ಪ್ರಯಾಣಿಕರೇ ಗಮನಿಸಿ: ಈ ಪ್ರಮುಖ ರೈಲುಗಳು ಬೆಂಗಳೂರು ಸಿಟಿ ನಿಲ್ದಾಣಕ್ಕೆ ಬರುವುದಿಲ್ಲ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಕೆಎಸ್ಆರ್) ನಡೆಯುತ್ತಿರುವ ಪಿಟ್ ಲೈನ್ ಪುನರ್ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಟರ್ಮಿನಲ್ ನಿಲ್ದಾಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಹೊರಡುವ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಇಲ್ಲಿ ನಡೆಯುತ್ತಿರುವ ಕೆಲಸದ ಕಾರಣದಿಂದಾಗಿ ಜನವರಿ 16ರಿಂದ ಮಾರ್ಚ್ 11ರವರೆಗೆ ಹಲವಾರು ರೈಲುಗಳು ಹೊರಡುವ ಮತ್ತು ನಿಲುಗಡೆ ನಿಲ್ದಾಣಗಳನ್ನು ಬದಲಾಯಿಸಲಾಗಿದೆ. ಸಾಮಾನ್ಯವಾಗಿ ಕೆಎಸ್ಆರ್ನಿಂದ ಹೊರಡುವ ಹಾಗೂ ತಲುಪುವ ರೈಲುಗಳು ಈ ಅವಧಿಯಲ್ಲಿ ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ ಅಥವಾ ಎಸ್ಎಂವಿಟಿ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತವೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬದಲಾವಣೆಗಳು ಬೆಂಗಳೂರು ಹಾಗೂ ಎರ್ನಾಕುಲಂ, ಹಜೂರ್ ಸಾಹಿಬ್ ನಾಂದೇಡ್ ಮತ್ತು ಕಣ್ಣೂರುಗಳೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಹೀಗಾಗಿ ಪ್ರಯಾಣಿಕರು ಈ ಬದಲಾವಣೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಮತ್ತು ಸಹಕರಿಸಲು ಸೂಚಿಸಲಾಗಿದೆ.
ಪರ್ಯಾಯ ನಿಲುಗಡೆ ಎಲ್ಲಿ?
* ಈ ಸಿಟಿ ರೈಲು ನಿಲ್ದಾಣದಲ್ಲಿ ಮಾರ್ಗ ಬದಲಾವಣೆಯಿಂದಾಗಿ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಅನ್ನು ಜನವರಿ 16ರಿಂದ ಮಾರ್ಚ್ 10ರವರೆಗೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲಿಗೆ ಬೆಂಗಳೂರು ಕಂಟೋನ್ಮೆಂಟ್ನಲ್ಲಿ ನಿಲುಗಡೆಯಾಗಿ ಕೊನೆಗೊಳ್ಳಲಿದೆ.
* ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಜಂಕ್ಷನ್ ಎಕ್ಸ್ಪ್ರೆಸ್ ಜನವರಿ 17ರಿಂದ ಮಾರ್ಚ್ 11ರವರೆಗೆ ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಲಿದೆ. ಈ ಅವಧಿಯಲ್ಲಿ, ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಬೆಂಗಳೂರು ಕಂಟೋನ್ಮೆಂಟ್ನಿಂದ ಬೆಳಿಗ್ಗೆ 6:20ಕ್ಕೆ ಹೊರಡಲಿದೆ.
* ಹಜೂರ್ ಸಾಹಿಬ್ ನಾಂದೇಡ್-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16594) ಕೂಡ ಬದಲಿ ಮಾರ್ಗದಲ್ಲಿ ಸಂಚರಿಸಲಿದೆ. ಜನವರಿ 16ರಿಂದ ಮಾರ್ಚ್ 10ರವರೆಗೆ ಕೆಎಸ್ಆರ್ ಬೆಂಗಳೂರಿನಲ್ಲಿ ಕೊನೆಗೊಳ್ಳುವ ಈ ರೈಲು ಯಶವಂತಪುರದಲ್ಲಿ ನಿಲುಗಡೆಯಾಗಲಿದೆ. ಇದು ಯಲಹಂಕ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಶವಂತಪುರ ಮೂಲಕ ಚಲಿಸುತ್ತದೆ, ಬೆಂಗಳೂರು ಕಂಟೋನ್ಮೆಂಟ್ ಅಥವಾ ಕೆಎಸ್ಆರ್ ಬೆಂಗಳೂರಿನಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ.
* ಕೆಎಸ್ಆರ್ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್ಪ್ರೆಸ್ ಜನವರಿ 17ರಿಂದ ಮಾರ್ಚ್ 11ರವರೆಗೆ ಕೆಎಸ್ಆರ್ ಬೆಂಗಳೂರಿನ ಬದಲು ಯಶವಂತಪುರದಿಂದ ಕಾರ್ಯನಿರ್ವಹಿಸಲಿದೆ. ರಾತ್ರಿ 11:55ಕ್ಕೆ ಈ ರೈಲು ಹೊರಡಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ಹೊರತುಪಡಿಸಿ ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಲಹಂಕ ಮೂಲಕ ಚಲಿಸಲಿದೆ.
* ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ನಲ್ಲಿ ಜನವರಿ 16ರಿಂದ ಮಾರ್ಚ್ 10ರವರೆಗೆ ಬದಲಾವಣೆಗಳಾಗಲಿವೆ. ಕೆಎಸ್ಆರ್ ಬೆಂಗಳೂರಿನ ಬದಲಿಗೆ, ಈ ರೈಲು ಎಸ್ಎಂವಿಟಿ ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ. ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್ಎಂವಿಟಿ ಬೆಂಗಳೂರು ಮೂಲಕ ಚಲಿಸುತ್ತದೆ.
* ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ಜನವರಿ 17ರಿಂದ ಮಾರ್ಚ್ 11ರವರೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ರಾತ್ರಿ 8:00 ಗಂಟೆಗೆ ಹೊರಡಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರನ್ನು ತಲುಪದೆ, ಎಸ್ಎಂವಿಟಿ, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರದ ಮೂಲಕ ಚಲಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications