ಬೆಂಗಳೂರಲ್ಲಿ ದಿಢೀರ್ ಏರುಗತಿಗೆ ಬಂದಿದೆ ಕೋವಿಡ್
ಬೆಂಗಳೂರು, ಏ. 23: ಓಮೈಕ್ರಾನ್ನಿಂದ ಸೃಷ್ಟಿಯಾಗಿದ್ದ ಮೂರನೇ ಕೋವಿಡ್ ಅಲೆ ಬಹುತೇಕ ನಿಂತುಹೋಯಿತು ಎಂದು ನಿಟ್ಟುಸಿರುವ ಬಿಡುವ ಹೊತ್ತಲ್ಲೇ ದೇಶದೆಲ್ಲೆಡೆ ಕೊರೋನಾ ವೈರಸ್ ಸೋಂಕು ಹೆಚ್ಚಾಗತೊಡಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ದಿಢೀರ್ ಸೋಂಕು ಏರುಗತಿಗೆ ಬಂದಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಗುರುವಾರ ಒಂದೇ ದಿನ ರಾಜ್ಯಾದ್ಯಂತ 100 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಬೆಂಗಳೂರು ಒಂದೇ ನಗರದಲ್ಲಿ 91 ಹೊಸ ಕೋವಿಡ್ ಪ್ರಕರಣಗಳಿವೆ.

ಮಾಮೂಲಿಗಿಂತ ಪ್ರಕರಣ ಏರಿಕೆ
ಇದಕ್ಕೂ ಹಿಂದಿನ ವಾರದಲ್ಲಿ, ಅಂದರೆ ಏಪ್ರಿಲ್ 12ರಿಂದ 19ನೇ ತಾರೀಖಿನ ಅವಧಿಯಲ್ಲಿ ನಿತ್ಯ 41-55 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಇದೇ ರೇಖೆ ಮುಂದುವರಿಯಬಹುದು.
ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊನ್ನೆ ಮಾಮೂಲಿಗಿಂತ 35 ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಜನಸಾಮಾನ್ಯರಿಗೆ ತುಸು ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಸೋಂಕಿನ ಉತ್ಪತ್ತಿ ದರ (R0- Reproduction Number) ಶೇ. 1.04 ಇದೆ. ಅದರಲ್ಲಿ ಯಾವುದೇ ಏರಿಕೆ ಆಗಿಲ್ಲ. ಆದರೂ ಸೋಂಕಿನ ಸಂಖ್ಯೆ ದಿಢೀರ್ ಹೆಚ್ಚಿದೆ.

ಏನಿದು ರೀಪ್ರೊಡಕ್ಷನ್ ನಂಬರ್?
ಆರ್0 ಎಂದರೆ ಒಬ್ಬ ವ್ಯಕ್ತಿ ಎಷ್ಟು ಮಂದಿಗೆ ಸೋಂಕು ಹರಡುತ್ತಾನೆ ಎಂದು ಲೆಕ್ಕ. R0 ದರ 1 ಇದ್ದರೆ ಒಬ್ಬ ಸೋಂಕಿತ ವ್ಯಕ್ತಿ ಸರಾಸರಿಯಾಗಿ ಒಬ್ಬ ವ್ಯಕ್ತಿಗೆ ಸೋಂಕು ಹರಡುತ್ತಾನೆ ಎಂದಾಗುತ್ತದೆ.
ಡೆಲ್ಟಾ ರೂಪಾಂತರಿ ವೈರಸ್ನಿಂದ ಸೃಷ್ಟಿಯಾದ ಎರಡನೇ ಅಲೆ ಗರಿಷ್ಠ ಮಟ್ಟ ತಲುಪಿದ ವೇಳೆ ಆರ್0 ದರ 6ರವರೆಗೆ ಏರಿತ್ತು. ಈಗ ಈ ದರ ಶೇ. 1ರ ಸಮೀಪದಲ್ಲೇ ಇದೆ.
ಆತಂಕ ಪಡುವ ಅಗತ್ಯವಿಲ್ಲ
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ತುಸು ಏರಿಕೆ ಆಗಿದ್ದರಿಂದ ತೀರಾ ಆತಂಕ ಪಡುವ ಅಗತ್ಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ನಾಲ್ಕನೇ ಅಲೆ ಉದ್ಭವಿಸಿದರೆ ಬೆಂಗಳೂರು ಮತ್ತೊಮ್ಮೆ ಕರ್ನಾಟಕದ ಕೇಂದ್ರಬಿಂದುವಾಗುತ್ತದೆ. ಈಗ ಬೆಳಕಿಗೆ ಬಂದಿರುವ ಹೊಸ ಪ್ರಕರಣಗಳು ನಾಲ್ಕನೆ ಅಲೆಯ ಮುನ್ಸೂಚನೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಕೋವಿಡ್ ಪರೀಕ್ಷೆಯ ಪಾಸಿಟಿವಿಟಿ ದರ ಕೂಡ ವಾರದಲ್ಲಿ ಶೇ. 1 ಮಾತ್ರ ಇದೆ. ಪಾಲಿಟಿವಿಟಿ ರೇಟ್ 5ಕ್ಕೆ ಮುಟ್ಟಿದರೆ ಆತಂಕ ಪಡಬೇಕಾಗುತ್ತದೆ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದರು ಎಂದು ಡೆಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಭಾರತೀಯ ಗಣಕ ಸಂಸ್ಥೆಯ ಸಂಶೋಧಕರ ತಂಡವೊಂದು ರೂಪಿಸಿರುವ ಮಾದರಿಯ ಎಣಿಕೆ ಪ್ರಕಾರ ಬೆಂಗಳೂರಿನಲ್ಲಿ ಕೋವಿಡ್ ವೃದ್ಧಿ ದರ ಕೇವಲ ಶೇ. 0.105 ಮಾತ್ರ ಇದೆ. ಇನ್ನೂ ಸಮಾಧಾನದ ಅಂಶ ಎಂದರೆ, ಬೆಂಗಳೂರಿನಲ್ಲಿ ಇರುವ 1474 ಸಕ್ರಿಯ ಪ್ರಕರಣಗಳ ಪೈಕಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಕೇವಲ ಎಂಟು ಮಾತ್ರ. ಸಾವು ದಾಖಲಾಗಿ ಬಹಳ ದಿನಗಳಾಗಿವೆ.
Recommended Video

ಬಿಬಿಎಂಪಿ ಅಧಿಕಾರಿ ಹೇಳುವುದೇನು?
ಬಿಬಿಎಂಪಿಯ ಸ್ಪೆಷಲ್ ಕಮಿಷನಲ್ ಡಾ. ಕೆ.ವಿ. ತ್ರಿಲೋಕ್ ಚಂದ್ರ ಅವರು, 'ನಿರಾಳವಾಗಿಯಂತೂ ಇರಲು ಸಾಧ್ಯವಿಲ್ಲ. ಯಾಕೆಂದರೆ ಇದೇ ರೀತಿ ಸೋಂಕಿನ ಗತಿ ಐದಾರು ದಿನಗಳ ಕಾಲ ಏರುತ್ತಲೆ ಇದ್ದರೆ ಆಗ ಆತಂಕ ಪಡಬೇಕಾಗಬಹುದು,' ಎಂದು ಹೇಳಿದ್ದಾರೆ.
ಮಾರ್ಚ್ 1ರಿಂದ ಇಲ್ಲಿಯವರೆಗೆ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾದ ರೋಗಿಗಳ ಸ್ಯಾಂಪಲ್ಗಳ ಪೈಕಿ 714 ಮಂದಿಯ ವರದಿ ಬಂದಿದೆ. ಅದರಲ್ಲಿ 574 ಜನರಲ್ಲಿ Ba.2 ಓಮೈಕ್ರಾನ್ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ. ಅಂದರೆ, ಶೇ. 82.70ರಷ್ಟು ಸೋಂಕಿತರಲ್ಲಿ ಈ ರೂಪಾಂತರಿ ಇದೆ. ಇನ್ನು, ದೆಹಲಿಯಲ್ಲಿ ಕಂಡು ಬಂದ Ba.2.12.1 ರೂಪಾಂತರಿ ತಳಿ ಬೆಂಗಳೂರಿನ ಸೋಂಕಿತರಲ್ಲಿ ಪತ್ತೆಯಾಗಿಲ್ಲ ಎಂದು ಬೆಂಗಳೂರಿನ ಹೆಲ್ತ್ ಕಮಿಷನರ್ ಡಿ ರಣದೀಪ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications