Panchamasali: ಪಂಚಮಸಾಲಿ ಸಮುದಾಯಕ್ಕೆ ಬಿಗ್ ಶಾಕ್: ಸಮುದಾಯದ ಹೋರಾಟದಲ್ಲಿ ಬಿರುಕು!
panchamasali reservation: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ ಮತ್ತೊಂದು ಭಿನ್ನಾಭಿಪ್ರಾಯ ಎದುರಾಗಿದೆ. ರಾಜ್ಯ ಸರ್ಕಾರವು ಈ ಹೋರಾಟದ ಬಗ್ಗೆ ತೆಗೆದುಕೊಂಡಿರುವ ನಿಲುವು ಇದೀಗ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಬೆಳಗಾವಿ ಅಧಿವೇಶನ ವೇಳೆ ಬೃಹತ್ ಹೋರಾಟಕ್ಕೆ ಪಂಚಮಸಾಲಿ ಶ್ರೀಗಳು ಮುಂದಾಗಿದ್ದರು. ಇದರ ಬೆನ್ನಲ್ಲೇ ಹಲವು ಗೊಂದಲಗಳು ಸೃಷ್ಟಿಯಾಗಿರುವುದು ವರದಿಯಾಗಿದೆ. ಅಲ್ಲದೇ ಪಂಚಮಸಾಲಿ ಹೋರಾಟ ನಡೆಸದಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮನವೊಲಿಸುವುದಕ್ಕೆ ಸರ್ಕಾರ ಕಸರತ್ತು ನಡೆಸುತ್ತಿದೆ.
ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳ ಮನವೊಲಿಕೆಗೆ ಸರ್ಕಾರ ಕಸರತ್ತು ನಡೆಸುತ್ತಿದ್ದು, ಇದರಿಂದ ಹೋರಾಟದಲ್ಲಿ ಭಿನ್ನಾಭಿಪ್ರಾಯ ಮೂಡುತ್ತಿದೆ ಎಂದು ಹೇಳಲಾಗುತ್ತಿದೆ. ಪಂಚಮಸಾಲಿ ಸಮಾಜದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ಮೂಲಕ ಸ್ವಾಮೀಜಿ ಮನವೊಲಿಕೆಗೆ ಯತ್ನ ನಡೆದಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೊದಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ವಿನಯ ಕುಲಕರ್ಣಿಗೆ ಟಾಸ್ಕ್ ನೀಡಿದ್ದರು ಎನ್ನಲಾಗಿದೆ.

ಇಬ್ಬರೂ ಮನವೊಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈಗ ಶಾಸಕ ವಿಜಯಾನಂದ ಕಾಶಪ್ಪನವರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಸ್ಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಚಳಿಗಾಲ ಅಧಿವೇಶನ ವೇಳೆ ಸುವರ್ಣಸೌಧ ಮುತ್ತಿಗೆ ಹಾಕುವುದಕ್ಕೆ ಪಂಚಮಸಾಲಿ ಸಮಾಜ ನಿರ್ಧರಿಸಿತ್ತು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸುವರ್ಣಸೌಧ ಮುತ್ತಿಗೆ ಹಾಕಲು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿತ್ತು.
ಈಗಾಗಲೇ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಸ್ವಾಮೀಜಿ ಅವರು ಜಾಗೃತಿ ಮೂಡಿಸುತ್ತಿದ್ದಾರೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಕ್ಕೆ ಸಮಾಜದ ಮುಖಂಡರಿಂದಲೇ ಮಿಸ್ಗೈಡ್ ಆಗುತ್ತಿದೆ ಎನ್ನುವ ಆರೋಪ ಇದೆ. ಹೀಗಾಗಿ, ಪಂಚಮಸಾಲಿ ಸಮಾಜದ ಶಾಸಕರು ಹಾಗೂ ಸಚಿವರ ವಿರುದ್ಧ ಕೂಡಲಸಂಗಮದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರೋಕ್ಷವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿನಯ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನ್ನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಶ್ರೀಗಳನ್ನು ಹೊರಗಿಟ್ಟು ಪಂಚಮಸಾಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆದಿದೆ. ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಲಾಗಿದೆ ಎನ್ನಲಾಗಿದೆ. ಬಾಗಲಕೋಟೆಯಲ್ಲಿ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಚರ್ಚೆ ನಡೆದಿದೆ. ಬೆಳಗಾವಿ ಅಧಿವೇಶನ ವೇಳೆ ಹೋರಾಟ ಬೇಡ ಎಂದು ವಿಜಯಾನಂದ ಕಾಶಪ್ಪನವರ ಹೇಳಿದ್ದರು ಎನ್ನಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ನಾನು ಶ್ರೀಗಳ ಹೋರಾಟಕ್ಕೆ ಬೆಂಬಲ ಕೊಡುವುದಿಲ್ಲ. ಶ್ರೀಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡ್ತಿದ್ದಾರೆ ಎಂದು ವಿಜಯಾನಂದ ಕಾಶಪ್ಪನ್ನವರ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಈ ಸಭೆಯ ಬಗ್ಗೆ ಮಾತನಾಡಿರುವ ಶ್ರೀಗಳು, ಯಾರು ಬೇಕಾದರೂ ಸಭೆ ಮಾಡಿಕೊಳ್ಳಲಿ. ಅದು ನಮ್ಮ ಸಮಾಜದ ಒಳಿತಿಗಾಗಿ ಇರಲಿ ಎಂದು ಹೇಳಿದ್ದಾರೆ. ಇನ್ನು ಡಿಸಂಬರ್ 1ಕ್ಕೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಸಚಿವರ ಸಭೆಯನ್ನು ಸ್ವಾಮೀಜಿ ಅವರು ಕರೆದಿದ್ದಾರೆ. ಆದರೆ, ಕೆಲವೇ ಜನಪ್ರತಿನಿಧಿಗಳೊಂದಿಗೆ ಮಾತ್ರ ಸಭೆ ಸ್ವಾಮೀಜಿ ಅವರು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೇ ಹೋರಾಟದಿಂದ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ವಾಮೀಜಿ ಅವರು ಪುನರುಚ್ಛರಿಸಿದ್ದಾರೆ. ಇನ್ನು ಈ ಎಲ್ಲಾ ಕಾರಣಗಳಿಂದ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ತೀವ್ರ ಹಿನ್ನೆಡೆ ಸಾಧ್ಯತೆ ಎದುರಾಗಿದೆ ಎಂದು ಹೇಳಲಾಗಿದೆ.












Click it and Unblock the Notifications