ಸರ್ಕಾರಕ್ಕೆ ವರ್ಷ: ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸಜ್ಜು?

ಬೆಂಗಳೂರು, ಜು. 26: ಮೈತ್ರಿ ಸರ್ಕಾರದ ಪತನದ ಬಳಿಕ ಉತ್ಸಾಹದಿಂದ ಅಧಿಕಾರಕ್ಕೆ ಬಂದಿದ್ದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಆರಂಭದಿಂದಲೂ ನೈಸರ್ಗಿಕ ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಗಳಾಗಿಯೂ ಒಂದು ವರ್ಷ ಪೂರೈಸಿದ್ದಾರೆ.

Recommended Video

      PUBG to get banned soon | Oneindia Kannada

      ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೆ ಎದುರಾದ ಅತಿವೃಷ್ಟಿ, ಸಂಪುಟ ವಿಸ್ತರಣೆ ವಿಳಂಬ, ಉಪ ಚುನಾವಣೆ ಇದೀಗ ಕೋವಿಡ್ ಸಂಕಷ್ಟ. ಹೀಗೆ ಸಾಲು ಸಾಲು ಸವಾಲುಗಳನ್ನೇ ಸಿಎಂ ಯಡಿಯೂರಪ್ಪ ಅವರು ಎದುರಿಸಿದ್ದಾರೆ. ಸವಾಲುಗಳ ಮಧ್ಯೆ ಯುವ ಸಚಿವರೂ ನೋಡುವಂತೆ ಕೆಲಸ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಕೋವಿಡ್ ಮಾತ್ರ ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

      ಸೂತಕದ ಮಧ್ಯೆ ವರ್ಷಾಚರಣೆ

      ಸೂತಕದ ಮಧ್ಯೆ ವರ್ಷಾಚರಣೆ

      ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದಾಗಿರುವ ಸೂತಕದ ಛಾಯೆಯ ಮಧ್ಯೆ ಬಿಜೆಪಿ ಸರ್ಕಾರ ವರ್ಷಾಚರಣೆ ಮಾಡುವಂತಾಗಿದೆ. ಇಡೀ ಜಗತ್ತಿಗೆ ಕೊರೊನಾ ವೈರಸ್ ಸಂಕಷ್ಟ ತಂದಿಟ್ಟಿದೆ. ರಾಜ್ಯದಲ್ಲಿಯೂ ಕೋವಿಡ್ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಒಂದು ರೀತಿಯಲ್ಲಿ ಕೋವಿಡ್ ಸೂತಕದ ಮಧ್ಯೆ ಬಿಜೆಪಿ ವರ್ಷಾಚರಣೆ ಮಾಡಬೇಕಾಗಿದೆ. ಆರಂಭದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೆ ಸ್ವಾಗತಿಸಿದ್ದು ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ.

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗ ಏಕಾಂಗಿಯಾಗಿಯೇ ಪರಿಸ್ಥಿತಿಯನ್ನು ಎದುರಿಸ ಬೇಕಾಯ್ತು. ಸಂಪುಟ ವಿಸ್ತರಣೆಗೆ ಅನುಮತಿ ಕೊಡಲು ಬಿಜೆಪಿ ಹೈಕಮಾಂಡ್ ವಿಳಂಬ ಮಾಡಿದ್ದರಿಂದ ಇಡೀ ರಾಜ್ಯಾದ್ಯಂತ ಸಿಎಂ ಯಡಿಯೂರಪ್ಪ ಒಬ್ಬರೆ ಪ್ರವಾಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ನಂತರ ಉಪ ಚುನಾವಣೆಯನ್ನು ಎದುರಿಸಿ ಸರಳ ಬಹುತವನ್ನು ಪಡೆಯಿತು ಎನ್ನುವಷ್ಟರಲ್ಲಿ ಎದುರಾಗಿದ್ದು ಕೋವಿಡ್-19.

      ಹಿರಿಯರ ಬಂಡಾಯ

      ಹಿರಿಯರ ಬಂಡಾಯ

      ಕೋವಿಡ್ ಸಂಕಷ್ಟ ಕಾಲದಲ್ಲಿಯೇ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿದ್ದು ರಾಜ್ಯ ಬಿಜೆಪಿ ಸರ್ಕಾರವನ್ನು ಕಂಗೆಡಿಸಿತ್ತು. ಒಂದು ಕಾಲದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ತೀರಾ ಆಪ್ತರಾದವರೇ ಉತ್ತರ ಕರ್ನಾಟಕ ರೊಟ್ಟಿ ಊಟ ಮಾಡುವ ನೆಪದಲ್ಲಿ ಬಂಡಾಯ ಸಭೆ ನಡೆಸಿದ್ದು ಬಿಎಸ್‌ವೈಗೆ ಬಿಜೆಪಿಯಲ್ಲಿ ಹಿಡಿತ ತಪ್ಪುತ್ತಿರುವ ಮುನ್ಸೂಚನೆ ನೀಡಿತ್ತು.

      ಆದರೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಚುನಾವಣೆಗೆ ತಾನೇ ಮುಂದಾಗಿ ಅಭ್ಯರ್ಥಿಗಳ ಆಯ್ಕೆ ಮಾಡಿದ್ದರಿಂದ ತಾತ್ಕಾಲಿಕವಾಗಿ ಬಂಡಾಯ ಶಮನವಾಯಿತು ಎನ್ನಲಾಗಿತ್ತು. ಆದರೆ ಆಗ ಆಗಿದ್ದೆ ಬೇರೆ ಎಂಬ ಮಾಹಿತಿ ಈಗ ಬರುತ್ತಿದೆ. ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗಿದೆ ಎಂಬ ಚರ್ಚೆಗಳು ದೆಹಲಿ ಮಟ್ಟದಲ್ಲಿ ಕೇಳಿ ಬಂದಿವೆ. ಅದಕ್ಕೆ ಪೂರಕವಾದ ಬೆಳವಣಿಗೆಗಳು ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕಂಡುಬರುತ್ತಿವೆ. ಜೊತೆಗೆ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬ ನಿಮಯವನ್ನು ರಾಜ್ಯದಲ್ಲಿಯೂ ಜಾರಿಗೆ ತರಲು ಕೇಂದ್ರ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

      ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಎಲ್ಲ ಸಚಿವರಿಗಿಂತ ಅತ್ಯಂತ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಉಳಿದ ಇಲಾಖೆಗಳ ಸಚಿವರ ಬಗ್ಗೆ ಇದೇ ಅಭಿಪ್ರಾಯ ಇಲ್ಲ. ಕೆಲವು ಸಚಿವರಂತೂ ಕೋವಿಡ್ ಆರಂಭ ಕಾಲದಲ್ಲಿ ಮನೆಯಿಂದ ಹೊರಗೆ ಬರಲೇ ಇಲ್ಲ. ಜೊತೆಗೆ ಸಿಎಂ ಯಡಿಯೂರಪ್ಪ ಅವರ ಸೂಚನೆಗಳನ್ನು ಕೆಲವು ಸಚಿವರು ಈಗಲೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಮಾಹಿತಿಯಿದೆ.

      ಪೂರಕ ಬೆಳವಣಿಗೆಗಳು

      ಪೂರಕ ಬೆಳವಣಿಗೆಗಳು

      ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಯಾರನ್ನು ಮುಂದಿನ ಸಿಎಂ ಮಾಡಬೇಕು ಎಂಬ ಅಂತಿಮ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಇನ್ನೂ ತೆಗೆದುಕೊಂಡಿಲ್ಲ. ಆದರೆ ಇದೇ ಅಕ್ಟೋಬರ್ ತಿಂಗಳಿನಲ್ಲಿ ನಾಯಕತ್ವ ಬದಲಾವಣೆ ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಿಸಿದವರಿಗೆ ಸೂಚನೆಯನ್ನೂ ನೀಡಲಾಗಿದೆ. ಕೇಂದ್ರದಲ್ಲಿ ಚರ್ಚೆಯೂ ನಡೆದಿದೆ ಎಂಬ ಮಾಹಿತಿಯಿದೆ.

      ಅದಕ್ಕೆ ಪೂರಕವಾಗಿ ಯಡಿಯೂರಪ್ಪ ಅವರು ಸೂಚಿಸಿದವರಿಗೆ ವಿಧಾನ ಪರಿಷತ್ ಟಿಕೆಟ್ ಕೊಡಲಾಗಿತ್ತು. ಜೊತೆಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಲ್ಲಿಯೂ ಹೈಕಮಾಂಡ್ ಪರೋಕ್ಷ ಸಂದೇಶ ಕಳುಹಿಸಿದೆ. ಮಾಜಿ ಸಚಿವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನುವಿಧಾನ ಪರಿಷತ್‌ಗೆ ನಾಮಕರಣ ಮಾಡುವಂತೆ ನೇರವಾಗಿ ಬಿಜೆಪಿ ಹೈಕಮಾಂಡ್ ಸಿಎಂ ಬಿಎಸ್‌ವೈ ಅವರಿಗೆ ಸೂಚಿಸಿತ್ತು. ಜೊತೆಗೆ ಪಕ್ಷದಿಂದ ಇಬ್ಬರನ್ನು ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಸೂಚಿಸಲಾಗಿತ್ತು. ಅದರೊಂದಿಗೆ ಬಿಎಸ್‌ವೈ ಸೂಚಿಸಿದ್ದ ಎಚ್. ವಿಶ್ವನಾಥ್ ಹಾಗೂ ಭಾರತಿ ಶೆಟ್ಟಿ ಅವರ ನಾಮನಿರ್ದೇಶನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು.

      ರಾಜ್ಯ ನಾಯಕರ ಭೇಟಿ

      ರಾಜ್ಯ ನಾಯಕರ ಭೇಟಿ

      ಕೇಂದ್ರ ಸಚಿವರಿಂದ ನಾಯಕರೊಂದಿಗಿನ ಭೇಟಿ ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲ, ಇತರ ಪಕ್ಷಗಳ ಮುಖಂಡರಲ್ಲಿಯೂ ಕುತೂಹಲ ಮೂಡಿಸಿದೆ. ಏಕಾಏಕಿ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಬಿಜೆಪಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಅದೂ ಹೊಸದಾಗಿ ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಟೀಂ ಭೇಟಿ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.

      ಭೇಟಿ ಸಂದರ್ಭಧಲ್ಲಿ ಸಚಿವ ಡಾ. ಸುಧಾಕರ್ ಕೂಡ ಇದ್ದರು ಎಂಬುದು ಗಮನಿಸಬೇಕಾದ ಅಂಶ. ಅವರೊಂದಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದ ಬಿಜೆಪಿ ಹಿರಿಯ ಶಾಸಕ ಅರವಿಂದ್ ಬೆಲ್ಲದ್ ಕೂಡ ಇದ್ದರು.

      ಭೇಟಿ ಮಾಡಿದ್ದ ಡಿಸಿಎಂ

      ಭೇಟಿ ಮಾಡಿದ್ದ ಡಿಸಿಎಂ

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಪರಿಷತ್‌ ನಾಮನಿರ್ದೇಶನ ಸದಸ್ಯರ ಪಟ್ಟಿಯೊಂದಿಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಿದ್ದರು. ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಆದರೆ ಅದರ ಮರುದಿನವೇ ಡಿಸಿಎಂ ಲಕ್ಷ್ಮಣ ಸವದಿ ಅವರೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

      ಯಾಕೆಂದರೆ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಎಂದು ಘೋಷಣೆ ಮಾಡಿದ್ದು ಬಿಜೆಪಿ ಹೈಕಮಾಂಡ್. ಸಿಎಂ ಯಡಿಯೂರಪ್ಪ ಅವರು ಬೇಟಿಮಾಡಿದ ಬಳಿಕ ರಾಜ್ಯಪಾಲರನ್ನು, ಸವದಿ ಅವರು ಭೇಟಿ ಮಾಡಿರುವುದು ಹೈಕಮಾಂಡ್ ನಿರ್ದೇಶನದಂತೆ. ಜೊತೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಹೈಕಮಾಂಡ್‌ಗೆ ವರದಿಯನ್ನು ಡಿಸಿಎಂ ಲಕ್ಷ್ಮಣ ಸವದಿ ಕಳುಹಿಸಿದ್ದಾರೆ ಎನ್ನಲಾಗಿದೆ.

       ರೇಸ್‌ನಲ್ಲಿ ಹಲವರು

      ರೇಸ್‌ನಲ್ಲಿ ಹಲವರು

      ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಸಿಎಂ ಆಗಲು ಬಹಳಷ್ಟು ಬಿಜೆಪಿ ನಾಯಕರು ರೇಸ್‌ನಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಡೆ ನಿಗೂಢವಾಗಿದೆ. ಆದರೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಮೇಲೆ ಬಿಜೆಪಿ ಹೈಕಮಾಂಡ್ ವಿಶೇಷ ಒಲವು ಹೊಂದಿದೆ. ರಾಜ್ಯದಲ್ಲಿ ಉಳಿದ ಅವಧಿಗೆ ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡಲು ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

      ಹೀಗಾಗಿಯೆ ಹೊಸದಾಗಿ ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಅವರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಪ್ರಲ್ಹಾದ್ ಜೋಶಿ ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅವರೊಂದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗೋವಿಂದ್ ಕಾರಜೋಳ ಅವರ ಹೆಸರುಗಳು ಸಿಎಂ ಪಟ್ಟಕ್ಕೆ ಕೇಳಿ ಬಂದಿವೆ.

      ಯಡಿಯೂರಪ್ಪ ಅವರ ನಡೆ?

      ಯಡಿಯೂರಪ್ಪ ಅವರ ನಡೆ?

      ಈ ಎಲ್ಲ ಬೆಳವಣಿಗೆಗಳು ಸಿಎಂ ಯಡಿಯೂರಪ್ಪ ಅವರ ಗಮನಕ್ಕೂ ಬಂದಿವೆ. ಅಧಿಕಾರದ ವಯೋಮಿತಿ ನಿಯಮವನ್ನುಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ತಿಳಿಸಿದೆ. ಜೊತೆಗೆ ಅವರು ಸೂಚಿಸುವವರಿಗೆ ಡಿಸಿಎಂ ಪಟ್ಟವನ್ನು ಕೊಡುವ ಭರವಸೆಯನ್ನೂ ಕೊಟ್ಟಿದೆ. ರಾಜ್ಯಪಾಲರ ಹುದ್ದೆಯ ಭರವಸೆಯೂ ಅವರಿಗೆ ಸಿಕ್ಕಿದೆ ಎನ್ನಲಾಗಿದೆ.

      ಒಂದು ಮೂಲದ ಮಾಹಿತಿಯ ಪ್ರಕಾರ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಮಾತಿಗೆ ಒಪ್ಪಿರುವ ಸಾಧ್ಯತೆಯಿದೆ. ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯದ ದೃಷ್ಟಿಯಿಂದ, ಹೈಕಮಾಂಡ್ ಸೂಚಿಸಿದಂತೆ ನಡೆಯಲು ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಅವರನ್ನು ಡಿಸಿಎಂ ಮಾಡುವುದು ಯಡಿಯೂರಪ್ಪ ಬೇಡಿಕೆ ಎನ್ನಲಾಗಿದೆ. ಜೊತೆಗೆ ಪುದುಚೇರಿ ರಾಜ್ಯಪಾಲರನ್ನಾಗಿ ಮಾಡುವ ಭರವಸೆಯನ್ನು ಹೈಕಮಾಂಡ್ ಕೊಟ್ಟಿದೆ ಎನ್ನಲಾಗಿದೆ. ಆದರೆ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯತ್ತ ಯಡಿಯೂರಪ್ಪ ಅವರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

      ವೋಟ್‌ಬ್ಯಾಂಕ್ ರಾಜಕೀಯ

      ವೋಟ್‌ಬ್ಯಾಂಕ್ ರಾಜಕೀಯ

      ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದರೂ ಲಿಂಗಾಯತ ಸಮುದಾಯದ ಬೆಂಬಲ ಉಳಿಯುವಂತೆ ನೋಡಿಕೊಳ್ಳಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ. ಹೀಗಾಗಿ ಯಡಿಯೂರಪ್ಪ ಅವರ ಪುತ್ರನಿಗೆ ಡಿಸಿಎಂ ಹುದ್ದೆ ಕೊಡುವುದು ಹಾಗೂ ಮುಂದಿನ ನಾಯಕನನ್ನು ಯಡಿಯೂರಪ್ಪ ಅವರಿಂದಲೇ ಘೋಷಣೆ ಮಾಡಿಸುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

      ಆ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಂತಾಗುತ್ತದೆ. ಜೊತೆಗೆ ಲಿಂಗಾಯತ ಸಮುದಾಯದ ಬೆಂಬಲವನ್ನೂ ಉಳಿಸಿಕೊಂಡಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದೆ. ಹೈಕಮಾಂಡ್ ನಿರ್ಧರಿಸಿದಂತೆ ಮಾಡಿದರೆ ಇದೇ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಮತ್ತೊಂದು ಹಂತದ ರಾಜಕೀಯ ವಿಪ್ಲವ ನಡೆಯುವುದು ಬಹುತೇಕ ಖಚಿತ!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+