ಹಾಸನ: ಭಾಷೆಯ ಗಡಿ ದಾಟಿ ಕನ್ನಡ ಕಲಿಯುತ್ತಿರುವ ಬಿಹಾರದ ಮಕ್ಕಳು

ಹಾಸನ: ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವುದಲ್ಲ, ಬದಲಾಗಿ ಭವಿಷ್ಯದ ಪ್ರಜೆಗಳನ್ನು ರೂಪಿಸುವುದು ಎಂಬುದನ್ನು ಹಾಸನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸಾಬೀತುಪಡಿಸಿದ್ದಾರೆ. ಉದ್ಯೋಗಾವಕಾಶಗಳನ್ನು ಅರಸಿ ಸಾವಿರಾರು ಕಿಲೋಮೀಟರ್ ದೂರದ ಬಿಹಾರದಿಂದ ಹಾಸನಕ್ಕೆ ವಲಸೆ ಬಂದಿರುವ ಕಾರ್ಮಿಕರ ಮಕ್ಕಳಿಗೆ ಇಲ್ಲಿನ ಭಾಷೆ, ಸಂಸ್ಕೃತಿ ಸಂಪೂರ್ಣ ಹೊಸದು. ಇಂತಹ ಪರಿಸ್ಥಿತಿಯಲ್ಲಿ ಈ ಮಕ್ಕಳಿಗೆ ಕನ್ನಡ ಕಲಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಒಂದು ಒಳ್ಳೆಯ ಕೆಲಸವನ್ನು ಹಾಸನದ ಪೀರುಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಮೀಳಾ ಎಸ್.ಪಿ. ಅವರು ಮಾಡುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ ಪ್ರಮೀಳಾ ಅವರು ಕೆಲಸಕ್ಕೆ ಹೊರಡುವಾಗ, ವಲಸೆ ಕುಟುಂಬಗಳ ಎಂಟು ಮಕ್ಕಳು ಅವರೊಂದಿಗೆ ಆಟೋರಿಕ್ಷಾದಲ್ಲಿ ಶಾಲೆಗೆ ತೆರಳುತ್ತಾರೆ. ಪ್ರಮೀಳಾ ಅವರ ಮನೆಗೂ ಹಾಗೂ ಪೀರುಮನಹಳ್ಳಿಯ ಶಾಲೆಗೂ ಸುಮಾರು ಎಂಟು ಕಿಲೋಮೀಟರ್ ಅಂತರವಿದೆ. ಆದರೂ, ಈ ಮಕ್ಕಳನ್ನು ಪ್ರತಿದಿನ ತಮ್ಮೊಂದಿಗೇ ಆಟೋದಲ್ಲಿ ಕರೆದೊಯ್ದು, ಸುರಕ್ಷಿತವಾಗಿ ಶಾಲೆಗೆ ತಲುಪಿಸಿ, ವಿದ್ಯಾಭ್ಯಾಸ ನೀಡುವ ಜವಾಬ್ದಾರಿಯನ್ನು ಅವರು ಅತ್ಯಂತ ಪ್ರೀತಿಯಿಂದ ಹೊತ್ತುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಮೀಳಾ ಅವರು ಕೇವಲ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮಾತ್ರವಲ್ಲದೆ, ಈ ವಲಸೆ ಕುಟುಂಬಗಳ ಮಕ್ಕಳಿಗೆ ಮಾರ್ಗದರ್ಶಕಿಯಾಗಿ ಹಾಗೂ ಪೋಷಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Bihar Migrant Children

ಭಾಷಾ ಸಮಸ್ಯೆ ನಿವಾರಿಸಿದ 27 ವರ್ಷಗಳ ಅನುಭವ

ತಮ್ಮ 27 ವರ್ಷಗಳ ಸುದೀರ್ಘ ವೃತ್ತಿ ಅನುಭವವನ್ನು ಬಳಸಿಕೊಂಡು, ಬಿಹಾರದ ಮಕ್ಕಳಿಗೆ ಎದುರಾಗಿದ್ದ ಭಾಷಾ ಸಮಸ್ಯೆಯನ್ನು ನಿವಾರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಿಂದಿ ಮತ್ತು ಭೋಜ್‌ಪುರಿ ಮಾತನಾಡುವ ಈ ಮಕ್ಕಳಿಗೆ ಕನ್ನಡದ ಅಕ್ಷರಗಳನ್ನು ಕಲಿಸಿ, ಔಪಚಾರಿಕ ಶಿಕ್ಷಣ ವ್ಯವಸ್ಥೆಯೊಳಗೆ ಅವರನ್ನು ತರುವಲ್ಲಿ ಪ್ರಮೀಳಾ ಅವರ ಶ್ರಮ ಅಪಾರವಾಗಿದೆ. ಆರಂಭದಲ್ಲಿ ಕನ್ನಡ ಭಾಷೆ, ಉಚ್ಚಾರಣೆ ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದ ಮಕ್ಕಳು, ಈಗ ಶಿಕ್ಷಕಿಯ ಸತತ ಪ್ರಯತ್ನ ಹಾಗೂ ಪ್ರೀತಿಯ ಪಾಠದಿಂದಾಗಿ ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಮಾತನಾಡಲು ಕಲಿಯುತ್ತಿದ್ದಾರೆ. ರಾಜ್ಯದ ಇತರ ಶಾಲೆಗಳಿಗೂ ಪ್ರಮೀಳಾ ಅವರ ಈ ಕಾರ್ಯ ಮಾದರಿಯಾಗಿದೆ. ಇದು ವಲಸೆ ಕಾರ್ಮಿಕರ ಕುಟುಂಬಗಳಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೊಸ ಭರವಸೆಯನ್ನು ಮೂಡಿಸಿದೆ.

ಕಾಡುತ್ತಿದೆ ಕಡ್ಡಾಯ ದಾಖಲೆಗಳ ಆತಂಕ

ಆದರೆ, ಈ ಶೈಕ್ಷಣಿಕ ಪ್ರಗತಿ ಮತ್ತು ಸಂತಸದ ನಡುವೆಯೂ ಶಿಕ್ಷಕಿ ಪ್ರಮೀಳಾ ಅವರನ್ನು ಕಾಡುತ್ತಿರುವ ಒಂದು ಬಹುದೊಡ್ಡ ಆತಂಕವೆಂದರೆ, ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಿರುವ ಕಡ್ಡಾಯ ದಾಖಲೆಗಳ ಕೊರತೆ. ಹೌದು, ಬಹುತೇಕ ವಲಸೆ ಕಾರ್ಮಿಕರ ಮಕ್ಕಳ ಬಳಿ ಸೂಕ್ತವಾದ ಗುರುತಿನ ಚೀಟಿಗಳಿಲ್ಲ. ಪ್ರಮುಖವಾಗಿ ಈ ಮಕ್ಕಳ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ. ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ, ಮುಂದಿನ ಹೈಸ್ಕೂಲ್ ತರಗತಿಗಳಿಗೆ ಪ್ರವೇಶ ಪಡೆಯಲು ಮತ್ತು ಭವಿಷ್ಯದಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ಬರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಸಕಾಲದಲ್ಲಿ ಈ ಮಕ್ಕಳಿಗೆ ಅಗತ್ಯ ದಾಖಲೆಗಳನ್ನು ಒದಗಿಸದಿದ್ದರೆ, ಭರವಸೆಯಿಂದ ಶಾಲೆಗೆ ಬರುತ್ತಿರುವ ಈ ಮಕ್ಕಳು ಅನಿವಾರ್ಯವಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸಾಧ್ಯತೆಯಿದೆ ಎಂಬುದು ಶಿಕ್ಷಕಿಯ ಅತಿದೊಡ್ಡ ಕಳವಳವಾಗಿದೆ. ದಿನಗೂಲಿ ನಂಬಿ ಬದುಕುವ ವಲಸೆ ಜೀವನದ ಕಾರಣದಿಂದಾಗಿ ಪೋಷಕರಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ದಾಖಲೆಗಳನ್ನು ಮಾಡಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಈ ಮಕ್ಕಳು ಶಾಲೆಯಿಂದ ಹೊರಗುಳಿದರೆ, ಅವರು ಮತ್ತೆ ಜಮೀನುಗಳಲ್ಲಿ ಅಥವಾ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುವ ಅಪಾಯವಿದೆ.

ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಹಾಸನ ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕಿದೆ. ವಲಸೆ ಕಾರ್ಮಿಕರ ಮಕ್ಕಳಿಗೆ ಶಾಲಾ ಮಟ್ಟದಲ್ಲೇ ಅಥವಾ ಸ್ಥಳದಲ್ಲೇ ಗುರುತಿನ ಚೀಟಿ ಮಾಡಿಕೊಡುವಂತಹ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುವ ತುರ್ತು ಅವಶ್ಯಕತೆಯಿದೆ. ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಪ್ರಮೀಳಾ ಅವರಂತಹ ಶಿಕ್ಷಕಿಯರ ಶ್ರಮ ಸಾರ್ಥಕವಾಗಬೇಕಾದರೆ, ಈ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಇರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳನ್ನು ಸರ್ಕಾರವೇ ಖುದ್ದಾಗಿ ನಿವಾರಿಸಬೇಕಿದೆ. ಭಾಷೆಯ ಗಡಿ ದಾಟಿ ಅತ್ಯುತ್ಸಾಹದಿಂದ ಕಲಿಯುತ್ತಿರುವ ಈ ಪುಟಾಣಿಗಳ ಶೈಕ್ಷಣಿಕ ಭವಿಷ್ಯವು ಕೇವಲ ಒಂದು ದಾಖಲೆಯ ಕೊರತೆಯಿಂದಾಗಿ ಕಲಿಕೆ ನಿಲ್ಲದಂತೆ ನೋಡಿಕೊಳ್ಳುವ ದೊಡ್ಡ ಜವಬ್ದಾರಿ ಸಮಾಜದ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+