ಬ್ಲೂಫಿಲಂ ಅಂದ್ರೆ ಏನು ಗೊತ್ತಾ? ಜನತೆಗೆ ಸಿದ್ದರಾಮಯ್ಯ ಕೇಳಿದ ಪ್ರಶ್ನೆ!
ಬ್ಲೂಫಿಲಂ ಅಂದರೆ ಏನು ಗೊತ್ತೇನ್ರೀ, ನೀವು ಆರಿಸಿದ ಜನಪ್ರತಿನಿಧಿ ಅಸೆಂಬ್ಲಿಯಲ್ಲಿ ಬ್ಲೂಫಿಲಂ ನೋಡುತ್ತಾರಲ್ಲಾ,ನೀವು ನಿಮ್ಮ ನಾಯಕರನ್ನು ಕೇಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸೆಂಬ್ಲಿ ಅನ್ನೋದು ದೇಗುಲ ಇದ್ದ ಹಾಗೆ, ಸಿಎಂ ಸಿದ್ದರಾಮಯ್
ಬೆಳಗಾವಿ, ಜುಲೈ 1: ನೀಲಿಚಿತ್ರ ಯಾನೆ ಬ್ಲೂಫಿಲಂ ಅಂದರೆ ಏನು ಗೊತ್ತೇನ್ರೀ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯ ಅಥಣಿಯ ಸಾವಿರಾರು ಜನತೆಯನ್ನು ಕೇಳಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಶುಕ್ರವಾರ (ಜೂ 30) ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸೆಂಬ್ಲಿ ಅನ್ನೋದು ದೇಗುಲ ಇದ್ದ ಹಾಗೆ. ಅಲ್ಲಿ ನೀವು ಆರಿಸಿದ ಜನಪ್ರತಿನಿಧಿ ಬ್ಲೂಫಿಲಂ ನೋಡುತ್ತಾರಲ್ಲಾ,ನೀವು ನಿಮ್ಮ ನಾಯಕರನ್ನು ಕೇಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ಷರಶಃ ಚುನಾವಣಾಪೂರ್ವ ಸಮಾವೇಶದಂತಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಮೋದಿ, ಯಡಿಯೂರಪ್ಪ, ಲಕ್ಷಣ ಸವದಿ ಸೇರಿದಂತೆ ಬಿಜೆಪಿಯ ಮೇಲೆ ಹರಿಹಾಯ್ದಿದ್ದಾರೆ. ಜೆಡಿಎಸ್ ಬಗ್ಗೆ ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡ ಹಾಗೆ ಕಾಣಿಸಲಿಲ್ಲ.
ವೇದಿಕೆಯಲ್ಲಿ ಪೇರಳೆ ಹಣ್ಣು ತಿಂದು, ಭ್ರಷ್ಟ, ಭಂಡ, ಮಾನಮರ್ಯಾದೆ, ನಾಚಿಕೆ ಇಲ್ಲದವರು ಮುಂತಾದ ಯಥೇಚ್ಛ ಪದಪುಂಜಗಳನ್ನು ಬಿಜೆಪಿಯ ವಿರುದ್ದ ಪ್ರಯೋಗಿಸಿದ ಸಿದ್ದರಾಮಯ್ಯ, ಕುಟುಂಬ ಕಲಹದಲ್ಲಿ ಕೋಪಿಸಿಕೊಂಡಿದ್ದ ಜಾರಕಿಹೊಳಿ ಸಹೋದರರನ್ನೂ ಒಂದಾಗಿಸುವ ಕೆಲಸಕ್ಕೂ ಮುಂದಾದರು.
ನಾಲ್ಕು ವರ್ಷದ ತಮ್ಮ ಸರಕಾರ, ಮೂರು ವರ್ಷದ ಮೋದಿ ಸರಕಾರವನ್ನು ಹೋಲಿಸಿದ ಸಿದ್ದರಾಮಯ್ಯ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹೆಚ್ಚುಕಮ್ಮಿ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇದೇ ಮಾತನ್ನು ಮೋದಿ ಹೇಳಲು ಸಾಧ್ಯವೇ ಎಂದು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಮುಂದೆ ಓದಿ..

ಬ್ಲೂಫಿಲಂ ಅಂದರೆ ಏನು ಗೊತ್ತಾ, ಸಿಎಂ ಪ್ರಶ್ನೆ
ನಿಮ್ಮ ಕ್ಷೇತ್ರದ ಶಾಸಕ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾಗ, ಆ ಸ್ಥಾನದಿಂದ ಅವರನ್ನು ಡಿಸ್ಮಿಸ್ ಮಾಡಲಾಯಿತು. ಸದನದಲ್ಲಿ ಬ್ಲೂಫಿಲಂ ನೋಡಿದ್ದಕ್ಕಾಗಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಲಾಯಿತು. ಬ್ಲೂಫಿಲಂ ಅಂದ್ರೆ ಏನು ಗೊತ್ತಾ ನಿಮಗೆ ಎಂದು ಸಿದ್ದರಾಮಯ್ಯ, ಸಭಿಕರನ್ನು ಕೇಳಿದಾಗ ಜನರಿಂದ ಭಾರೀ ಕರತಾಡನ ವ್ಯಕ್ತವಾಯಿತು.

ನಿಮ್ಮ ಶಾಸಕ ಲಕ್ಷಣ್ ಸವದಿಯನ್ನು ಕೇಳಿ
ಲಕ್ಷಣ್ ಸವದಿ ನಿಮ್ಮ ಕ್ಷೇತ್ರದ ಶಾಸಕ, ನೀವು ಅವರನ್ನು ಯಾಕೆ ಬ್ಲೂಫಿಲಂ ನೋಡಿದ್ದು ಎಂದು ಪ್ರಶ್ನಿಸಬೇಕು. ಇಂತವರೆಲ್ಲಾ ಕಾಂಗ್ರೆಸ್ಸಿಗೆ ಪಾಠ ಹೇಳಲು ಬರುತ್ತಾರಲ್ಲಾ, ಇವರಿಗೆ ನಾಚಿಗೆ ಆಗುವುದಿಲ್ಲವೇ - ಸಿದ್ದರಾಮಯ್ಯ.

ಯಡಿಯೂರಪ್ಪಗೆ ನೈತಿಕತೆಯಿಲ್ಲ
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಡಿಯೂರಪ್ಪನವರಿಗೆ ನೈತಿಕತೆ ಇದೆಯೇ? ಜೈಲಿಗೆ ಹೋಗಿ ಬಂದವರು, ಕರಪ್ಷನ್ ಬಗ್ಗೆ ಮಾತನಾಡುತ್ತಾರಲ್ವಾ, ಇವರಿಗೆ ಮಾನಮರ್ಯಾದೆ ಅನ್ನೋದು ಏನಾದರೂ ಇದೆಯಾ - ಸಿದ್ದರಾಮಯ್ಯ.

ಭ್ರಷ್ಟಾಚಾರದ ದುಡ್ಡನ್ನು ಚೆಕ್ ನಲ್ಲಿ ತೆಗೆದುಕೊಂಡ ಬಿಎಸ್ವೈ
ಭ್ರಷ್ಟಾಚಾರದ ದುಡ್ಡನ್ನು ಚೆಕ್ ಮೂಲಕ ಪಡೆದುಕೊಂಡು ಸಿಕ್ಕಿಹಾಕಿಕೊಂಡ ದೇಶದ ಏಕೈಕ ರಾಜಕಾರಣಿಯೆಂದರೆ ಅದು ಯಡಿಯೂರಪ್ಪ. ಇವರು ಇನ್ನೆಂತಾ ಭಂಡರು ಇರಬೇಕು. ಊರೆಲ್ಲಾ ಸುತ್ತಿ ರೈತರ ಬಗ್ಗೆ ಮಾತನಾಡುವ ಇವರು ಅದ್ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗುತ್ತಾರೆ - ಸಿದ್ದರಾಮಯ್ಯ.

ಮೋದಿ ರೀತಿ ಅಪಪ್ರಚಾರ ಮಾಡುವುದಿಲ್ಲ
ನಾನು ಮೋದಿಯ ರೀತಿಯಲ್ಲಿ ಅಪಪ್ರಚಾರ ಮಾಡಿಕೊಂಡು ತಿರುಗಾಡುತ್ತಿಲ್ಲ. ಬಿಜೆಪಿ ನಾಯಕರಿಗೆ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ, ನಾವು ಕೊಟ್ಟ ಪ್ರಣಾಳಿಕೆ ಮತ್ತು ಕೇಂದ್ರ ಸರಕಾರ ನೀಡಿದ್ದ ಪ್ರಣಾಳಿಕೆಯಲ್ಲಿ ಯಾವುದು ಈಡೇರಿದೆ, ಯಾವುದು ಈಡೇರಿಲ್ಲ ಎನ್ನುವುದನ್ನು ಸಾರ್ವಜನಿಕವಾಗಿ ಡಿಬೇಟ್ ಮಾಡೋಣ. ಬಿಜೆಪಿ ನಾಯಕರು ನನ್ನ ಸವಾಲನ್ನು ಸ್ವೀಕರಿಸುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಥಣಿಯಲ್ಲಿ ಏತನೀರಾವರಿ ಯೋಜನೆಗೆ ಚಾಲನೆ
ಕಾಂಗ್ರೆಸ್ ಸಮಾವೇಶಕ್ಕೆ ಮೊದಲು ಸಿಎಂ ಸಿದ್ದರಾಮಯ್ಯ ಅಥಣಿಯ ಮದಬಾವಿಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿದರು. ಈ ಭಾಗದ ಜನರ ಬಹುದಿನದ ಕನಸನ್ನು ನಮ್ಮ ಸರಕಾರ ಈಡೇರಿಸಿದೆ ಎಂದು ಸಿಎಂ ಹೇಳಿದರು.












Click it and Unblock the Notifications