ಹಗರಣಗಳಿಂದ ಸಿದ್ದರಾಮಯ್ಯ ಕಾಗೆ ಥರ ಕಪ್ಪಾಗಿದ್ದಾರೆ-ಛಲವಾದಿ ನಾರಾಯಣಸ್ವಾಮಿ
ದಾವಣಗೆರೆ, ಏಪ್ರಿಲ್ 21: ಬಡವರ ಪಾಲಿಗೆ ಕಾಂಗ್ರೆಸ್ ಪಕ್ಷ ಒಂದು ಗಿರವಿ ಅಂಗಡಿಯಂತೆ. ಶ್ರೀಮಂತರು ಈ ಬಡವರು ಗಿರವಿ ಇಟ್ಟ ವಸ್ತುಗಳನ್ನು ಹೊಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಮೆಟ್ಟಿಲು ಹತ್ತಿದ ಬಡವರ ಜೀವನ ಸಮಾಧಿಯಾಗುತ್ತದೆ. ಯಾರೂ ವಾಪಸ್ ಬರುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ದಾವಣಗೆರೆಯಲ್ಲಿ ನಡೆದ ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಾಬಾಸಾಹೇಬರು ಹೇಳಿದಂತೆ ಕಾಂಗ್ರೆಸ್ ಸುಡುವ ಮನೆಯೇ ಹೊರತು ಅದು ಭವಿಷ್ಯ ನೀಡುವ ಮನೆಯಲ್ಲ. ದಲಿತರ ಪರ ಇರುವ ಮತ್ತು ಅಂಬೇಡ್ಕರರಿಗೆ ಗೌರವ ಕೊಡುವ ಬಿಜೆಪಿ ಮತ್ತು ಮೋದಿಯವರನ್ನು ಸರ್ವರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನವರು ಹಗರಣಗಳ ಮೂಲಕ ಕಾಗೆ ಥರ ಕಪ್ಪಾಗಿದ್ದಾರೆ. ಅಲ್ಲಿ ಕಪ್ಪು ಚುಕ್ಕಿ ತೋರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ದಲಿತರಿಗೆ 42 ಸಾವಿರ ಕೊಡುವುದಾಗಿ ಬಜೆಟ್ನಲ್ಲಿ ಪ್ರಕಟಿಸುತ್ತಾರೆ. 14 ಸಾವಿರ ಕೋಟಿಯನ್ನು ಗ್ಯಾರಂಟಿಗಾಗಿ ಅದರಿಂದ ತೆಗೆಯುತ್ತಾರೆ. ದಲಿತರ ದುಡ್ಡು ದಲಿತರು ಕೊಟ್ಟ ಗ್ಯಾರಂಟಿ ಯಾವುದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಇನ್ನು ದಲಿತರಿಗೆ ಕೊಟ್ಟದ್ದು ಕೇವಲ 7 ಸಾವಿರ ಕೋಟಿ ರೂಪಾಯಿ. ಇದರ ಕುರಿತು ಕಾಂಗ್ರೆಸ್ಸಿನ ದಲಿತ ನಾಯಕರು ಒಬ್ಬರೂ ಮಾತನಾಡುವುದಿಲ್ಲ. ದಲಿತರಿಗೆ ಇಷ್ಟು ಅನ್ಯಾಯ ಆದರೂ ಎಐಸಿಸಿ ಅಧ್ಯಕ್ಷರು ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಾರೆ ಎನ್ನುತ್ತಾರೆ. 65 ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ಆಡಳಿತ ಇತ್ತೇ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದರು.

ಕನ್ನಡ ದ್ರೋಹಿ ಸಿದ್ದರಾಮಯ್ಯ: ಆರ್.ಅಶೋಕ್
2024-25ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿಗಳು ಪ್ರಕಟವಾಗಿ ಎರಡು ತಿಂಗಳಾದರೂ ಪ್ರಶಸ್ತಿ ಪ್ರದಾನ ಮಾಡದ ಕಾಂಗ್ರೆಸ್ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ರಾಜಕಾರಣ ಮಾಡಲು ಸಮಯವಿದೆ. ಎಐಸಿಸಿ ಅಧಿವೇಶನಕ್ಕೆ ಹೋಗಲು ಸಮಯವಿದೆ.
ಜಾತಿ ಜನಗಣತಿ ನೆಪದಲ್ಲಿ ವಿಶೇಷ ಸಂಪುಟ ಸಭೆ ಕರೆದು ಜನರ ದಿಕ್ಕು ತಪ್ಪಿಸಲು ಸಮಯವಿದೆ. ಸ್ಟೇಡಿಯಂಗೆ ಹೋಗಿ ಐಪಿಲ್ ಮ್ಯಾಚ್ ನೋಡಲು ಸಮಯವಿದೆ. ಆದರೆ 2024-25 ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿಗಳು ಪ್ರಕಟವಾಗಿ ಎರಡು ತಿಂಗಳಾದರೂ ಪ್ರಶಸ್ತಿ ಪ್ರದಾನಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ನೆಲ ಜಲ ಅಂದರೆ ನಿಮಗೆ ಯಾಕಿಷ್ಟು ತಾತ್ಸಾರ? ಅಥವಾ ನಿಮ್ಮ ಕಾಂಗ್ರೆಸ್ ಸರ್ಕಾರ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಕೊಡಲೂ ಸಾಧ್ಯವಾಗದಷ್ಟು ದಿವಾಳಿ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications