರಿಗೆ ಇನ್ನೊಬ್ಬರನ್ನು ತುಳಿದೇ ಗೊತ್ತು" ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.
ಮಲ್ಲಿಕಾರ್ಜುನ್ ಖರ್ಗೆ ಓಡಿಸಿದ್ದು ಯಾರು?
"ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಚರ್ಚೆ ನಡೆಯುತ್ತಿದ್ದಾಗ, 2008ರಲ್ಲಿ ಕೇವಲ 250 ಮತಗಳ ಅಂತರದಲ್ಲಿ ಗೆದ್ದಿದ್ದ ನೀವು ಬಹುದೊಡ್ಡ ನಾಯಕರಾದಿರಿ. ನೀವೆಷ್ಟು ಕಳಪೆ ನಾಯಕ ಎಂಬುದು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿತ್ತು. ಅವತ್ತು ಕೆಪಿಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅವತ್ತೇ ತುಳಿದು ಇಲ್ಲಿಂದ ಓಡಿಸಿದಿರಿ. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಅವಕಾಶ ಸಿಗಬಾರದೆಂದು ಅವರನ್ನೂ ಸೋಲಿಸಿದ್ದಿರಿ" ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಕುರಿತು ಇರುವ ಬಯವೇನು?
"ಸಿದ್ದರಾಮಯ್ಯರ ಬಗ್ಗೆ ಮಾತನಾಡಿದರೆ ಮತ್ತೆಲ್ಲಿ ಸೋಲಿಸಿಬಿಡುತ್ತಾರೋ ಎಂಬ ಭಯ ಆ ಪಕ್ಷದ ನಾಯಕರಿಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರು ಹೆಚ್ಚಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಸಿದ್ದರಾಮಯ್ಯ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಎಲುಬಿಲ್ಲದವರು. ಮಾಜಿ ಸಿಎಂ ದಿ. ಬಂಗಾರಪ್ಪ ಅವರು ಪೊಲಿಟಿಕಲ್ ಸ್ಕಾರ್ಪಿಯನ್ (ರಾಜಕೀಯದ ಚೇಳು) ಎಂಬ ಮಾತು ಹೇಳುತ್ತಿದ್ದರು. ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ. ದೇವೇಗೌಡರಿಗೆ, ತಮ್ಮನ್ನು ಗೆಲ್ಲಿಸಿದ ಖರ್ಗೆಯವರಿಗೆ, ಪಕ್ಷಕ್ಕೆ ಕರೆತಂದ ವಿಶ್ವನಾಥ್, ರೇವಣ್ಣನ ಪರಿಸ್ಥಿತಿ ಏನಾಗಿದೆ? ಅವರ ಸಮುದಾಯದವರನ್ನೇ ಸಿದ್ದರಾಮಯ್ಯ ಬಿಟ್ಟಿಲ್ಲ. ವಿಶ್ವನಾಥರನ್ನೇ ನೀವು ಬಿಟ್ಟಿಲ್ಲ; ಅವರು ತಪ್ಪಿಸಿಕೊಳ್ಳಲು ಬಿಜೆಪಿಗೆ ಬಂದಿದ್ದಾರೆ" ಎಂಬ ಮತ್ತೊಂದು ಗಂಭೀರ ಆರೋಪವನ್ನು ಛಲವಾದಿ ನಾರಾಯಣಸ್ವಾಮಿ ಮಾಡಿದ್ದಾರೆ.