ಇಡಿಯಿಂದ ಜೈಲಲ್ಲಿ ಮುದ್ದೆ ಮುರಿದಿದ್ದ ಡಿಕೆಶಿಯನ್ನು ಸಿಡಿ ಪ್ರಕರಣದಲ್ಲೂ ತಿಹಾರ್ಗೆ ಕಳುಹಿಸಬೇಕು: ಬಿಜೆಪಿ
ಬೆಂಗಳೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಯುವತಿ, ಆಕೆಯ ತಮ್ಮ ಮತ್ತು ಆಕೆಯ ಗೆಳೆಯನ ನಡುವೆ ನಡೆದಿದೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಮೂಲಕ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಇಷ್ಟು ಸಮಯ ಕಾಂಗ್ರೆಸ್ನಿಂದ ಟೀಕೆಗೆ ಒಳಗಾಗುತ್ತಿದ್ದ ಆಡಳಿತಾರೂಢ ಬಿಜೆಪಿಗೆ, ಕಾಂಗ್ರೆಸ್ ವಿರುದ್ಧ ಪ್ರತಿ ವಾಗ್ದಾಳಿ ನಡೆಸಲು ಅಸ್ತ್ರವೊಂದು ದೊರಕಿದೆ.
Recommended Video
ಈ ಆಡಿಯೋದಲ್ಲಿ ಯುವತಿಯು ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ. ಇದೇ ಆಡಿಯೋವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ, ಕಾಂಗ್ರೆಸ್ ವಿರುದ್ಧ ಪ್ರತಿತಂತ್ರ ರೂಪಿಸಲು ಸಿದ್ಧತೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ಅವರನ್ನು ನೇರವಾಗಿ ಗುರಿಯನ್ನಾಗಿರಿಸಿಕೊಂಡಿರುವ ಬಿಜೆಪಿ, ಸರಣಿ ಟ್ವೀಟ್ಗಳನ್ನು ಮಾಡಿದೆ.
ಸದನದ ಸದಸ್ಯನ ಹೆಸರು ಬಂದಿದೆ ಎಂಬ ನೆಪ ಹೇಳಿ ಸದನದಲ್ಲಿ ಕಲಾಪ ನಡೆಯಲೂ ಬಿಡದ ಕಾಂಗ್ರೆಸ್ ಪಕ್ಷದ ಸದಸ್ಯರೇ ಈಗೇನು ಹೇಳುವಿರಿ. ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ವಿಶೇಷ ಅಧಿವೇಶನ ಕರೆದು ಚರ್ಚಿಸುವಷ್ಟು ವಿಚಾರಗಳಿವೆ. ಮಹಾನಾಯಕನ ರಾಜೀನಾಮೆ ಪಡೆದು ಸದನದಲ್ಲಿ ಈ ಬಗ್ಗೆ ಎಂದು ಚರ್ಚಿಸುತ್ತೀರಿ? ಎಂದು ಬಿಜೆಪಿ ಪ್ರಶ್ನಿಸಿದೆ. ಮುಂದೆ ಓದಿ.

ರಾಜೀನಾಮೆ ನೀಡಲಿ
ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಆಡು ಮಾತನ್ನು ಕಾಂಗ್ರೆಸ್ ಪಕ್ಷದ ನಾಯಕರನ್ನು ನೋಡಿಯೇ ಮಾಡಿರಬೇಕು. ಅಧಿಕಾರಕ್ಕಾಗಿ ಯಾವ ನೀಚ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು #ಮಹಾನಾಯಕ ತೋರಿಸಿಕೊಟ್ಟಿದ್ದಾರೆ. ಮಹಾನಾಯಕನಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಉಳಿದಿದ್ದರೆ ಇದ್ದರೆ ತಕ್ಷಣ ರಾಜೀನಾಮೆ ನೀಡಲಿ.

ಕುತಂತ್ರಕ್ಕೆ ಅಂತ್ಯ ಹಾಡಬೇಕು
ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮೂಲಕ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ #ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕಿದೆ.

ಮಹಾನಾಯಕನ ರಾಜೀನಾಮೆ ಪಡೆಯಲಿ
ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ. ಅನೈತಿಕ, ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ಮಹಾನಾಯಕನ ರಾಜೀನಾಮೆಯನ್ನು ರಾಷ್ಟ್ರೀಯ ಮಹಾನಾಯಕಿ ತಕ್ಷಣವೇ ಪಡೆಯಬೇಕು. ಒಬ್ಬ ಹೆಣ್ಣನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಜನತೆಯ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದೆ.

ಸಂಬಂಧ ಬಹಿರಂಗಪಡಿಸಲಿ
ಆರಂಭದಿಂದಲೂ #ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ಥೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್ ಮೈಂಡ್ಗಳಿಗೂ ಇರುವ ಸಂಬಂಧವವನ್ನು ಕಾಂಗ್ರೆಸ್ ಬಹಿರಂಗಗೊಳಿಸಬೇಕು.

ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ?
ಆ ಪ್ರಕರಣದ ʼಸಂತ್ರಸ್ಥೆʼ ನೇರವಾಗಿ #ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ!? ಎಂದು ಬಿಜೆಪಿ ಪ್ರಶ್ನಿಸಿದೆ.












Click it and Unblock the Notifications